ಅನಿಶ್ಚಿತತೆಯಲ್ಲಿ ಉದ್ದವ್ ಠಾಕ್ರೆ ಭವಿಷ್ಯ: 'ಕರ್ಮ' ಟ್ರೆಂಡಿಂಗ್
ಮಹಾರಾಷ್ಟ್ರ ರಾಜಕೀಯದಲ್ಲಿ ಉತ್ತರ ದಕ್ಷಿಣ ಧೃವದಂತಿದ್ದ ಮೂರು ಪಕ್ಷಗಳು ಸೇರಿ ರಚನೆಯಾಗಿರುವ ಉದ್ದವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರಕಾರ ಅನಿಶ್ಚಿತತೆಯಲ್ಲಿದೆ. ಶಿವಸೇನೆಯ ಶಾಸಕರು ಗುವಹಾಟಿಯಲ್ಲಿ ಕೂತು ಬಂಡಾಯ ಘೋಷಣೆ ಮಾಡಿದ್ದರಿಂದ ಸರಕಾರ ಪತನದ ಅಂಚಿನಲ್ಲಿದೆ.
ತಮ್ಮ ಶಾಸಕರನ್ನು ಉದ್ದೇಶಿಸಿ ಸಿಎಂ ಠಾಕ್ರೆ ಆಡಿರುವ ಭಾವನಾತ್ಮಕ ಮಾತಿಗೆ ಶಿವಸೇನೆ ಶಾಸಕರು ಕರಗುವ ಸಾಧ್ಯತೆ ಕಮ್ಮಿ. ಹಾಗಂತ, ಸರಕಾರವನ್ನು ಉರುಳಿಸಲು ಇದೇನು ಮೊದಲ ಪ್ರಯತ್ನವಲ್ಲ, ಹಿಂದೆಯೇ ನಡೆದಿದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
'ನನ್ನ ರಾಜೀನಾಮೆ ಪತ್ರ ರೆಡಿ ಇದೆ'- ಮಹಾ ಸಿಎಂ ಉದ್ದವ್ ಠಾಕ್ರೆ
ಇತ್ತೀಚೆಗೆ ನಡೆದ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದಾಗಲೇ ಇನ್ನೊಂದು ಸುತ್ತಿನ ಬಂಡಾಯ ನಡೆಯಬಹುದು ಎನ್ನುವ ಸುಳಿವು ಠಾಕ್ರೆಗೆ ಸಿಕ್ಕಿತ್ತು. ಅದರೆ, ಅದಕ್ಕೆ ಮದ್ದು ಕಂಡು ಹಿಡಿಯಲಾಗದೇ ಇದ್ದಿದ್ದರಿಂದ ಅತಂತ್ರ ಪರಿಸ್ಥಿತಿ ಎದುರಾಗಿದೆ.
ಮಹಾರಾಷ್ಟ್ರದ ಈ ಬೆಳವಣಿಗೆಯ ನಂತರ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ 'ಕರ್ಮ' ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ. ಠಾಕ್ರೆ ಸಿಎಂ ಆದ ನಂತರ ನಡೆದ ಘಟನೆಯನ್ನು ಟ್ವಿಟ್ಟಿಗರು ಎಳೆದು ತಂದು, ಠಾಕ್ರೆಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎನ್ನುವ ರೀತಿಯಲ್ಲಿ ಕರ್ಮ ಟ್ಯಾಗ್ ನಲ್ಲಿ ಪ್ರತಿಕ್ರಿಯೆ ಹಾಕುತ್ತಿದ್ದಾರೆ. ಅದರ ಕೆಲವೊಂದು ಝಲಕ್ ಅನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಶಿವಸೇನೆಯ ಪ್ರಭಾವಿ ಮುಖಂಡ ಏಕನಾಥ್ ಶಿಂಧೆ
ಸದ್ಯ ಬಂಡಾಯ ಎದ್ದಿರುವ ಶಿವಸೇನೆಯ ಪ್ರಭಾವಿ ಮುಖಂಡ ಏಕನಾಥ್ ಶಿಂಧೆ ಹೇಳುವ ಪ್ರಕಾರ, ನಾವು ಬಾಳಾ ಸಾಹೇಬ್ ಠಾಕ್ರೆ ಅವರ ಶಿವಸೇನೆಯನ್ನು ತೊರೆದಿಲ್ಲ ಎನ್ನುವುದು. ಅವರ ಸ್ಪಷ್ಟ ಉದ್ದೇಶ ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಮೈತ್ರಿ ತೊರೆಯಬೇಕು ಎನ್ನುವುದು. ಈ ವಿಚಾರದಲ್ಲಿ ಹಲವರು ಟ್ವೀಟ್ ಮಾಡುತ್ತಿದ್ದು, "ಠಾಕ್ರೆ ಎನ್ನುವ ಸರ್ ನೇಮ್ ಗೆ ಅವಮಾನ ಮಾಡಬೇಡಿ, ಅವರನ್ನು (ಸಿಎಂ) ಬರೀ ಉದ್ದವ್ ಎಂದು ಮಾತ್ರ ಕರೆಯಿರಿ, ಕರ್ಮ ಎಂದು ಟ್ವಿಟ್ಟಿಗರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಈ ಚಿತ್ರವು ನಿಮ್ಮನ್ನು ಜೀವಮಾನವಿಡೀ ಕಾಡುತ್ತದೆ
