ಅಜಿತ್ ಪವಾರ್ ನಡೆಗೆ ಕುಟುಂಬವೇ ಒಡೆದು ಹೋಳಾಯಿತೇ?
ಮುಂಬೈ, ನವೆಂಬರ್ 23: ಸರ್ಕಾರ ರಚಿಸುವ ಸಂಬಂಧ ಶಿವಸೇನಾ ಮತ್ತು ಕಾಂಗ್ರೆಸ್ ಜತೆಗೆ ನಿರಂತರ ಸಭೆಗಳನ್ನು ನಡೆಸುತ್ತಿದ್ದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಅವರ ಅಣ್ಣನ ಮಗ ಅಜಿತ್ ಪವಾರ್ ಆಘಾತ ನೀಡಿದ್ದಾರೆ. ಚಿಕ್ಕಪ್ಪನ ಜತೆಗೆ ಪಕ್ಷದ ಎಲ್ಲ ಮಹತ್ವದ ಸಭೆಗಳನ್ನು ನಡೆಸುತ್ತಿದ್ದ ಅಜಿತ್ ಪವಾರ್, ಶುಕ್ರವಾರ ರಾತ್ರಿ ಕೂಡ ಶಿವಸೇನಾ ಜತೆ ನಡೆದ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಬೆಳಗಾಗುವುದರೊಳಗೆ ಕೆಲವು ಶಾಸಕರ ಜತೆಗೂಡಿ ಬಿಜೆಪಿಯೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸಿದ್ದಾರೆ.
ಸರ್ಕಾರ ರಚನೆಗೆ ಆತುರ ತೋರದೆ ಹಾದಿಯಲ್ಲಿನ ಎಲ್ಲ ಅಡೆತಡೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಚರ್ಚಿಸಿ ಅವುಗಳಿಗೆ ಪರಿಹಾರ ಕಂಡುಕೊಂಡ ಬಳಿಕವೇ ಮೈತ್ರಿಯ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಮೈತ್ರಿ ಅಂತಿಮಗೊಳ್ಳುವ ವೇಳೆಗೆ ಸಂಪುಟ ರಚನೆ, ವಿಸ್ತರಣೆ, ಖಾತೆ ಹಂಚಿಕೆ, ಪ್ರಣಾಳಿಕೆಗಳ ಅನುಷ್ಟಾನ ಒಳಗೊಂಡಂತೆ ಯಾವುದೇ ವಿಚಾರದ ಗೊಂದಲಗಳು ಇರಬಾರದು ಎಂಬ ಸಲುವಾಗಿ ಸುದೀರ್ಘ ಮಾತುಕತೆಗಳನ್ನು ನಡೆಸಲಾಗುತ್ತಿತ್ತು. ಹೀಗಾಗಿ ಶರದ್ ಪವಾರ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಯಮ ಕಾಯ್ದುಕೊಂಡಿದ್ದರು.
ಮಹಾರಾಷ್ಟ್ರ ಬೆಳವಣಿಗೆ: ಅಜಿತ್ ಪವಾರ್ ನಡೆಗೆ ಶರದ್ ಪವಾರ್ ಏನಂದ್ರು?
ಆದರೆ, ಅಜಿತ್ ಪವಾರ್ ಇದ್ದಕ್ಕಿದ್ದಂತೆ ಬಿಜೆಪಿ ಬಾಗಿಲು ತಟ್ಟಿರುವುದು ಮಹಾರಾಷ್ಟ್ರ ರಾಜಕೀಯದಲ್ಲಿ ಅಚ್ಚರಿ ಮೂಡಿಸಿದೆ. ಜತೆಗೆ ಪವಾರ್ ಕುಟುಂಬದಲ್ಲಿಯೂ ಒಡಕು ಮೂಡಿಸಿದೆ ಎಂಬ ಮಾತುಗಳು ಕೇಳಿಬಂದಿವೆ.
