ಎನ್ ಸಿಪಿ ಮುಖಂಡ ಧನಂಜಯ ಮುಂಡೆ ವಿರುದ್ಧ ಗಾಯಕಿ ಅತ್ಯಾಚಾರ ಆರೋಪ
ಮುಂಬೈ, ಜನವರಿ 13: ಎನ್ ಸಿಪಿ ಮುಖಂಡ ಹಾಗೂ ಮಹಾರಾಷ್ಟ್ರ ರಾಜ್ಯ ಸಚಿವ ಧನಂಜಯ ಮುಂಡೆ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದ್ದು, 38 ವರ್ಷದ ಗಾಯಕಿ ರೇಣು ಶರ್ಮಾ ಎಂಬುವರು ಈ ಆರೋಪ ಮಾಡಿದ್ದಾರೆ.
"ನನ್ನ ಮೇಲೆ ಸಚಿವ ಧನಂಜಯ ಮುಂಡೆ ನಿರಂತರ ಅತ್ಯಾಚಾರ ಎಸಗಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನನಗೆ ನ್ಯಾಯ ಕೊಡಿಸಿ" ಎಂದು ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಗೆ ಬರೆದಿರುವ ಪತ್ರದಲ್ಲಿ ಗಾಯಕಿ ರೇಣು ಶರ್ಮಾ ಆರೋಪಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಕೂಡ ಈ ಬಗ್ಗೆ ಬರೆದುಕೊಂಡಿರುವ ರೇಣು ಶರ್ಮಾ, ತನಗೆ ಸಹಾಯ ಮಾಡುವಂತೆ ಪ್ರಧಾನಿ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ದೇಂವೇಂದ್ರ ಫಡ್ನವಿಸ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಬಿಜೆಪಿಯ ಮಾಜಿ ಸಚಿವ ಚಿನ್ಮಯಾನಂದ ವಿರುದ್ಧದ ಅತ್ಯಾಚಾರ ಆರೋಪ ಹಿಂಪಡೆದ ಯುವತಿ
ಜನವರಿ 11ರಂದು ದೂರು ದಾಖಲಿಸಲು ಹೋಗಿದ್ದೆ. ಆದರೆ ಅಲ್ಲಿ ದೂರು ಸ್ವೀಕರಿಸಿಲ್ಲ. 1997ರಿಂದಲೂ ಧನಂಜಯ ಮುಂಡೆ ನನಗೆ ಪರಿಚಯ. ಆಗಿನಿಂದ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಗಾಯಕಿಯಾಗಲು ಅವಕಾಶ ಕೊಡಿಸುತ್ತೇನೆ ಎಂದು ಮೋಸ ಮಾಡಿದ್ದಾರೆ. ಈಗ ಮದುವೆಯಾಗುವುದಿಲ್ಲ ಎನ್ನುತ್ತಿದ್ದಾರೆ" ಎಂದು ದೂರಿದ್ದಾರೆ.
"2008ರಲ್ಲಿ ಅತ್ಯಾಚಾರ ನಡೆಸಿ ವಿಡಿಯೋ ಮಾಡಿಕೊಂಡಿದ್ದರು. ಆನಂತರ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ. 2019ರಲ್ಲಿ ರೇಣು ಶರ್ಮಾ ಅವರನ್ನು ಮದುವೆಯಾಗುವುದಿಲ್ಲ ಎಂದಿದ್ದಾರೆ. ಅಲ್ಲದೆ, ಹೊರಗೆ ಈ ಸಂಗತಿ ಬಾಯಿಬಿಟ್ಟರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಸಿದ್ದಾರೆ" ಎಂದು ಗಾಯಕಿ ಪರ ವಕೀಲ ರಮೇಶ್ ತ್ರಿಪಾಠಿ ತಿಳಿಸಿದ್ದಾರೆ.
ಈ ಆರೋಪವನ್ನು ತಳ್ಳಿ ಹಾಕಿರುವ ಸಚಿವ, "ನನ್ನ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದೆ. ಇದೆಲ್ಲ ಸುಳ್ಳು. 2003ರಿಂದ ರೇಣು ಶರ್ಮಾ ಅಕ್ಕನ ಜೊತೆ ನನಗೆ ಸಂಬಂಧವಿದೆ. ನಮಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಈ ಸಂಗತಿ ನನ್ನ ಕುಟುಂಬಕ್ಕೂ ತಿಳಿದಿದೆ. ನನ್ನಿಂದ ಹಣ ಪಡೆಯಲು ಹೀಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ. ಕಳೆದ ನವೆಂಬರ್ ನಲ್ಲಿ ರೇಣು ವಿರುದ್ಧ ತಾವು ದೂರು ದಾಖಲಿಸಿರುವುದಾಗಿಯೂ ತಿಳಿಸಿದ್ದಾರೆ.