ಮಹಾರಾಷ್ಟ್ರದಲ್ಲಿ ಹೀಗೆ ಏಕಾಏಕಿ ಕೊರೊನಾ ಸೋಂಕು ಹೆಚ್ಚಾಗಲು ಕಾರಣವೇನು?
ಮುಂಬೈ, ಫೆಬ್ರವರಿ 22: ಒಂದು ವಾರದಿಂದೀಚೆಗೆ ಮಹಾರಾಷ್ಟ್ರದಲ್ಲಿ ಏಕಾಏಕಿ ಕೊರೊನಾ ಪ್ರಕರಣಗಳು ಏರಿಕೆಯಾಗಿವೆ. ಇಡೀ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿನ ಪ್ರಕರಣ ದಾಖಲಾಗುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.
ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 6971 ಪ್ರಕರಣಗಳು ದಾಖಲಾಗಿದ್ದು, 35 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 121 ದಿನಗಳಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಕೊರೊನಾ ಪ್ರಕರಣ ದಾಖಲಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ, ಸೋಂಕಿನ ಪ್ರಮಾಣ 81% ರಷ್ಟು ಹೆಚ್ಚಾಗಿದೆ. ಆದರೆ ಹೀಗೆ ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಕೊರೊನಾ ಸೋಂಕು ಹೆಚ್ಚಾಗಲು ಕಾರಣವೇನು? ಇದಕ್ಕೆ ರಾಜ್ಯ ಆರೋಗ್ಯ ಇಲಾಖೆ ಕಾರಣವನ್ನು ತಿಳಿಸಿದೆ. ಅದೇನು? ಮುಂದೆ ಓದಿ...
ದೇಶದಲ್ಲಿ ಮತ್ತೆ ಕೊರೊನಾ ಆತಂಕ; ವಾರದಿಂದ 31% ಏರಿದ ಪ್ರಕರಣ
ರಾಜ್ಯದಲ್ಲಿ ಕೊರೊನಾ ಹೆಚ್ಚಳಕ್ಕೆ ಕಾರಣ ನೀಡಿದ ಇಲಾಖೆ
ರಾಜ್ಯದಲ್ಲಿ ಹೆಚ್ಚಾಗಿರುವ ಸೋಂಕಿನ ಪ್ರಮಾಣದ ಕುರಿತು ರಾಜ್ಯ ಆರೋಗ್ಯ ಇಲಾಖೆ ಕೆಲವು ಅಂಶಗಳನ್ನು ಉಲ್ಲೇಖಿಸಿದೆ. ಕೊರೊನಾ ಮಾರ್ಗಸೂಚಿಗಳನ್ನು ಇಲ್ಲಿನ ಜನರು ನಿರ್ಲಕ್ಷಿಸಿರುವುದು ಕೊರೊನಾ ಈ ಮಟ್ಟದಲ್ಲಿ ಹರಡಲು ಪ್ರಮುಖ ಕಾರಣ ಎಂದು ತಿಳಿಸಿದೆ. ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕೊರೊನಾ ವ್ಯಾಪಿಸಲು ಬಹು ಮುಖ್ಯ ಕಾರಣ ಎಂದು ಹೇಳಿದೆ.
ಎಚ್ಚರಿಕೆ ನೀಡಿದ ಸಿಎಂ ಉದ್ಧವ್ ಠಾಕ್ರೆ
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಐದು ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದು ಹೀಗೇ ಮುಂದುವರೆದರೆ ಲಾಕ್ಡೌನ್ ಕುರಿತು ಚಿಂತಿಸಬೇಕಾಗುವುದು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ಎರಡು ವಾರಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರದೇ ಹೋದರೆ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದೂ ಹೇಳಿದ್ದಾರೆ.
ಗುಣಲಕ್ಷಣಗಳಿಲ್ಲದೇ ಕಾಣಿಸಿಕೊಳ್ಳುತ್ತಿರುವ ಸೋಂಕು
ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಿಂದ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದೆ ಹಾಗೂ ಯಾವುದೇ ಗುಣಲಕ್ಷಣಗಳಿಲ್ಲದೇ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಂಕಿನ ನಿಯಂತ್ರಣಕ್ಕೆ ಸರ್ಕಾರ ಸರ್ವಸನ್ನದ್ಧವಾಗಿದೆ ಎಂದು ತಿಳಿಸಿದೆ. ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಕೊರೊನಾ ಹೆಚ್ಚಾದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿತ್ತು ಎಂದು ಇಲಾಖೆ ತಿಳಿಸಿದೆ.
"ಜನರ ಅಜಾಗರೂಕತೆಯೇ ಕಾರಣ"
ಜನರ ಅಜಾಗರೂಕತೆಯಿಂದಲೇ ಅತ್ಯಧಿಕ ಮಟ್ಟದಲ್ಲಿ ಕೊರೊನಾ ಸೋಂಕು ಹರಡಲು ಕಾರಣ. ಜನರು ಮಾಸ್ಕ್ ಧರಿಸುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಂತೂ ಇದರೆಡೆಗೆ ಲಕ್ಷ್ಯವೇ ಇಲ್ಲ. ಹೀಗಾಗೇ ಏಕಾಏಕಿ ಸೋಂಕು ಏರಿಕೆಯಾಗಿದೆ ಎಂದು ಇಲಾಖೆ ತಿಳಿಸಿದೆ. ಮೂರು ತಿಂಗಳ ನಂತರ ರಾಜ್ಯದಲ್ಲಿ ಕಳೆದ ಶುಕ್ರವಾರದಿಂದ ಅಧಿಕ ಮಟ್ಟದ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ದಿನನಿತ್ಯ 6,000 ಪ್ರಕರಣಗಳು ದಾಖಲಾಗುತ್ತಿರುವುದು ಆತಂಕ ಮೂಡಿಸಿದೆ.