ಮಹಾರಾಷ್ಟ್ರ : ವಿಪಕ್ಷ ನಾಯಕ ಸ್ಥಾನಕ್ಕೆ ರಾಧಾಕೃಷ್ಣ ರಾಜೀನಾಮೆ
ಮುಂಬೈ, ಏಪ್ರಿಲ್ 26 : ಮಹಾರಾಷ್ಟ್ರ ಹಿರಿಯ ಕಾಂಗ್ರೆಸ್ ನಾಯಕ, ವಿರೋಧ ಪಕ್ಷದ ನಾಯಕ ರಾಧಾಕೃಷ್ಣ ವಿಖೇ ಪಾಟೀಲ್ ಅವರು ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿ ಸೇರಲಿದ್ದಾರೆಯೇ? ಎಂಬ ಚರ್ಚೆ ಆರಂಭವಾಗಿದೆ.
ಲೋಕಸಭಾ ಚುನಾವಣೆ ವೇಳೆ ಹಿರಿಯ ನಾಯಕರು ಪಕ್ಷ ತೊರೆಯಲು ಮುಂದಾಗಿರುವುದು ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಕಳೆದ ತಿಂಗಳು ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿ ಘೋಷಣೆ ಮಾಡುವ ವೇಳೆಯೂ ರಾಧಾಕೃಷ್ಣ ವಿಖೇ ಪಾಟೀಲ್ ಗೈರಾಗಿದ್ದರು.
ಎನ್ಸಿಪಿ ನಾಯಕ ಶರದ್ ಪವಾರ್ ಮತ್ತು ರಾಧಾಕೃಷ್ಣ ವಿಖೇ ಪಾಟೀಲ್ ತಂದೆ ದಿ.ಬಾಲಾಸಾಹೇಬ್ ವಿಶೇ ಪಾಟೀಲ್ ನಡುವೆ ರಾಜಕೀಯ ದ್ವೇಷವಿತ್ತು. ಆದ್ದರಿಂದ, ಅವರು ಮೈತ್ರಿ ಬಳಿಕ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪುತ್ರ ಬಿಜೆಪಿ ಸೇರ್ಪಡೆ : ರಾಧಾಕೃಷ್ಣ ವಿಖೇ ಪಾಟೀಲ್ ಪುತ್ರ ಸುಜಯ್ ಅವರು ಕಳೆದ ತಿಂಗಳು ಬಿಜೆಪಿ ಸೇರಿದ್ದಾರೆ. ಅಹಮದಾನಗರ್ ಲೋಕಸಭಾ ಕ್ಷೇತ್ರದಿಂದ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
ರಾಧಾಕೃಷ್ಣ ವಿಖೇ ಪಾಟೀಲ್ ಅವರು ಈಗ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ರಾಧಾಕೃಷ್ಣ ವಿಖೇ ಪಾಟೀಲ್ ಬಿಜೆಪಿ ಸೇರಬಹುದು ಎಂಬ ಸುದ್ದಿ ಹಬ್ಬಿದೆ.
ಶುಕ್ರವಾರ ಅಹಮದಾನಗರ್ನಲ್ಲಿ ರಾಹುಲ್ ಗಾಂಧಿ ಅವರ ಸಮಾವೇಶ ನಿಗದಿಯಾಗಿದೆ. ಇದಕ್ಕೂ ಒಂದು ದಿನ ಮೊದಲು ಗುರುವಾರ ಸಂಜೆ ರಾಧಾಕೃಷ್ಣ ವಿಖೇ ಪಾಟೀಲ್ ಅವರು ರಾಜೀನಾಮೆ ನೀಡಿರುವುದು ಕುತೂಲಹಲಕ್ಕೆ ಕಾರಣವಾಗಿದೆ.