ಪಿಎಂಸಿ ಹಗರಣ: ಚಿಕಿತ್ಸೆಗೆ ಹಣ ಡ್ರಾ ಮಾಡಲಾಗದೆ ವ್ಯಕ್ತಿ ಸಾವು
ನವದೆಹಲಿ, ಅಕ್ಟೋಬರ್ 19: ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಅವ್ಯವಹಾರದ ಬಲೆಗೆ ಸಿಕ್ಕು ಸಾವಿಗೀಡಾಗುತ್ತಿರುವವರ ಸಂಖ್ಯೆ ಮೂರಕ್ಕೇರಿದೆ.
ಶುಕ್ರವಾರ ಮುಂಬೈಯ ಮುರಳೀಧರ್ ಧಾರ ಎಂಬ 80 ವರ್ಷ ವಯಸ್ಸಿನ ವ್ಯಕ್ತಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ತೆರಳಿದ್ದರು. ಆದರೆ ಪಿಎಂಸಿ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದ ಅವರು ಚಿಕಿತ್ಸೆಗೆ ಹಣ ಡ್ರಾ ಮಾಡಲು ಸಾಧ್ಯವಾಗದೆ ಹೃದಯಾಘಾತಕ್ಕೊಳಗಾಗಿ ಅಸುನೀಗಿದರು.
ಪಿಎಂಸಿ ಬ್ಯಾಂಕ್ ಅವ್ಯವಹಾರ, ಹೃದಯಾಘಾತದಿಂದ ಮತ್ತೊಂದು ಸಾವು
ಮುರಳೀಧರ ಧಾರಾ ಅವರು ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಬೈಪಾಸ್ ಸರ್ಜರಿ ಆಗಬೇಕಿತ್ತು. ಆದರೆ ತಮ್ಮದೇ ಖಾತೆಯಲ್ಲಿರುವ ತಮ್ಮದೇ ಹಣವನ್ನು ಡ್ರಾ ಮಾಡಲು ಸಾಧ್ಯವಾಗದೆ ಹೃದಯಾಘಾತಕ್ಕೊಳಗಾಗಿ ಮರಣವನ್ನಿಪ್ಪಿದರು.
ಪಿಎಂಸಿ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದ ಫತ್ತೋಮಳ್ ಪಂಜಾಬಿ ಎಂಬ 60 ವರ್ಷ ವಯಸ್ಸಿನ ವ್ಯಕ್ತಿ ಮಂಗಳವಾರ ಸಂಜೆ ಹೃದಯಾಘಾತದಿಂದ ಸಾವಿಗೀಡಾಗಿದ್ದರು.
ಸೋಮವಾರ ರಾತ್ರಿ ಸಂಜಯ್ ಗುಲಾಟಿ ಎಂಬ ವ್ಯಕ್ತಿ ಸಹ ಹೃದಯಾಘಾತದಿಂದ ಮೃತರಾಗಿದ್ದರು. ಅವರು ಈ ಬ್ಯಾಂಕಿನಲ್ಲಿ 90 ಲಕ್ಷ ರೂ. ಠೇವಣಿ ಇಟ್ಟಿದ್ದರು ಎನ್ನಲಾಗಿದೆ.
ಪಿಎಂಸಿ ಬ್ಯಾಂಕ್ ನಲ್ಲಿ 90 ಲಕ್ಷ ಇಟ್ಟಿದ್ದ ಜೆಟ್ ಏರ್ ವೇಸ್ ಮಾಜಿ ಉದ್ಯೋಗಿ ಸಾವು
ಪಿಎಂಸಿ ಬ್ಯಾಂಕಿನಲ್ಲಿ ಸುಮಾರು 4300 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಂಚನೆ ಪ್ರಕರಣ ಬಯಲಾಗಿದ್ದು, ಬ್ಯಾಂಕಿನಲ್ಲಿ ವಿಥ್ ಡ್ರಾ ಮಿತಿಯನ್ನು ಆರ್ಬಿಐ ಕಡಿತಗೊಳಿಸಿತ್ತು. ಜೊತೆಗೆ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಸಾವಿರಾರು ಜನರು ತಮ್ಮ ಠೇವಣಿ ಹಣದ ಬಗ್ಗೆ ಆತಂಕಪಡುವಂತಾಗಿದ್ದು, ಕಳೆದ 24 ಗಂಟೆಯಲ್ಲಿ ಪಿಎಂಸಿಯಲ್ಲಿ ಖಾತೆ ಹೊಂದಿರುವ ಇಬ್ಬರು ಮೃತರಾದಂತಾಗಿದೆ.