ಎನ್ಸಿಪಿ ಎರಡು ಭಾಗ
ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆ ಎನ್ಸಿಪಿಯಲ್ಲಿ ಒಡಕು ಮೂಡಲು ಕಾರಣವಾಗಿದೆ. ಕೆಲವು ಶಾಸಕರು ಅಜಿತ್ ಪವಾರ್ ಅವರಿಗೆ ಬೆಂಬಲ ನೀಡಿ ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು ಶರದ್ ಪವಾರ್ ಅವರೊಂದಿಗೆ ಉಳಿದುಕೊಂಡಿದ್ದಾರೆ. ಇದರಿಂದ ಪಕ್ಷ ಎರಡು ಹೋಳಾಗಿದೆ. ಪಕ್ಷ ಕಟ್ಟಿದ, ಅವರಿಂದಾಗಿ ಗೆದ್ದ ಶರದ್ ಪವಾರ್ ಅವರಿಗೆ ಶಾಸಕರು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಜಿತ್ ಪವಾರ್ ಅವರನ್ನು ಒಳಗೊಂಡಂತೆ ಬಿಜೆಪಿಗೆ ಬೆಂಬಲ ನೀಡಿದ ಶಾಸಕರನ್ನು ಎನ್ಸಿಪಿ ಉಚ್ಚಾಟನೆ ಮಾಡುವ ಸಾಧ್ಯತೆ ಇದೆ.
ಮಹಾರಾಷ್ಟ್ರದ ಮೈತ್ರಿ ಲೆಕ್ಕಾಚಾರ ಬಿಚ್ಚಿಟ್ಟ ಕಾಂಗ್ರೆಸ್!
ಕುಟುಂಬ ಮತ್ತು ಪಕ್ಷ ಛಿದ್ರ
ಶರದ್ ಪವಾರ್ ಅವರ ಮಗಳು, ಸಂಸದೆ ಸುಪ್ರಿಯಾ ಸುಳೆ ಅವರ ವಾಟ್ಸಾಪ್ ಸ್ಟೇಟಸ್ ಎಲ್ಲೆಡೆ ಹರಿದಾಡುತ್ತಿದೆ. 'ಪಕ್ಷ ಮತ್ತು ಕುಟುಂಬ ಒಡೆದುಹೋಗಿದೆ' ಎಂದು ಸುಪ್ರಿಯಾ ಹಾಕಿಕೊಂಡಿರುವ ಸ್ಟೇಟಸ್ ಅಣ್ಣನ ನಡೆಯಿಂದ ಮನೆ ಮತ್ತು ಎನ್ಸಿಪಿ ಪಕ್ಷದಲ್ಲಿ ಒಡಕು ಮೂಡಿದೆ ಎಂದು ಬೇಸರ ಹಂಚಿಕೊಂಡಿದ್ದಾರೆ.
ಇಷ್ಟು ದೊಡ್ಡ ಮೋಸ ಎಂದೂ ಆಗಿರಲಿಲ್ಲ
'ಬದುಕಿನಲ್ಲಿ ನೀವು ಯಾರನ್ನು ನಂಬುತ್ತೀರಾ? ನನ್ನ ಜೀವನದಲ್ಲಿ ಇಷ್ಟು ದೊಡ್ಡ ವಂಚನೆಯನ್ನು ಅನುಭವಿಸರಲಿಲ್ಲ. ಅವನನ್ನು ಸಮರ್ಥಿಸಿಕೊಂಡೆ.... ಪ್ರೀತಿಸಿದೆ.... ನೋಡಿ ಮರಳಿ ನನಗೇನು ಸಿಕ್ಕಿತು...' ಎಂದು ಅಣ್ಣ ಅಜಿತ್ ಪವಾರ್ ವಿರುದ್ಧ ಸುಪ್ರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶರದ್ ಪವಾರ್ ಅಣ್ಣನ ಮಗ
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಗಮನಕ್ಕೆ ಬಾರದಂತೆಯೇ ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚಿಸಿರುವ ಅಜಿತ್ ಪವಾರ್, ಶರದ್ ಪವಾರ್ ಅವರ ಅಣ್ಣ ಅನಂತರಾವ್ ಪವಾರ್ ಅವರ ಮಗ. ರಾಜಕೀಯದಲ್ಲಿ ತಳವೂರಿದ್ದ ಚಿಕ್ಕಪ್ಪ ಶರದ್ ಪವಾರ್ ನೆರವಿನಿಂದಲೇ ರಾಜಕೀಯಕ್ಕೆ ಬಂದು ಚುನಾವಣೆಗಳಲ್ಲಿ ಜಯಗಳಿಸಿದರು. ಶರದ್ ಪವಾರ್ ಮುಖ್ಯಮಂತ್ರಿಯಾದಾಗ ಸಂಪುಟ ದರ್ಜೆಯ ಸಚಿವರಾದರು. ಕಾಂಗ್ರೆಸ್-ಎನ್ಸಿಪಿ ಸರ್ಕಾರದಲ್ಲಿ ಪೃಥ್ವಿರಾಜ್ ಚೌಹಾಣ್ ಮುಖ್ಯಮಂತ್ರಿಯಾಗಿದ್ದಾಗ ಎರಡು ವರ್ಷ ಉಪ ಮುಖ್ಯಮಂತ್ರಿಯೂ ಆಗಿದ್ದರು. ಅಜಿತ್ ಪವಾರ್ ಮದುವೆಯಾಗಿರುವುದು ಎನ್ಸಿಪಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದ, ಈ ಬಿಜೆಪಿಯ ಸದಸ್ಯರಾಗಿರುವ ಪದ್ಮಸಿನ್ಹ ಬಾಜಿರಾವ್ ಪಾಟೀಲ್ ಅವರ ಸಹೋದರಿಯನ್ನು.
