ನಿಮಗೆ ಬಹುಮತ ನೀಡಿರುವುದು ಬೇಜವಾಬ್ದಾರಿಯಿಂದ ವರ್ತಿಸಲು ಅಲ್ಲ: ಶಿವಸೇನಾ ವಾಗ್ದಾಳಿ
ಮುಂಬೈ, ಫೆಬ್ರವರಿ 26: ಅಹಮದಾಬಾದ್ನ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಿರುವುದನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಶಿವಸೇನಾ ವಾಗ್ದಾಳಿ ನಡೆಸಿದೆ. ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ದೊರಕಿರುವ ಭಾರಿ ಬಹುಮತವು ಬೇಜವಾಬ್ದಾರಿಯಿಂದ ವರ್ತಿಸಲು ನೀಡಿರುವ ಪರವಾನಗಿ ಅಲ್ಲ ಎಂದು ಎಚ್ಚರಿಕೆ ನೀಡಿದೆ.
ಇತಿಹಾಸದಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಹೆಸರನ್ನು ಅಳಿಸಿಹಾಕಲು ಕಾಂಗ್ರೆಸ್ ಮತ್ತು ಗಾಂಧಿ-ನೆಹರೂ ಕುಟುಂಬ ಪ್ರಯತ್ನಿಸುತ್ತಿದೆ ಎಂದು ಕಳೆದ ಐದು ವರ್ಷಗಳಿಂದ ಆರೋಪಗಳನ್ನು ಮಾಡುತ್ತಾ ಬರುತ್ತಿದ್ದರು. ಆದರೆ ಈಗ ಸ್ಟೇಡಿಯಂ ಹೆಸರು ಬದಲಿಸಿರುವುದು ಅದಕ್ಕೆ ಯಾರು ನಿಜಕ್ಕೂ ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿದೆ ಎಂದು ಶಿವಸೇನಾ ತನ್ನ ಮುಖವಾಗಿ 'ಸಾಮ್ನಾ' ಪತ್ರಿಕೆಯಲ್ಲಿ ಟೀಕಿಸಿದೆ.
ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಹೆಸರು
'ಎಲ್ಲ ದೊಡ್ಡ ನಿರ್ಮಾಣಗಳು ಗುಜರಾತ್ನಲ್ಲಿಯೇ ನಡೆಯಬೇಕು ಎಂದು ಮೋದಿ-ಶಾ ಸರ್ಕಾರವು ಬಯಸಿರುವಂತಿದೆ. ಅದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅವರು ದೇಶವನ್ನು ಮುನ್ನಡೆಸುತ್ತಿದ್ದೇವೆ ಎಂಬುದನ್ನು ಮರೆತಂತಿದೆ. ಅಹಮದಾಬಾದ್ನ ಮೊಟೆರಾ ಕ್ರೀಡಾಂಗಣದ ಹೆಸರನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಬದಲಿಸಲಾಗಿದೆ. ಇಲ್ಲಿಯವರೆಗೂ ಮೆಲ್ಬೋರ್ನ್ ಸ್ಟೇಡಿಯಂ ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಮೈದಾನವಾಗಿತ್ತು. ಈಗ ಅತಿ ದೊಡ್ಡ ಮೈದಾನಕ್ಕೆ ಮೋದಿ ಹೆಸರು ಇರಿಸಲಾಗಿದೆ' ಎಂದು ಸೇನಾ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ದಾರ್ ಪಟೇಲ್ಗೆ ಅವಮಾನ; ಸ್ಟೇಡಿಯಂಗೆ ಮೋದಿ ಹೆಸರು ನಾಮಕರಣಕ್ಕೆ ಕಾಂಗ್ರೆಸ್ ವಿರೋಧ
'ಆದರೆ ಈ ನಡೆ ಏಕೆ ಟೀಕೆಗೆ ಒಳಗಾಗಿದೆ? ಏಕೆಂದರೆ ಈ ಮೊದಲು ಮೊಟೆರಾ ಕ್ರೀಡಾಂಗಣಕ್ಕೆ ಸರ್ದಾರ್ ಪಟೇಲ್ ಅವರ ಹೆಸರು ಇಡಲಾಗಿತ್ತು. ಅದಕ್ಕೀಗ ಮೋದಿ ಹೆಸರಿಡಲಾಗಿದೆ. ಸರ್ದಾರ್ ಪಟೇಲ್ ಹೆಸರನ್ನು ಅಳಿಸಿಹಾಕಲು ಗಾಂಧಿ-ನೆಹರೂ ಕುಟುಂಬ ಅಥವಾ ಕಾಂಗ್ರೆಸ್ ಪ್ರಯತ್ನ ಮಾಡಿತ್ತು ಎಂದು ಕಳೆದ ಐದು ವರ್ಷಗಳಲ್ಲಿ ಸರ್ಕಾರ ಆರೋಪಿಸಿತ್ತು. ಆದರೆ ಸರ್ದಾರ್ ಪಟೇಲ್ ಸ್ಟೇಡಿಯಂ ಹೆಸರನ್ನು ಬದಲಿಸಿರುವುದು ಯಾರು ಅವರ ಹೆಸರನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ' ಎಂದು ಟೀಕಿಸಿದೆ.
"ಮೋದಿ ಯುಗ ಪುರುಷ; ಸ್ಟೇಡಿಯಂಗೆ ಅವರ ಹೆಸರಿಡುವುದರಲ್ಲಿ ತಪ್ಪೇನಿದೆ?"
'ನರೇಂದ್ರ ಮೋದಿ ಅವರು ಮಹಾನ್ ನಾಯಕ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅವರ ಅಂಧಾಭಿಮಾನಿಗಳು ಅವರು ಮಹಾತ್ಮ ಗಾಂಧಿ, ನೆಹರೂ, ಸರ್ದಾರ್ ಪಟೇಲ್ ಅಥವಾ ಇಂದಿರಾ ಗಾಂಧಿ ಅವರಿಗಿಂತಲೂ ಮಹಾನ್ ವ್ಯಕ್ತಿ ಎಂದು ಭಾವಿಸಿದ್ದಾರೆ. ಇದನ್ನು ಅಂಧ ನಂಬಿಕೆಯ ಮತ್ತೊಂದು ಹಂತ ಎಂದು ಪರಿಗಣಿಸಬೇಕು' ಎಂದು ಸಾಮ್ನಾ ಹೇಳಿದೆ.