ಕೊರೊನಾವೈರಸ್ ಸುನಾಮಿ ಎದುರಿಸಲು ಮುಂಬೈ ಸನ್ನದ್ಧ; ಮೇಯರ್ ಮಾತು
ಮುಂಬೈ, ಜನವರಿ 4: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಆತಂಕದ ನಡುವೆ ಕೊವಿಡ್-19 ಸೋಂಕಿನ ಅಲೆಯನ್ನು ಎದುರಿಸಲು ವಾಣಿಜ್ಯ ನಗರಿ ಸಮರ್ಥವಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ಮೇಯರ್ ಕಿಶೋರಿ ಪಡ್ನೇಕರ್ ತಿಳಿಸಿದ್ದಾರೆ.
"ಸಾಂಕ್ರಾಮಿಕ ಪಿಡುಗಿನ ವಿರುದ್ಧದ ನಮ್ಮ ಹೋರಾಟದಲ್ಲಿ ಡೆಲ್ಟಾ ರೂಪಾಂತರಿ ತಳಿಯ ನಂತರದಲ್ಲಿ ಇದೀಗ ಓಮಿಕ್ರಾನ್ ರೂಪಾಂತರ ವೈರಸ್ ಹುಟ್ಟಿಕೊಂಡಿದೆ. ನಮ್ಮ ಆಸ್ಪತ್ರೆ ಮತ್ತು ಕೊವಿಡ್-19 ಕೇಂದ್ರಗಳು ಅಣಿಯಾಗಿವೆ. ಸ್ಥಿರ ವೇಗದಲ್ಲಿಯೇ ಕೊವಿಡ್-19 ಲಸಿಕೆಯನ್ನೂ ವಿತರಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ. ಪೊಲೀಸರು ನಿಯಮ ಉಲ್ಲಂಘಿಸುವವರ ಮೇಲೆ ಕಣ್ಣಿಟ್ಟಿದ್ದಾರೆ," ಎಂದು ಮೇಯರ್ ಕಿಶೋರಿ ಪಡ್ನೇಕರ್ ಹೇಳಿದ್ದಾರೆ.
ಓಮಿಕ್ರಾನ್ ನಂತರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಅಂತ್ಯ!?
ಕಳೆದ ಒಂದು ವಾರದ ಹಿಂದೆಯಷ್ಟೇ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್, "ಹೊಸ ಸಾಂಕ್ರಾಮಿಕ ರೂಪಾಂತರದಿಂದಾಗಿ ಜಗತ್ತಿನಾದ್ಯಂತ ಕೊವಿಡ್-19 ಪ್ರಕರಣಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಲಿದೆ," ಎಂದು ಎಚ್ಚರಿಕೆ ನೀಡಿದ್ದರು. "ಒಮಿಕ್ರಾನ್ ರೂಪಾಂತರ ತಳಿಯು, ಡೆಲ್ಟಾ ರೂಪಾಂತರದ ರೀತಿಯಲ್ಲಿ ಅದೇ ಸಮಯದಲ್ಲಿ ಹೆಚ್ಚು ಹರಡಿಕೊಳ್ಳುವ ಮೂಲಕ, ಪ್ರಕರಣಗಳು ಸುನಾಮಿ ವೇಗದಲ್ಲಿ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ ಎಂಬುದೇ ನನ್ನ ಕಾಳಜಿಗೆ ಕಾರಣವಾಗಿದೆ," ಎಂದು ಅವರು ಹೇಳಿದ್ದರು.
ಕೊವಿಡ್-19 ಸುನಾಮ ಎದುರಿಸಲು ಸಿದ್ಧ:
ಮುಂಬೈ ನಗರದಲ್ಲಿ ಹಠಾತ್ ಬೆಳವಣಿಗೆಯಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದರೆ ಏನು ಕಥೆ ಎಂಬ ಪ್ರಶ್ನೆಗೆ ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ಉತ್ತರಿಸಿದ್ದಾರೆ. "ನಾವು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದೇವೆ. ಜಂಬೋ ಕ್ವಾರಂಟೇನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ನಗರ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ಹರಡುವಿಕೆ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಕೊರೊನಾವೈರಸ್ ಸುನಾಮಿ ವೇಗದಲ್ಲಿ ಹರಡಲು ಆರಂಭಿಸಿದರೆ ಅದನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ," ಎಂದು ತಿಳಿಸಿದ್ದಾರೆ.
