ಭಾರತದ ಸಮಸ್ಯೆ ಬಳಸಿಕೊಂಡು ರಾಜಕೀಯ ಬೇಡ: ಕೆನಡಾ ಪ್ರಧಾನಿ ವಿರುದ್ಧ ಶಿವಸೇನೆ ಸಂಸದೆ ಕಿಡಿ
ಮುಂಬೈ,ಡಿಸೆಂಬರ್ 1:ಭಾರತದ ಆಂತರಿಕ ಸಮಸ್ಯೆಗಳನ್ನು ಬಳಸಿಕೊಂಡು ರಾಜಕೀಯ ಮಾಡಬೇಡಿ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊಗೆ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ತಿರುಗೇಟು ನೀಡಿದ್ದಾರೆ.
ಇತರ ದೇಶಗಳು ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯೆಂದು ಕಂಡುಕೊಳ್ಳುವ ಮೊದಲು ಈ ಬಿಕ್ಕಟ್ಟನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಜೀ ಅವರನ್ನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ಕಳೆದ ಆರು ದಿನಗಳಿಂದ ಬೃಹತ್ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕೆನಡಾ ಪ್ರಧಾನಿ ಜಸ್ಟೀನ್ ಟ್ರೂಡೋ ಅವರಿಗೆ ಪ್ರಿಯಾಂಕಾ ಚತುರ್ವೇದಿ ಆತ್ಮೀಯ ಜಸ್ಟಿನ್ ಟ್ರುಡೊ, ನಿಮ್ಮ ಕಾಳಜಿಯು ನಮಗೆ ತಿಳಿದಿದೆ.
ಆದರೆ ಭಾರತ ಆಂತರಿಕ ವಿಷಯವು ಬೇರೆ ರಾಷ್ಟ್ರಗಳ ರಾಜಕೀಯಕ್ಕೆ ಮೇವು ಅಲ್ಲ. ನಾವು ನಿಮ್ಮನ್ನು ಗೌರವಿಸುವ ಹಾಗೆ ನಮ್ಮನ್ನು ಗೌರವಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಕೆನಡಾ ಶಾಂತಿಯುತ ಪ್ರತಿಭಟನೆಗಳನ್ನು ಎಂದಿಗೂ ಬೆಂಬಲಿಸಲಿದೆ. ಮಾತುಕತೆಯಲ್ಲಿನ ಮಹತ್ವವನ್ನು ನಾವೂ ನಂಬುತ್ತೇವೆ. ನಾವು ನಮ್ಮ ಆತಂಕಗಳನ್ನು ನೇರವಾಗಿ ಹಲವು ವಿಧಾನಗಳ ಮೂಲಕ ಭಾರತೀಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ ಎಂದೂ ಕೆನಡಾ ಪ್ರಧಾನಿ ತಿಳಿಸಿದ್ದಾರೆ.
ಗುರು ನಾನಕ್ ಜಯಂತಿಯ ಆಚರಣೆಯ ಭಾಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಫೇಸ್ ಬುಕ್ ವಿಡಿಯೋ ಮೂಲಕ ಮಾತನಾಡಿದ್ದ ಟ್ರುಡೊ, ಭಾರತದಲ್ಲಿ ರೈತರು ಹೊಸ ಕೃಷಿ ಮಸೂದೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಗುರುತಿಸದೇ ಮಾತನಾಡಿದಲ್ಲಿ ನಾನು ಅಜಾಗರೂಕನಾಗುತ್ತೇನೆ, ಪರಿಸ್ಥಿತಿ ಆತಂಕಕಾರಿಯಾಗಿದ್ದು, ನಾವು ಸ್ನೇಹಿತರು ಹಾಗೂ ಸಂಬಂಧಿಕರ ಬಗ್ಗೆ ಚಿಂತಿತರಾಗಿದ್ದೇವೆ ಎಂದು ಹೇಳಿದ್ದರು.