'ಮಹಾ' ಡ್ರಾಮಾದ ಅಖಾಡಕ್ಕೆ ಇಳಿದ ಉದ್ಧವ್ ಠಾಕ್ರೆ ಪತ್ನಿ; ಯಾರು ಈ ರಷ್ಮಿ?
ಮುಂಬೈ, ಜೂನ್ 26: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಹಾಗೇ ಮುಂದುವರಿದಿದೆ. ಶಿವಸೇನಾ ಪಕ್ಷದೊಳಗೆ ಏಕನಾಥ್ ಶಿಂದೆ ನಾಯಕತ್ವದಲ್ಲಿ ದಂಗೆ ಎದ್ದ ಶಾಸಕರು ಇನ್ನೂ ಕೂಡ ಅಸ್ಸಾಮ್ ರಾಜಧಾನಿ ಗುವಾಹಟಿ ನಗರದಲ್ಲಿ ಬೀಡುಬಿಟ್ಟಿದ್ದಾರೆ.
ಇತ್ತ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಲ್ಲದಕ್ಕೂ ಮಾನಸಿಕವಾಗಿ ಸಿದ್ಧವಾಗಿ ಕೂತಿದ್ದಾರೆ. ಸರಕಾರ ಉಳಿಯಲಿ ಬಿಡಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಧ್ಯೇಯದಲ್ಲಿ ಠಾಕ್ರೆ ಇದ್ದಾರೆ.
ಏಕನಾಥ್ ಶಿಂಧೆಗೆ ಬೆಂಬಲ: ಥಾಣೆ ಮಾಜಿ ಮೇಯರ್ ನರೇಶ್ ಮ್ಹಾಸ್ಕೆ ರಾಜೀನಾಮೆ
ಇದೇ ಹೊತ್ತಲ್ಲಿ ಉದ್ಧವ್ ಠಾಕ್ರೆ ಪತ್ನಿ ಅಖಾಡಕ್ಕೆ ಧುಮುಕಿದ್ದಾರೆ. ಗುವಾಹಟಿಯ ರೆಸಾರ್ಟ್ನಲ್ಲಿರುವ ಶಿವಸೇನಾ ಬಂಡಾಯ ಶಾಸಕರ ಮನವೊಲಿಸುವ ಪ್ರಯತ್ನಕ್ಕೆ ತಮ್ಮ ಪತಿ ಜೊತೆ ಕೈ ಜೋಡಿಸಿದ್ದಾರೆ.
ಉದ್ಧವ್ ಠಾಕ್ರೆ ಶಾಸಕರ ಜೊತೆ ಮೊಬೈಲ್ನಲ್ಲಿ ಮೆಸೇಜ್ಗಳ ಮೂಲಕ ಸಂಪರ್ಕದಲ್ಲಿದ್ದಾರೆ. ೨೦ಕ್ಕೂ ಹೆಚ್ಚು ರೆಬೆಲ್ ಶಾಸಕರ ಜೊತೆ ಠಾಕ್ರೆ ಸಂಪರ್ಕದಲ್ಲಿರುವುದು ತಿಳಿದುಬಂದಿದೆ. ಒಂದೆಡೆ ಉದ್ಧವ್ ಠಾಕ್ರೆ ಬಂಡಾಯ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ಇನ್ನೊಂದೆಡೆ ಉದ್ಧವ್ ಪತ್ನಿ ರಷ್ಮಿ ಠಾಕ್ರೆ ಬಂಡಾಯ ಶಾಸಕರ ಪತ್ನಿಯರ ಜೊತೆ ಸಂಪರ್ಕದಲ್ಲಿದ್ದಾರೆ.
ಬಂಡಾಯ ಶಾಸಕರು ಬಾಳಾಸಾಹೇಬ್ ಠಾಕ್ರೆ ಹೆಸರು ಬಳಸುವಂತಿಲ್ಲ: ಉದ್ಧವ್ ಠಾಕ್ರೆ
ಭಿನ್ನಮತದ ಹಾದಿ ಬಿಟ್ಟು ಮತ್ತೆ ವಾಪಸ್ ಬರುವಂತೆ ತಮ್ಮ ಪತಿಯಂದಿರಿಗೆ ಬುದ್ಧಿ ಹೇಳಿ ಎಂದು ಪತ್ನಿಯಂದಿರಿಗೆಲ್ಲಾ ರಷ್ಮಿ ಠಾಕ್ರೆ ಮನವಿ ಮಾಡುತ್ತಿರುವುದು ತಿಳಿದುಬಂದಿದೆ. ಪುರುಷ ಎಷ್ಟೇ ಹಠಮಾರಿತನ ತೋರಿದರೂ ನಾರಿಶಕ್ತಿ ಮುಂದೆ ಆಟ ನಡೆಯದು ಎಂದು ಇತಿಹಾಸ ಕೆಲ ಪಾಠಗಳು ಹೇಳುತ್ತವೆ. ರಷ್ಮಿ ಅಖಾಡಕ್ಕೆ ಧುಮುಕಿದ ಬಳಿಕ ಮಹಾರಾಷ್ಟ್ರದ ಹೈಡ್ರಾಮಕ್ಕೆ ತೆರೆಬೀಳುತ್ತದಾ ಎಂಬುದು ಕುತೂಹಲದ ಪ್ರಶ್ನೆ.
