ಇಡಿ ವಿಚಾರಣೆಗೆ ರಾಜ್ ಠಾಕ್ರೆ ಹಾಜರು, ಮುಂಬೈನಲ್ಲಿ ಕರ್ಫ್ಯೂ
ಮುಂಬೈ, ಆಗಸ್ಟ್ 22: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ ಇಂದು ಇಡಿ ಮುಂದೆ ವಿಚಾರಣೆಗೆ ಹಾಜರಾದರು. ಅವರೊಂದಿಗೆ ಪತ್ನಿ ಶರ್ಮಿಳಾ ಮತ್ತು ಮಗ ಅಮಿತ್, ಮಗಳು ಊರ್ವಶಿ ಸಹ ವಿಚಾರಣೆಗೆ ಹಾಜರಾದರು.
ರಾಜ್ ಠಾಕ್ರೆ ಅವರು ವಿಚಾರಣೆಗೆ ಹಾಜರಾಗಲು ಬರುವ ಮುನ್ನವೇ ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈನಿಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಕೆಲವು ಎಂಎನ್ಎಸ್ ಮುಖಂಡರನ್ನು ಸಹ ಈಗಾಗಲೇ ಬಂಧಿಸಲಾಗಿದೆ.
14 ವರ್ಷದಲ್ಲಿ ಮೊದಲ ಬಾರಿಗೆ ರಾಜ್ ಠಾಕ್ರೆ ದೆಹಲಿಗೆ, ಸೋನಿಯಾ ಜತೆ ಚರ್ಚೆ
ಐಎಲ್,ಎಫ್ಎಸ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿಯು ರಾಜ್ ಠಾಕ್ರೆ ಅವರಿಗೆ ಸಮನ್ಸ್ ನೀಡಿತ್ತು. ಇದನ್ನು ವಿರೋಧಿಸಿ ಎಂಎನ್ಎಸ್ ಪಕ್ಷದ ಕಾರ್ಯಕರ್ತರು ಮಹಾರಾಷ್ಟ್ರ ಬಂದ್ಗೆ ಕರೆ ನೀಡಿದ್ದರು. ಆದರೆ ರಾಜ್ ಠಾಕ್ರೆ ಮನವಿ ಮಾಡಿದ ನಂತರ ಬಂದ್ ವಾಪಸ್ ಪಡೆಯಲಾಗಿದೆ.
ಐಎಲ್,ಎಫ್ಎಸ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಾರಾಷ್ಟ್ರದ ಮಾಜಿ ಸಿಎಂ ಮಹೇಶ್ ಜೋಷಿ ಮಗ ಉಮೇಶ್ ಜೋಷಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. 2005 ರಲ್ಲಿ ಉಮೇಶ್ ಜೋಷಿ, ರಾಜ್ ಠಾಕ್ರೆ ಮತ್ತು ರಾಜನ್ ಶಿರೋಡ್ಕರ್ ಅವರುಗಳು ಒಟ್ಟಾಗಿ ಐಎಲ್ ಆಂಡ್ ಎಫ್ಎಸ್ ಸಂಸ್ಥೆಯ ಜೊತೆ ಸೇರಿ 421 ಕೋಟಿ ನೀಡಿ ಸ್ಥಳವೊಂದನ್ನು ಖರೀದಿಸಿ ಅಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿದರು. 225 ಕೋಟಿ ಹಣವನ್ನು ಈ ಯೋಜನೆಗೆ ಐಎಲ್ ಆಂಡ್ ಎಫ್ಎಸ್ ಹೂಡಿಕೆ ಮಾಡಿತ್ತು.
2008 ರಲ್ಲಿ ಐಎಲ್ ಆಂಡ್ ಎಫ್ಎಸ್ ಸಂಸ್ಥೆಯು ತನ್ನ ಪಾಲಿನ ಶೇರುಗಳನ್ನು 90 ಕೋಟಿಗೆ ಬಿಕರಿಗಿಟ್ಟು ನಷ್ಟವನ್ನು ತೋರಿಸಿತು. ಅದೇ ವರ್ಷ ರಾಜ್ ಠಾಕ್ರೆ ಸಹ ತಮ್ಮ ಪಾಲಿನ ಶೇರುಗಳನ್ನು ಮಾರಾಟ ಮಾಡಿದರು. ಆದರೆ ಒಕ್ಕೂಟವು ಅವರು ಲಾಭ ಮಾಡಿದ್ದಾರೆ ಎಂದು ಆರೋಪ ಮಾಡಿತ್ತು.