'ವಿಪಕ್ಷಗಳ ಮಹಾಘಟಬಂಧನ ಭ್ರಮೆ, ಮತ್ತೆ ಅಧಿಕಾರಕ್ಕೆ ಬರೋದು ಬಿಜೆಪಿಯೇ!'
Recommended Video
ಮುಂಬೈ, ಡಿಸೆಂಬರ್ 19: ವಿಪಕ್ಷಗಳ ಮಹಾಘಟಬಂಧನ ಒಂದು ಭ್ರಮೆಯಷ್ಟೇ. 2019 ರಲ್ಲಿ ಮತ್ತೆ ಗೆಲ್ಲುವವರು ನಾವೇ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಮುಂಬೈಯಲ್ಲಿ ನಡೆದ ರಿಪಬ್ಲಿಕ್ ಸಮಿಟ್ ನಲ್ಲಿ ಮಾತನಾಡುತ್ತಿದ್ದ ಅವರು, 2019 ರ ಲೋಕಸಭಾ ಚುನಾವಣೆಯಲ್ಲೂ ಶಿವಸೇನೆ ಬಿಜೆಪಿಯೊಂದಿಗಿರುತ್ತದೆ ಎಂದರು.
ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡದಿದ್ದ ಅಮಿತ್ ಶಾ ಇದೀಗ ಜನತೆಯ ತೀರ್ಪಿಗೆ ತಲೆಬಾಗುತ್ತೇವೆ ಎಂದರು. ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಚುನಾವಣೆಗಳು 2019 ರ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಹೇಳಿಕೆ ತಪ್ಪು, ರಾಜ್ಯಗಳ ಚುನಾವಣೆ ನಡೆದಿದ್ದೇ ಬೇರೆಯ ವಿಷಯಗಳನ್ನು ಕೇಂದ್ರೀಕರಿಸಿ. ಆದರೆ ಲೋಕಸಭಾ ಚುನಾವಣೆಯ ಗಮನವಿರುವುದೇ ಬೇರೆ ವಿಷಯಗಳ ಮೇಲೆ ಎಂದು ಅವರು ಹೇಳಿದರು.
ಲೋಕಸಭೆ ಚುನಾವಣೆಗೂ ಮುನ್ನ ಎನ್ ಡಿಎ ವಿರುದ್ಧ 'ಮಾಜಿ'ಗಳ ಯುದ್ಧ!
ಶಿವಸೇನೆಯೊಂದಿಗೆ ಈಗಾಗಲೇ ನಾವು ಮಾತುಕತೆ ಆರಂಭಿಸಿದ್ದೇವೆ. ಅದು ನಮ್ಮೊಂದಿಗಿರುತ್ತದೆ ಎಂಬ ನಂಬಿಕೆ ನಮಗಿದೆ ಎಂದು ಅವರು ಹೇಳಿದರು.
ಮಹಾಘಟಬಂಧನ ಎಂಬ ಭ್ರಮೆ
"ವಿಪಕ್ಷಗಳ ಮಹಾಘಟಬಂಧನ ಒಂದು ಭ್ರಮೆಯಷ್ಟೆ. ಅದು ಅಸ್ತಿತ್ವದಲ್ಲೇ ಇಲ್ಲ" ಎಂದು ಅವರು ಹೇಳಿದರು. 2014 ರಲ್ಲಿ ನಾವು ಅವರೆಲ್ಲರ ವಿರುದ್ಧ ಹೋರಾಡಿದ್ದೇವೆ. ಅವರೆಲ್ಲ ಪ್ರಾದೇಶಿಕ ನಾಯಕರು. ಅವರು ಕಾಂಗ್ರೆಸ್ಸಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಮಹಾಘಟಬಂಧನ ಆರಂಭಕ್ಕೂ ಮುನ್ನವೇ ಮುರಿದು ಬೀಳುವುದು ಗ್ಯಾರಂಟಿ" ಎಂದು ಲೇವಡಿ ಮಾಡಿದರು.
ರಾಹುಲ್ ಸುಳ್ಳಿಗೆ ಸುಪ್ರೀಂ ಛೀಮಾರಿ: ಅಮಿತ್ ಶಾ ಲೇವಡಿ
ಪ್ರಚಾರದ ಮಾನದಂಡವೇನು?
ನಾವು ಕಳೆದ ಐದು ವರ್ಷಗಳಿಂದ ರಾಷ್ಟ್ರದ ಭದ್ರತೆಗೆ ಏನೆಲ್ಲ ಮಾಡಿದ್ದೇವೆ, ಭ್ರಷ್ಟಾಚಾರ ನಿರ್ಮೂಲನೆಗೆ ಪಣತೊಟ್ಟಿದ್ದೇವೆ. 8 ಕೋಟಿ ಮನೆಗಳಿಗೆ ಶೌಚಾಲಯ ಒದಗಿಸಿದ್ದೇವೆ. 2.5 ಕೋಟಿ ಮನೆಗಳಿಗೆ ವಿದ್ಯುತ್ ನೀಡಿದ್ದೇವೆ. ಇವುಗಳನ್ನೇ ನಾವು ಪ್ರಚಾರದ ಮಾನದಂಡವನ್ನಾಗಿ ಬಳಸುತ್ತೇವೆ.
ಚುನಾವಣಾ ಅಖಾಡಕ್ಕೆ ಮತ್ತೆ ತಯಾರಾದ ಬಿಜೆಪಿ: ನೀಲನಕ್ಷೆ ಈಗಲೇ ಸಿದ್ಧ
ದೇಶಕ್ಕೆ ಬಿಜೆಪಿ ಅನಿವಾರ್ಯ!
ಕೇವಲ ಬಿಜೆಪಿಗೆ ಮಾತ್ರವಲ್ಲ, ಈ ದೇಶಕ್ಕು ಒಂದು ಬಲಾಢ್ಯ ಸರ್ಕಾರದ ಅಗತ್ಯವಿದೆ. ಅದನ್ನು ಬಿಜೆಪಿ ನೀಡಲಿದೆ ಎಂದರು. ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಚುನಾವಣೆಗಳು ಬಿಜೆಪಿ ಪರವಾಗಿರಲಿಲ್ಲ ಎಂಬುದು ನಿಜ. ಆದರೆ ಅದನ್ನು 2019 ರ ಲೋಕಸಭೆ ಚುನಾವಣೆಗೆ ಜೋಡಿಸುವುದು ಸರಿಯಲ್ಲ. ಲೋಕಸಭೆ ಚುನಾವಣೆ ಬೇರೆಯದೇ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯಲಿದೆ ಎಂದ ಅಮಿತ್ ಶಾ, ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ ಎಂದರು.
ನಮ್ಮ ಬಲದೊಂದಿಗೆ ಹೋರಾಡುತ್ತೇವೆ
2014 ರಲ್ಲಿ ಬಿಜೆಪಿ ಕೇವಲ ಆರು ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಈಗ ನಾವು ಹದಿನಾರು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೇವೆ. ಈಗ ನೀವು ಹೇಳಿ, ಯಾರು 2019 ರಲ್ಲಿ ಅಧಿಕಾರಕ್ಕೆ ಬರುತ್ತಾರೆ? ಎಂದು ಅವರು ಪ್ರಶ್ನಿಸಿದರು. ನಾವು ನಮ್ಮ ಬಲದೊಂದಿಗೆ ಚುನಾವಣೆ ಎದುರಿಸುತ್ತೇವೆಯೇ ಹೊರತು ಮತ್ತೊಬ್ಬರ ದೌರ್ಬಲ್ಯವನ್ನು ಮುಂದಿಟ್ಟುಕೊಂಡಲ್ಲ ಎಂದು ಸ್ಪಷ್ಟಪಡಿಸಿದರು.