ಮಹಾರಾಷ್ಟ್ರ ರಾಜಕಾರಣದ ಪಾಠ ಮಾಡಿದ ಮಾಜಿ ಸಿಎಂ ಫಡ್ನವೀಸ್
ಮುಂಬೈ, ಜನವರಿ.24: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನೆ ನಾಯಕರ ಫೋನ್ ಟ್ಯಾಪಿಂಗ್ ನಡೆದಿರುವ ಆರೋಪವನ್ನು ಮಾಜಿ ಮುಖ್ಯಮಂತ್ರಿ ದೇವಂದ್ರ ಫಡ್ನವೀಸ್ ತಳ್ಳಿ ಹಾಕಿದ್ದಾರೆ. ಈ ರಾಜ್ಯದ ರಾಜಕಾರಣದಲ್ಲಿ ಫೋನ್ ಟ್ಯಾಪಿಂಗ್ ಎಂಬ ಸಂಸ್ಕೃತಿಯೇ ಇಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಮಹಾರಾಷ್ಟ್ರದ ರಾಜಕಾರಣದಲ್ಲಿ ಫೋನ್ ಟ್ಯಾಪಿಂಗ್ ಎಂಬ ಸಂಸ್ಕೃತಿ ಎಂದಿಗೂ ಇಲ್ಲ. ಈ ಹಿಂದಿನ ಬಿಜೆಪಿ ಸರ್ಕಾರವು ಯಾವುದೇ ರೀತಿಯ ಫೋನ್ ಕದ್ದಾಲಿಕೆಗೆ ಆದೇಶ ಮಾಡಿಲ್ಲ. ಆರೋಪ ಮಾಡುವವರು ಬೇಕಿದ್ದಲ್ಲಿ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲು ಎಂದು ದೇವೇಂದ್ರ ಫಡ್ನವೀಸ್ ಸವಾಲು ಹಾಕಿದ್ದಾರೆ.
ನನ್ನ ಬಣ್ಣ 'ಕೇಸರಿ', ಅದು ಬದಲಾಗುವುದಿಲ್ಲ: ಉದ್ಧವ್ ಠಾಕ್ರೆ ತಿರುಗೇಟು
ಮುಂಬೈನಲ್ಲಿ ಮಾತನಾಡಿದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಇಂದು ರಾಜ್ಯದಲ್ಲಿ ಅವರದೇ ಪಕ್ಷ ಆಡಳಿತ ನಡೆಸುತ್ತಿದೆ. ಫೋನ್ ಕದ್ದಾಲಿಕೆ ಅನುಮಾನಗಳಿದ್ದಲ್ಲಿ ಆ ಬಗ್ಗೆ ತನಿಖೆ ನಡೆಸಲು ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಎಂದ ಫಡ್ನವೀಸ್
ಮಹಾರಾಷ್ಟ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರವು ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು. ಸಚಿವರು ಮಾಡುತ್ತಿರುವ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದರು.
ತಕ್ಷಣ ತನಿಖೆಗೆ ಆದೇಶಿಸುವಂತೆ ಫಡ್ನವೀಸ್ ಒತ್ತಾಯ
ರಾಜ್ಯದಲ್ಲೀಗ ಶಿವಸೇನೆ ನೇತೃತ್ವದ ಸರ್ಕಾರವೇ ಅಸ್ತಿತ್ವದಲ್ಲಿದೆ. ಫೋನ್ ಟ್ಯಾಪಿಂಗ್ ಬಗ್ಗೆ ಆರೋಪಿಸುತ್ತಿರುವ ಅನಿಲ್ ದೇಶಮುಖ್ ಗೃಹ ಸಚಿವರಾಗಿದ್ದಾರೆ. ಇಂದು ಮಿತ್ರಪಕ್ಷದ ನಾಯಕರು ತನಿಖೆಗೆ ಆದೇಶಿಸಲು ಸ್ವಾತಂತ್ರ್ಯವಾಗಿದ್ದಾರೆ. ಆದಷ್ಟು ಬೇಗ ಫೋನ್ ಕದ್ದಾಲಿಕೆ ಬಗ್ಗೆ ವಿಚಾರಣೆ ನಡೆಸಲಿ, ರಾಜ್ಯದ ಜನರಿಗೆ ಸತ್ಯ ಏನೆಂದು ತಿಳಿಯಲಿ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಒತ್ತಾಯಿಸಿದರು.
ರಾಜ್ಯದ ಮತದಾರರಿಗೆ ಸತ್ಯವೇನೆಂದು ತಿಳಿದಿದೆ
ಇನ್ನು, ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಫೋನ್ ಟ್ಯಾಪಿಂಗ್ ಗೆ ಯಾವುದೇ ರೀತಿ ಆದೇಶ ನೀಡಿಲ್ಲ. ಆ ಸಂಸ್ಕೃತಿಯ ರಾಜಕಾರಣವು ರಾಜ್ಯದ ಇತಿಹಾಸದಲ್ಲೇ ನಡೆದಿಲ್ಲ. ಬಿಜೆಪಿ ಸರ್ಕಾರ ಏನು ಎಂಬುದು ರಾಜ್ಯದ ಜನರಿಗೆ ಹಾಗೂ ಮತದಾರರು ಸರಿಯಾಗಿ ತಿಳಿದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಫಡ್ನವೀಸ್ ವಿರುದ್ಧ ಆರೋಪಿಸಿದ್ದ ಸಚಿವ ಅನಿಲ್ ದೇಶಮುಖ್
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭ ಹಾಗೂ ಸರ್ಕಾರ ರಚನೆ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದರು ಎಂದು ಗೃಹ ಸಚಿವ ಅನಿಲ್ ದೇಶಮುಖ್ ಆರೋಪಿಸಿದ್ದರು. ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಸಂಸದ ಸಂಜಯ್ ರಾವತ್ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗಿತ್ತು ಎಂದು ದೂರಿದ್ದರು.