ಯಾರು ಈ ರಷ್ಮಿ?
ಉದ್ಧವ್ ಠಾಕ್ರೆ ಪತ್ನಿ ರಷ್ಮಿ ಠಾಕ್ರೆ ಮುಂಬೈನ ಮಧ್ಯಮ ಕುಟುಂಬದಲ್ಲಿ ಹುಟ್ಟಿದವರು. ಮುಳುಂದ್ನ ಕಾಲೇಜೊಂದರಲ್ಲಿ ಬಿಕಾಂ ಪದವಿ ಓದಿರುವ ಅವರು ಎಲ್ಐಸಿ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದವರು. ಈಗ ಉದ್ಧವ್ ಠಾಕ್ರೆಯನ್ನು ಮದುವೆಯಾದ ಬಳಿಕ 'ಸಾಮ್ನಾ' ಮತ್ತು 'ಮಾರ್ಮಿಕ್' ಎಂಬ ಪತ್ರಿಕೆಗಳಿಗೆ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಉದ್ಧವ್ ಠಾಕ್ರೆ ಮದುವೆಯಾಗಿದ್ದು...
ಉದ್ಧವ್ ಠಾಕ್ರೆ ಮುಂಬೈನ ಜೆಜೆ ಕಾಲೇಜಿನಲ್ಲಿ ಓದುವಾಗ ಮೊದಲ ಬಾರಿಗೆ ರಷ್ಮಿಯ ಪರಿಚಯವಾಗಿದೆ. ಠಾಕ್ರೆ ಸಹೋದರಿ ಜಯವಂತಿ ಮತ್ತು ರಷ್ಮಿ ಇಬ್ಬರೂ ಸ್ನೇಹಿತೆಯರಾಗಿದ್ದರು. ಜಯವಂತಿ ಮೂಲಕ ಉದ್ಧವ್ ಠಾಕ್ರೆ ಪರಿಚಯ ರಷ್ಮಿಗೆ ಆಗಿದೆ. ಇಬ್ಬರಿಗೂ ಪ್ರೇಮಾಂಕುರವಾಗಿ 1989ರಲ್ಲಿ ಮದುವೆ ಆಗಿದ್ದಾರೆ. ಶಿವಸೇನಾ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಮಹಾರಾಷ್ಟ್ರದಲ್ಲಿ ಒಂದು ವಿಶೇಷ ಹಿಡಿತ ಹೊಂದಿದ್ದ ಪಕ್ಷವಾಗಿತ್ತು. ಬಾಳಾ ಠಾಕ್ರೆ ಪ್ರಭಾವಕ್ಕೆ ಎಲ್ಲಾ ಪಕ್ಷಗಳವರು ತಲೆದೂಗಿಸುತ್ತಿದ್ದರು. ಅಂಥ ದೊಡ್ಡ ಮನೆತನಕ್ಕೆ ಸೊಸೆಯಾಗಿ ಮಧ್ಯಮ ಕುಟುಂಬದ ರಷ್ಮಿ ಹೋಗಿದ್ದು ದೊಡ್ಡ ವಿಚಾರ. ಇವರು ಬಹಳ ಬೇಗ ಆ ಮನೆಗೆ ಹೊಂದಿಕೊಂಡು ಎಲ್ಲರ ವಿಶ್ವಾಸ ಗಳಿಸಿದ್ದರು.
ಉದ್ಧವ್ ರಾಜಕೀಯಕ್ಕೆ ಬರಲು ರಷ್ಮಿ ಪ್ರೇರಣೆಯೇ?
ರಷ್ಮಿ ಠಾಕ್ರೆಯನ್ನು ಮದುವೆಯಾಗುವವರೆಗೂ ಉದ್ಧವ್ ಠಾಕ್ರೆ ಹೆಚ್ಚು ಪರಿಚಿತರಿರಲಿಲ್ಲ. ಶಿವಸೇನಾ ಎಂದರೆ ಅದು ಬಾಳಾ ಠಾಕ್ರೆ ಮಾತ್ರ ಎನ್ನುವಂತಿದ್ದ ಕಾಲ. ಉದ್ಧವ್ ಠಾಕ್ರೆ ಫೋಟೋಗ್ರಫಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದವರು. ರಾಜಕೀಯಕ್ಕೆ ಧುಮುಕಲು ಹಿಂದೇಟು ಹಾಕುತ್ತಿದ್ದ ಉದ್ಧವ್ಗೆ ಆ ದಾರಿಗೆ ಹೋಗಲು ಪ್ರೇರೇಪಿಸಿದವರು ಪತ್ನಿ ರಷ್ಮಿ ಎನ್ನಲಾಗುತ್ತದೆ.
ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆಯನ್ನೂ ರಾಜಕೀಯದಲ್ಲಿ ನೂಕುತ್ತಿರುವ ಶಕ್ತಿ ಎಂದರೆ ರಷ್ಮಿಯೇ. ಎನ್ಸಿಪಿ-ಕಾಂಗ್ರೆಸ್ ಜೊತೆ ಶಿವಸೇನಾ ಹೊಂದಾಣಿಕೆ ಮಾಡಿಕೊಳ್ಳುವ ಮುನ್ನ ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆಗಳೂ ಇದ್ದವು. ಹಾಗೊಂದು ವೇಳೆ ಆದಲ್ಲಿ ಅದಿತ್ಯನನ್ನು ಡಿಸಿಎಂ ಮಾಡಬೇಕೆಂದು ರಷ್ಮಿ ಠಾಕ್ರೆ ಯೋಜಿಸಿದ್ದರಂತೆ. ಎಂವಿಎ ಮೈತ್ರಿ ಸರಕಾರ ಆದಾಗಲೂ ಸಿಎಂ ಸ್ಥಾನಕ್ಕೆ ಆದಿತ್ಯ ಠಾಕ್ರೆ ಹೆಸರು ಕೇಳಿಬಂದಿತ್ತು. ಮಿತ್ರಪಕ್ಷಗಳು ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಸಿಎಂ ಆದರು.
ಕುತೂಹಲ ಎಂದರೆ ಉದ್ಧವ್ ಠಾಕ್ರೆ ಎರಡನೇ ಮಗ ಅಪ್ಪನ ಹಾಗೆ ಫೋಟೋಗ್ರಾಫರ್ ಆಗಿದ್ದಾರೆ. ವೈಲ್ಡ್ಲೈಫ್ ಫೋಟೋಗ್ರಫಿಯಲ್ಲಿ ಆಸಕ್ತರಾಗಿದ್ದು ಆ ನಿಟ್ಟನಲ್ಲೇ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಮ್ಮನ ದೆಸೆಯಿಂದ ಅವರೂ ರಾಜಕೀಯಕ್ಕೆ ಬಂದರೆ ಅಚ್ಚರಿ ಇಲ್ಲ.
ಶಿವಸೇನಾ ಸಂಘಟನೆಯಲ್ಲಿ ದೊಡ್ಡ ಶಕ್ತಿ ರಷ್ಮಿ
ರಷ್ಮಿ ಠಾಕ್ರೆಯನ್ನು ಶಿವಸೇನಾ ಕಾರ್ಯಕರ್ತರು ವಾಹಿನಿಸಾಹೇಬ್ ಎಂದೇ ಪ್ರೀತಿಯಿಂದ ಕರೆಯುತ್ತಾರಂತೆ. ಇವರು ಕಾರ್ಯಕರ್ತರ ಪಾಲಿಗೆ ದೇವತೆ. ಅದರಲ್ಲೂ ಮಹಿಳಾ ನಾಯಕರು ಮತ್ತು ಕಾರ್ಯಕರ್ತರಿಗೆ ರಷ್ಮಿಯೇ ಸಂಪರ್ಕ ಕೊಂಡಿ. ಉದ್ಧವ್ ಜೊತೆ ಮಾತನಾಡಲು ಅಂಜುವ ಮಹಿಳೆಯರು ರಷ್ಮಿಯನ್ನು ಭೇಟಿಯಾಗಿ ಅವರ ಮೂಲಕ ತಮ್ಮ ಅಹವಾಲುಗಳನ್ನು ಸಲ್ಲಿಸುತ್ತಾರಂತೆ. ಎಲ್ಲರ ಮಾತುಗಳನ್ನು ರಷ್ಮಿ ಮುಕ್ತವಾಗಿ ಆಲಿಸಿ ಸಮಾಧಾನ ಮಾಡಿ ಕಳುಹಿಸುತ್ತಾರಂತೆ. ಅಂತೆಯೇ ಶಿವಸೇನಾ ಕಾರ್ಯಕರ್ತರು ಮತ್ತು ನಾಯಕರಿಗೆ ರಷ್ಮಿ ಎಂದರೆ ಪ್ರೀತಿ ಮತ್ತು ಗೌರವ.
ರಾಜಕೀಯ ಮುನ್ನೆಲೆಗೆ ಬರದೇ ತೆರೆಮರೆಯಲ್ಲಿದ್ದುಕೊಂಡೇ ಎಲ್ಲವನ್ನೂ ನಿಭಾಯಿಸುತ್ತಾರೆ. ಶಿವಸೇನಾ ಪಕ್ಷದೊಳಗೆ ಏನೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಿದ್ದರೂ ಉದ್ಧವ್ ಠಾಕ್ರೆ ತಮ್ಮ ಪತ್ನಿ ರಷ್ಮಿ ಮತ್ತು ಮಗ ಆದಿತ್ಯನ ಜೊತೆ ಚರ್ಚಿಸಿಯೇ ತೆಗೆದುಕೊಳ್ಳುತ್ತಾರಂತೆ.
(ಒನ್ಇಂಡಿಯಾ ಸುದ್ದಿ)