ವಕೀಲರ ವೇಷದಲ್ಲಿ ಬಂದು ನ್ಯಾಯಾಧೀಶರ ಮೇಲೆ ಕಬ್ಬಿಣದ ರಾಡ್ ಎಸೆದ ವೃದ್ಧ
ಮುಂಬೈ, ಜನವರಿ 3: ವಕೀಲರ ವೇಷದಲ್ಲಿದ್ದ 60 ವರ್ಷದ ವ್ಯಕ್ತಿಯೊಬ್ಬರು ನ್ಯಾಯಾಧೀಶರ ಮೇಲೆ ಕಬ್ಬಿಣದ ರಾಡ್ಅನ್ನು ಎಸೆದ ಘಟನೆ ಮಹಾರಾಷ್ಟ್ರದ ದಿಂಡೋಶಿಯಲ್ಲಿನ ಸೆಷನ್ಸ್ ನ್ಯಾಯಾಲಯದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಆ ರಾಡ್ ಅದೃಷ್ಟವಶಾತ್ ನ್ಯಾಯಾಧೀಶರಿಗೆ ತಗುಲದ ಕಾರಣ ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ನ್ಯಾಯಾಲಯದ ಸ್ಟೆನೋಗ್ರಾಫರ್ಗೆ ಪೆಟ್ಟಾಗಿದೆ.
ಬೆಳಿಗ್ಗೆ 11.10ರ ಸುಮಾರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್ ಯು ಬಾಘೆಲೆ ಅವರ ನ್ಯಾಯಾಲಯ ಕೊಠಡಿಗೆ ಬಂದಿದ್ದ ಆರೋಪಿ ಓಂಕಾರನಾಥ್ ಪಾಂಡೆ, 'ಕೃಷ್ಣ ದೇವ' ಎಂದು ಕೂಗಿ ನ್ಯಾಯಾಧೀಶರೆಡೆಗೆ ಕಬ್ಬಿಣದ ರಾಡ್ ಎಸೆದಿದ್ದರು.
ಇವರೇ ದೇಶದ ಅತ್ಯಂತ್ಯ ಕಿರಿಯ ನ್ಯಾಯಾಧೀಶರು: ಇದು ಹೊಸ ದಾಖಲೆ
ಈ ರಾಡ್ ನ್ಯಾಯಾಧೀಶರಿಗೆ ತಗುಲಲಿಲ್ಲ. ಬದಲಾಗಿ ಸ್ಟೆನೋಗ್ರಾಫರ್ಗೆ ತಾಗಿತು ಎಂದು ಕುರಾರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಬಾಬಸಾಹೇಬ್ ಸಾಲುಂಕೆ ತಿಳಿಸಿದ್ದಾರೆ. ಪಾಂಡೆ ಅವರನ್ನು ಕೂಡಲೇ ಹಿಡಿದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಕಿ ನಕ ಎಂಬಲ್ಲಿ ವಾಸಿಸುತ್ತಿದ್ದ ಪಾಂಡೆ, ವಾಚ್ಮನ್ ಕೆಲಸ ಮಾಡುತ್ತಿದ್ದರು. ಸರ್ಕಾರಿ ನೌಕರರೊಬ್ಬರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು. ಬಂಧನಕ್ಕೂ ಒಳಗಾಗಿದ್ದರು. ಅವರು ನ್ಯಾಯಾಧೀಶರ ಮೇಲೆ ದಾಳಿ ನಡೆಸಲು ಕಾರಣ ಏನೆಂಬುದು ಇನ್ನೂ ತಿಳಿದಿಲ್ಲ.
ನ್ಯಾಯವಾದಿಗಳ ದಿರಿಸಿನಲ್ಲಿ ಬಂದಿದ್ದ ಪಾಂಡೆ, ಈ ದಾಳಿಗೆ ಪ್ರಯತ್ನಿಸಿದ್ದರು. ಈ ಘಟನೆಯ ಬಳಿಕ ನ್ಯಾಯಾಲಯದ ಒಳಗೆ ಬರುವ ನ್ಯಾಯವಾದಿಗಳನ್ನು ಕೂಡ ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ.