ಕೇವಲ ಓರ್ವ ಪ್ರಯಾಣಿಕನನ್ನು ಹೊತ್ತು ಮುಂಬೈನಿಂದ ದುಬೈಗೆ ಹಾರಿದ 360 ಸೀಟ್ ಸಾಮರ್ಥ್ಯದ ವಿಮಾನ!
ಮುಂಬೈ, ಮೇ 26: 360 ಸೀಟ್ ಇರುವ ವಿಮಾನವು ಕೇವಲ ಓರ್ವ ಪ್ರಯಾಣಿಕನನ್ನು ಹೊತ್ತು ಮುಂಬೈನಿಂದ ದುಬೈಗೆ ಹಾರಿದೆ. ಇದು ನಂಬಲು ಸ್ವಲ್ಪ ಕಷ್ಟವೆನಿಸಬಹುದು ಆದರೆ ಇದು ನಿಜ.
ಮೇ 19 ರಂದು 40 ವರ್ಷದ ಭವೇಶ್ ಜಾವೇರಿ ಟಿಕೆಟ್ಗಾಗಿ 18,000 ರೂಗಳ ಪಾವತಿಸಿ 360 ಆಸನಗಳ ಬೋಯಿಂಗ್ 777 ವಿಮಾನದಲ್ಲಿ ಮುಂಬೈನಿಂದ ದುಬೈಗೆ ಎಮಿರೇಟ್ಸ್ ವಿಮಾನದಲ್ಲಿ ಒಬ್ಬನೇ ಪ್ರಯಾಣಿಸಿದ್ದಾರೆ.
ಮೊದಲ ಬಾರಿಗೆ ಇಬ್ಬರು ಭಾರತೀಯ ಉದ್ಯಮಿಗಳಿಗೆ 10 ವರ್ಷದ UAE ವೀಸಾ
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಭವೇಶ್ ಜಾವೇರಿ, "ನಾನು ವಿಮಾನಕ್ಕೆ ಏರಿದೆ. ವಿಮಾನದಲ್ಲಿ ನನ್ನನ್ನು ಸ್ವಾಗತಿಸಲು ಏರ್ ಹೋಸ್ಟೆಸ್ ಎಲ್ಲರೂ ಚಪ್ಪಾಳೆ ತಟ್ಟಿದರು. ನಾನು ಹಲವಾರು ಬಾರಿ ವಿಮಾನದಲ್ಲಿ ಸಂಚರಿಸಿದ್ದೇನೆ ಆದರೆ ಈ ಅನುಭವ ಅತ್ಯುತ್ತಮ" ಎಂದು ಹೇಳಿದ್ದಾರೆ. ಮುಂಬೈ ಮತ್ತು ದುಬೈ ನಡುವೆ ಈವರೆಗೆ 240 ಕ್ಕೂ ಹೆಚ್ಚು ಬಾರಿ ಭವೇಶ್ ಜಾವೇರಿ ವಿಮಾನ ಪ್ರಯಾಣ ನಡೆಸಿದ್ದಾರೆ ಎಂದು ವರದಿಯಾಗಿದೆ.
ಕೊರೋನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿಧಿಸಿರುವ ಪ್ರಯಾಣ ನಿರ್ಬಂಧಗಳ ಪ್ರಕಾರ, ಯುಎಇ ಪ್ರಜೆಗಳು, ಯುಎಇ ಗೋಲ್ಡನ್ ವೀಸಾ ಹೊಂದಿರುವವರು ಮತ್ತು ರಾಜತಾಂತ್ರಿಕ ಕಾರ್ಯಾಚರಣೆಯ ಸದಸ್ಯರು ಮಾತ್ರ ಭಾರತದಿಂದ ಯುಎಇಗೆ ವಿಮಾನ ಪ್ರಯಾಣ ನಡೆಸಬಹುದು. ಇದರಂತೆ ಕಳೆದ 20 ವರ್ಷಗಳಿಂದ ದುಬೈ ನಿವಾಸಿಯಾಗಿರುವ ಭವೇಶ್ ಜಾವೇರಿ ಮುಂಬೈನಿಂದ ದುಬೈಗೆ ಏಕಾಂಗಿಯಾಗಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.
ಇನ್ನು ತನ್ನ ಅದೃಷ್ಟ ಸಂಖ್ಯೆ 18 ಆಗಿರುವ ಹಿನ್ನೆಲೆ ವಿಮಾನದಲ್ಲಿ ಜಾವೇರಿ ಈ ಸಂಖ್ಯೆಯ ಆಸನದಲ್ಲೇ ಕೂತಿದ್ದರು ಎಂದು ವರದಿಯಾಗಿದೆ. ತನ್ನ ಈ ಪ್ರಯಾಣದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ಜಾವೇರಿ ನನ್ನ ಅದೃಷ್ಟ ಸಂಖ್ಯೆಯ ಆಸನವೇ ನನಗೆ ದೊರೆತಿರುವುದು ಸಂತೋಷಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ 'ಗೋಲ್ಡನ್' ವೀಸಾ ಹತ್ತು ವರ್ಷಕ್ಕೆ
ನನ್ನನ್ನು ವಿಮಾನದಲ್ಲಿದ್ದ ಸಿಬ್ಬಂದಿಗಳು ಬಹಳ ಸಂತೋಷದಿಂದ ಸ್ವಾಗತಿಸಿದರು. ಹಾಗೆಯೇ ಟೇಕ್ ಆಫ್ ಬಳಿಕವೂ ಬಹಳ ಗೌರವಯುತವಾಗಿ ಬೀಳ್ಕೊಟ್ಟರು ಎಂದು ಹೇಳಿದ್ದಾರೆ.
ಮುಂಬೈ-ದುಬೈ ಮಾರ್ಗದಲ್ಲಿ ಪ್ರಯಾಣಿಸುವ ಬೋಯಿಂಗ್ 777 ಅನ್ನು ಚಾರ್ಟರ್ ವಿಮಾನವನ್ನಾಗಿ ಮಾಡಲು ಸುಮಾರು 70 ಲಕ್ಷ ರೂಪಾಯಿಗಳ ವೆಚ್ಚವಾಗಲಿದೆ. ಆದರೆ ವಿಮಾನ ಪ್ರಯಾಣಿಕರಿಲ್ಲದೆ, ಹಿಂದಿರುಗಬೇಕಾದರೆ ಚಾರ್ಟರ್ ವೆಚ್ಚವು ದ್ವಿಗುಣಗೊಳ್ಳುತ್ತದೆ ಎಂದು ಭಾರತೀಯ ವಿಮಾನ ಚಾರ್ಟರ್ ಉದ್ಯಮದ ಆಯೋಜಕರು ಹೇಳಿದ್ದಾರೆ.
ಗೋಲ್ಡನ್ ವೀಸಾ ಹೊಂದಿರುವ ಭವೇಶ್ ಜಾವೇರಿ, ತಾನು ಹೊರಡುವ ಒಂದು ವಾರ ಮುಂಚಿತವಾಗಿ ವಿಮಾನಯಾನ ಸಂಸ್ಥೆಗೆ ಕರೆ ಮಾಡಿ 18,000 ರೂ. ಯ . ಎಕಾನಮಿ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದರು. "ನಾನು ಸಾಮಾನ್ಯವಾಗಿ ವ್ಯವಹಾರ ವರ್ಗದ ಟಿಕೆಟ್ ಅನ್ನು ಕಾಯ್ದಿರಿಸುತ್ತೇನೆ, ಆದರೆ ವಿಮಾನದಲ್ಲಿ ಕೆಲವೇ ಪ್ರಯಾಣಿಕರು ಇರುವ ಕಾರಣ ಆರ್ಥಿಕ ಆಸನವನ್ನು ಏಕೆ ಕಾಯ್ದಿರಿಸಬಾರದು ಎಂದು ನಾನು ಯೋಚಿಸಿದೆ" ಎಂದು ಭವೇಶ್ ಜಾವೇರಿ ಹೇಳಿದ್ದಾರೆ.
ಕಳೆದ ಬಾರಿ ನಾನು 14 ಮಂದಿ ಪ್ರಯಾಣಿಕರು ಮಾತ್ರ ಇರುವ ವಿಮಾನದಲ್ಲಿ ಆಗಮಿಸಿದೆ. ಆದರೆ ಈ ಬಾರಿಯ ನನ್ನ ಅನುಭವ ಅದ್ಭುತವಾದದ್ದು. ಇದನ್ನು ಹಣ ನೀಡಿ ಖರೀದಿಸಲಾಗದು ಎಂದು ಹೇಳಿದ್ದಾರೆ.
ಓರ್ವ ಪ್ರಯಾಣಿಕನಿಗಾಗಿ 8 ಲಕ್ಷ ರೂಪಾಯಿ ಮೌಲ್ಯದ 17 ಟನ್ ಇಂಧನ ವ್ಯಯಿಸಿದ್ದೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ಇದು ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ಎಂದು ಹೇಳಿದ್ದಾರೆ.
Recommended Video
(ಒನ್ಇಂಡಿಯಾ ಸುದ್ದಿ)