ಎರಡನೇ ಅಲೆಯಿಂದ ಪಾಠ ಕಲಿತಿದ್ದೇವೆ:
ಕೊರೊನಾವೈರಸ್ ಎರಡನೇ ಅಲೆಯ ಸಮಯದಲ್ಲಿ, ನಗರವು ಆಸ್ಪತ್ರೆಯ ಹಾಸಿಗೆಗಳು ಮತ್ತು ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಎದುರಿಸಿತು. ಅಂದೇ ನಾವು ಪಾಠಗಳನ್ನು ಕಲಿತಿದ್ದೇವೆ ಎಂದು ಒತ್ತಿ ಹೇಳಿದ ಮೇಯರ್, "ನಾವು ಕಳೆದ ಬಾರಿ ಅಂತರವನ್ನು ಗಮನಿಸಿದ್ದೇವೆ. 30,000ಕ್ಕೂ ಹೆಚ್ಚು ಹಾಸಿಗೆಗಳು - ಆಸ್ಪತ್ರೆಯ ಹಾಸಿಗೆಗಳನ್ನು ಹೊರತುಪಡಿಸಿ - ಪ್ರಸ್ತುತ ಅಲ್ಲಿ ಆಮ್ಲಜನಕ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಸಿಬ್ಬಂದಿ ಕೊರತೆಯೂ ಇಲ್ಲ, ನಾವು ಮೂರನೇ ಅಲೆಗೆ ಸಿದ್ಧರಾಗಿದ್ದೇವೆ," ಎಂದು ಹೇಳಿದ್ದಾರೆ.
ಲಕ್ಷಣರಹಿತರಲ್ಲಿ ಕೊರೊನಾವೈರಸ್ ಸೋಂಕು:
ಮುಂಬೈ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ನಾಲ್ಕು ಪಟ್ಟು ವೇಗವಾಗಿ ಏರಿಕೆ ಆಗುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ಪೈಕಿ ಬಹುತೇಕ ಸೋಂಕಿತರು ಲಕ್ಷಣರಹಿತರೇ ಆಗಿದ್ದಾರೆ ಎಂದು ಅವರು ಒತ್ತಿ ಹೇಳಿದ್ದಾರೆ. ಸೋಮವಾರ ರಾಜ್ಯದಲ್ಲಿ ಒಟ್ಟು 12,160 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 8,082 ಪ್ರಕರಣಗಳು ಮುಂಬೈ ನಗರವೊಂದರಲ್ಲೇ ವರದಿಯಾಗಿವೆ. ಆದಾಗ್ಯೂ, ಅವರಲ್ಲಿ ಶೇಕಡಾ 90ರಷ್ಟು ರೋಗಲಕ್ಷಣಗಳನ್ನು ಹೊಂದಿರಲಿಲ್ಲ ಎಂದು ಅಧಿಕೃತ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಕೊವಿಡ್-19 ಪರೀಕ್ಷೆ ಹೆಚ್ಚಳದ ಭರವಸೆ:
ಮುಂಬೈ ನಗರ ಸೇರಿದಂತೆ ಮಹಾರಾಷ್ಟ್ರದಲ್ಲಿ ಕೊವಿಡ್-19 ಸೋಂಕು ಪರೀಕ್ಷೆ ವೇಗವನ್ನು ಹೆಚ್ಚಿಸಲಾಗುವುದು ಎಂಬು ಮೇಯರ್ ಕಿಶೋರಿ ಪಡ್ನೇಕರ್ ಭರವಸೆ ನೀಡಿದ್ದಾರೆ. ನಾವು ಸದಾ ಅಲರ್ಟ್ ಆಗಿದ್ದೇವೆ. ವಿಮಾನ ಪ್ರಯಾಣಿಕರು ಕಡ್ಡಾಯವಾಗಿ RT-PCR ಪರೀಕ್ಷೆಗೊಳಪಡಬೇಕು, ಪರೀಕ್ಷೆಯ ವರದಿ ಬರುವವರೆಗೂ ಹೊರಗೆ ಹೋಗುವಂತಿಲ್ಲ. ಇನ್ನು, ಹಗಡು ಹತ್ತುವುದಕ್ಕೂ RT-PCR ಪರೀಕ್ಷಾ ವರದಿ ಕಡ್ಡಾಯವಾಗಿರುತ್ತದೆ. ಒಂದು ವೇಳೆ ಅವರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಲ್ಲಿ, ಅವರನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೊಳಪಡಿಸಲಾಗುವುದು, ಈ ಅವಧಿಯಲ್ಲಿ ಅವರನ್ನು ಕ್ವಾರೆಂಟೇನ್ ಮಾಡಲು, ಕೇಂದ್ರಗಳು ಮತ್ತು ಹೋಟೆಲ್ಗಳನ್ನು ಅಲ್ಲಿ ಪಟ್ಟಿ ಮಾಡಲಾಗಿರುತ್ತದೆ," ಎಂದು ಕಿಶೋರಿ ಪಡ್ನೇಕರ್ ಮಾಹಿತಿ ನೀಡಿದ್ದಾರೆ.