ತೀವ್ರ ಕುತೂಹಲಕ್ಕೆ ಕಾರಣವಾಯ್ತು ಶರದ್ ಪವಾರ್, ಪ್ರಶಾಂತ್ ಕಿಶೋರ್ ಭೇಟಿ
ಮುಂಬೈ, ಜೂನ್ 11: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಭೇಟಿ ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ತಂತ್ರಗಾರನಾಗಿ ಕೆಲಸ ಮಾಡಿದ್ದ ಪ್ರಶಾಂತ್ ಡಿಎಂಸಿ ಮತ್ತು ಡಿಎಂಕೆ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಫಲಿತಾಂಶದ ಬಳಿಕ ನಡೆದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ತಾನು ನಿವೃತ್ತಿ ಪಡೆಯುವುದಾಗಿ ತಿಳಿಸಿದ್ದರು.
ಪ್ರಶಾಂತ್ ಕಿಶೋರ್ ಅವರು ಮುಂಬೈಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಶುಕ್ರವಾರ ಭೇಟಿಯಾದರು. ಪವಾರ್ ಅವರ ದಕ್ಷಿಣ ಮುಂಬೈ ನಿವಾಸದಲ್ಲಿ ನಡೆದ ಈ ಸಭೆ ರಾಜಕೀಯ ವಲಯಗಳಲ್ಲಿ ಭಾರಿ ಊಹಾಪೋಹಗಳಿಗೆ ಕಾರಣವಾಗಿದೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಸೋಲಿಸುವ ಸಲುವಾಗಿ 2022 ರ ಉತ್ತರ ಪ್ರದೇಶ ಚುನಾವಣೆ ಮತ್ತು 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ವಿರೋಧ ಪಕ್ಷಗಳು ಮತ್ತೊಮ್ಮೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆಯೇ ಎಂದು ಊಹಿಸಲಾಗುತ್ತಿದೆ.
ಕಿಶೋರ್-ಪವಾರ್ ಸಭೆಯು ಶಿವಸೇನೆಯ ಉನ್ನತ ನಾಯಕರ ಹಿನ್ನೆಲೆಯಲ್ಲಿ ಬಂದಿದ್ದು, ಅವರು ಈಗ ರಾಜಕೀಯವಾಗಿ ಒಟ್ಟಿಗೆ ಇಲ್ಲದಿದ್ದರೂ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಂಬಂಧ ಮುರಿದುಹೋಗಿಲ್ಲ ಎಂದಿದ್ದಾರೆ.
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದ ಮಮತಾ ಬ್ಯಾನರ್ಜಿ ಮತ್ತು ಎಂ.ಕೆ. ಸ್ಟಾಲಿನ್ ಅವರಿಗೆ ಬೆಂಬಲ ನೀಡಿದ ಪ್ರತಿಯೊಬ್ಬ ನಾಯಕರನ್ನು ಕಿಶೋರ್ ಭೇಟಿ ಮಾಡುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಪ್ರಶಾಂತ್ ಕಿಶೋರ್ ಅವರು ಶರದ್ ಪವಾರ್ ಅವರನ್ನು ಭೇಟಿಯಾಗಿದ್ದರು ಎಂದು ಒಂದೆಡೆ ಹೇಳಲಾಗುತ್ತಿದೆ.
ಬಿಜೆಪಿ ಜೊತೆಗಿನ ಸಂಬಂಧದ ಬಗ್ಗೆ ಬಹಿರಂಗವಾಗಿಯೇ ಮಾತನಾಡಿದ್ದ ಸಿಎಂ ಉದ್ಧವ್ ಠಾಕ್ರೆ, "ನಾವು ರಾಜಕೀಯವಾಗಿ ಒಟ್ಟಿಗೆ ಇಲ್ಲದಿರಬಹುದು, ಆದರೆ ಇದರರ್ಥ ನಮ್ಮ ಸಂಬಂಧವು ಮುರಿದುಹೋಗಿದೆ ಎಂದಲ್ಲ.
ನಾನು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಲು ಹೋಗಲಿಲ್ಲ. ಆದ್ದರಿಂದ, ನಾನು ಅವರನ್ನು ಪ್ರತ್ಯೇಕವಾಗಿ ಭೇಟಿಯಾದರೆ, ಅದರಲ್ಲಿ ಯಾವುದೇ ತಪ್ಪಿಲ್ಲ" ಎಂದು ಹೇಳುವ ಮೂಲಕ ಶಿವಸೇನೆ ಪಕ್ಷದ ಉನ್ನತ ನಾಯಕ ಉದ್ಧವ್ ಠಾಕ್ರೆ ಬಿಜೆಪಿ ಪರವಾದ ಹೇಳಿಕೆ ನೀಡಿದ್ದು ಮಹಾ ಅಗಾಡಿ ಮೈತ್ರಿಯಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ಬಂಗಾಳ ಮತ್ತು ತಮಿಳುನಾಡು ಚುನಾವಣೆಯಲ್ಲಿ ತಾನು ಹಾಗೂ ತನ್ನ ಸಂಸ್ಥೆ ಕೆಲಸ ಮಾಡಿದ್ದರ ಬಗ್ಗೆ ಪ್ರಶಾಂತ್ ಕಿಶೋರ್ ಬಹಿರಂಗವಾಗಿ ಘೋಷಿಸಿದ್ದರೂ ಸಹ, ಶರದ್ ಪವಾರ್ ಅವರ ದಕ್ಷಿಣ ಮುಂಬೈ ನಿವಾಸದಲ್ಲಿ ಇಬ್ಬರೂ ಸಭೆ ನಡೆಸಿರುವುದು ಹಲವು ವದಂತಿಗಳಿಗೆ ನಾಂದಿ ಹಾಡಿದೆ.