ನಿವೃತ್ತ ನೌಕಾಪಡೆಯ ಅಧಿಕಾರಿ ಮದನ್ ಶರ್ಮಾ ಎನ್ನುವವರು ಕಾರ್ಟೂನ್ ಒಂದನ್ನು ಹಾಕಿದ್ದಕ್ಕಾಗಿ ಶಿವಸೇನೆಯ ಕಾರ್ಯಕರ್ತರು ಮಾರಣಾಂತಿಕವಾಗಿ ಅವರ ಮೇಲೆ ಹಲ್ಲೆ ನಡೆಸಿದರು. ನಿಮ್ಮಲ್ಲಿ ಸ್ವಲ್ಪವಾದರೂ ಆತ್ಮಸಾಕ್ಷಿ ಉಳಿದಿದ್ದರೆ, ಈ ಚಿತ್ರವು ನಿಮ್ಮನ್ನು ಜೀವಮಾನವಿಡೀ ಕಾಡುತ್ತದೆ, ಉದ್ಧವ್ ಠಾಕ್ರೆ. ನಿಮ್ಮ ತಪ್ಪಿನ ಬಗ್ಗೆ ಯೋಚಿಸಲು ಈಗ ನಿಮಗೆ ಸಾಕಷ್ಟು ಸಮಯವಿರುತ್ತದೆ. ಕರ್ಮ ಯಾರನ್ನೂ ಬಿಡುವುದಿಲ್ಲ, ಈಗ ನಿಮ್ಮ (ಸಿಎಂ ಠಾಕ್ರೆ) ಸರದಿ ಎಂದು ಟ್ವಿಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಸಿಎಂ ಠಾಕ್ರೆ
ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಸಿಎಂ ಠಾಕ್ರೆ ನಡುವಿನ ದ್ವೇಷ ಎಲ್ಲರಿಗೂ ಗೊತ್ತಿರುವ ವಿಚಾರ. ಮುಂಬೈ ಆಸ್ತಿಯ ವಿಚಾರದಲ್ಲಿ ಬೃಹನ್ ಮುಂಬೈ ಕಾರ್ಪೋರೇಶನ್ ಇವರ ಕಚೇರಿಯ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಿತ್ತು. ರಾಷ್ಟ್ರ ರಾಜಕಾರಣದಲ್ಲಿ ಇದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಬಿಜೆಪಿ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ಕಂಗನಾ, ಹಳೆಯ ಘಟನೆಯನ್ನು ನೆನೆಪಿಸಿಕೊಂಡು ಟ್ವೀಟ್ ಒಂದನ್ನು ಮಾಡಿದ್ದಾರೆ. "ಉದ್ಧವ್ ಠಾಕ್ರೆ, ನೀವು ನನ್ನ ಮೇಲೆ ಸೇಡು ತೀರಿಸಿಕೊಂಡಿದ್ದೀರಿ ಎಂದು ಭಾವಿಸುತ್ತೀರಾ? ಇಂದು ನನ್ನ ಮನೆಯನ್ನು ಕೆಡವಲಾಗಿದೆ, ನಾಳೆ ನಿಮ್ಮ ಹೆಮ್ಮೆ ನೆಲಸಮವಾಗುತ್ತದೆ" ಎಂದು ಅವರು ಹೇಳಿದ್ದರು.
ಹತ್ತು ಹಲವಾರು ಕಾರಣಗಳು ನಿಮ್ಮ ಅಧಃಪತನಕ್ಕೆ ಕಾರಣ
ಪಾಲ್ಘರ್ ನಲ್ಲಿ ಸಾಧು ಮೇಲೆ ನಡೆದ ಹಲ್ಲೆ, ಕಂಗನಾ ಅವರ ಆಸ್ತಿಯನ್ನು ನಾಶ ಮಾಡಿದ್ದು, ನಿಮ್ಮ ಪುತ್ರ ಆದಿತ್ಯ ಠಾಕ್ರೆ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದರು ಎಂದು ಯುವಕನೊಬ್ಬನನ್ನು ಒಂದು ತಿಂಗಳು ಜೈಲಿಗೆ ಕಳುಹಿಸಿದ್ದು, ನಿವೃತ್ತ ಸೇನಾಧಿಕಾರಿಯ ಮೆಲೆ ಹಲ್ಲೆ.. ಈ ರೀತಿಯ ಹತ್ತು ಹಲವಾರು ಕಾರಣಗಳು ನಿಮ್ಮ ಅಧಃಪತನಕ್ಕೆ ಕಾರಣ ಎಂದು ಟ್ವಿಟ್ಟಿಗರೊಬ್ಬರು ಸಿಟ್ಟು ತೋಡಿಕೊಂಡಿದ್ದಾರೆ.