ಹೋಟೆಲ್ ನ ಬೇಸ್ ಮೆಂಟ್ ನಲ್ಲಿ ಕಾಣಿಸಿಕೊಂಡಿತು ಚಿರತೆ, ಆಮೇಲೆ ಏನು?
ಮುಂಬೈ, ಫೆಬ್ರವರಿ 20: ಜನವಸತಿ ಪ್ರದೇಶಗಳಲ್ಲಿ ಚಿರತೆ ಓಡಾಟ ಕಂಡಿರಬಹುದು. ಅಷ್ಟೇ ಯಾಕೆ ಕೆಲ ತಿಂಗಳ ಹಿಂದೆ ತುಮಕೂರಿನ ಮನೆಯೊಂದಕ್ಕೆ ಚಿರತೆ ನುಗ್ಗಿತ್ತು. ಬುಧವಾರದಂದು ಏನಾಗಿದೆ ಗೊತ್ತೆ? ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಹೆಸರಾಂತ ಶಾಪಿಂಗ್ ಮಾಲ್ ಮತ್ತು ಹೋಟೆಲ್ ನಲ್ಲಿ ಚಿರತೆ ಅಡ್ಡಾಡುತ್ತಿರುವುದು ಕಂಡುಬಂದಿದೆ.
ಕತ್ತಲೆಯ ರಸ್ತೆಗೆ ಓಡುವ ಮುನ್ನ ಮಹಡಿಯ ಹಿಂಭಾಗದಲ್ಲಿ ಚಿರತೆ ಅವಿತಿಟ್ಟುಕೊಂಡಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ಅಡ್ಡಾಡದಂತೆ ಸ್ಥಳೀಯ ನಿವಾಸಿಗಳಿಗೆ ಹಾಗೂ ದಾರಿಹೋಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಲಘಟಗಿ ಜನರಲ್ಲಿ ಗಲಿಬಿಲಿ ಉಂಟು ಮಾಡಿದ ಬೃಹತ್ ಚಿರತೆ
ಮೊದಲಿಗೆ ಚಿರತೆಯು ಕೊರಂ ಮಾಲ್ ನ ವಾಹನ ನಿಲುಗಡೆ ಸ್ಥಳದಲ್ಲಿ ಕಾಣಿಸಿಕೊಂಡಿದೆ. ಆ ನಂತರ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಲಾಗಿದೆ ಎಂದು ಥಾಣೆಯ ಪಾಲಿಕೆ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥರಾದ ಸಂತೋಷ್ ಕದಮ್ ಹೇಳಿದ್ದಾರೆ.
ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಥಾಣೆಯ ಸಮತಾ ನಗರ್ ನಲ್ಲಿರುವ ಮಾಲ್ ತಲುಪಿದ್ದಾರೆ. ಆ ನಂತರ ಎರಡು ಗಂಟೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಅಷ್ಟಾದರೂ ಚಿರತೆ ಪತ್ತೆಯಾಗಿಲ್ಲ. ಕೊನೆಗೆ ಅಲ್ಲಿನ ಕಾಂಪೌಂಡ್ ಹಾರಿ ಚಿರತೆ ತಪ್ಪಿಸಿಕೊಂಡಿದೆ ಎಂದು ತೀರ್ಮಾನಕ್ಕೆ ಬರಲಾಗಿದೆ ಎಂದು ಕದಮ್ ಹೇಳಿದ್ದಾರೆ.
ಕೆಲವರು ಹೇಳುವಂತೆ, ಆ ನಂತರ ಮಾಲ್ ಹತ್ತಿರದ ಹೋಟೆಲ್ ಬೇಸ್ ಮೆಂಟ್ ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಅದನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.