ನಿದ್ದೆಯಿಂದ ಏಳುವ ಹೊತ್ತಿಗೆ ಮಹಾರಾಷ್ಟ್ರಕ್ಕೆ ಫಡ್ನವಿಸ್ ಸಿಎಂ, ಅಜಿತ್ ಪವಾರ್ ಡಿಸಿಎಂ!
ಶಿವಸೇನಾ-ಎನ್ಸಿಪಿ ಸಂಬಂಧ ಹೇಗಿತ್ತು?
ಎನ್ಸಿಪಿ ಮತ್ತು ಶಿವಸೇನಾ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದರೂ, ಈ ಎರಡೂ ಪಕ್ಷಗಳ ನಡುವೆ ಸುದೀರ್ಘ ಕಾಲದಿಂದಲೂ ಉತ್ತಮ ಸಂಬಂಧವಿತ್ತು. ಶಿವಸೇನಾ ಸಂಸ್ಥಾಪಕ ಬಾಳ ಸಾಹೇಬ್ ಠಾಕ್ರೆ ಮತ್ತು ಶರದ್ ಪವಾರ್ ಸಂಬಂಧ ರಾಜಕೀಯದಾಚೆಗಿನದ್ದು. 1960ರಲ್ಲಿ ಇವರಿಬ್ಬರೂ ಟೈಮ್ ಮ್ಯಾಗಜೀನ್ ಜತೆ ಸ್ಪರ್ಧಿಸುವಂತಹ ನಿಯತಕಾಲಿಕೆ ಆರಂಭಿಸಲು ಬಯಸಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಬಾಳ ಠಾಕ್ರೆ ಬಳಿಕ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಅವರು ಪವಾರ್ ಕುಟುಂಬದ ಜತೆ ಉತ್ತಮ ಬಾಂಧವ್ಯ ಮುಂದುವರಿಸಿದ್ದರು.
ಪಕ್ಷಗಳ ನಡುವೆ ಒಡಕು
2005ರಲ್ಲಿ ಬಾಳ ಠಾಕ್ರೆ ಮತ್ತು ಶರದ್ ಪವಾರ್ 23 ವರ್ಷದ ಬಳಿಕ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ 1991ರಲ್ಲಿ ಶಿವಸೇನಾ ಮುಖಂಡ ಛಗನ್ ಬುಜ್ಬಲ್ ದೊಡ್ಡ ಸಂಖ್ಯೆಯ ಶಾಸಕರೊಂದಿಗೆ ಕಾಂಗ್ರೆಸ್ ಸೇರಿಕೊಂಡ ಬಳಿಕ ಇಬ್ಬರ ಸಂಬಂಧ ಹಳಸಿತ್ತು. 1995ರಲ್ಲಿ ಪವಾರ್ ಕಾಂಗ್ರೆಸ್ನಿಂದ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಅಧಿಕಾರದಿಂದ ಇಳಿಸಲು ಶಿವಸೇನಾ-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು. 1999ರಲ್ಲಿ ಶರದ್ ಪವಾರ್ ಎನ್ಸಿಪಿ ಸ್ಥಾಪಿಸಿದರು. 2006ರ ಸೆಪ್ಟೆಂಬರ್ನಲ್ಲಿ ರಾಜ್ಯಸಭೆ ಚುನಾವಣೆಗೆ ಮಗಳು ಸುಪ್ರಿಯಾ ಸುಳೆ ಅವರನ್ನು ಶರದ್ ಪವಾರ್ ಕಣಕ್ಕಿಳಿಸಿದಾಗ ಅವರ ಎದುರು ಶಿವಸೇನಾ ಅಭ್ಯರ್ಥಿಯನ್ನು ಇಳಿಸಿರಲಿಲ್ಲ.