ಚೌಕೀದಾರ ಕಳ್ಳ ಎಂದಿದ್ದು ಈ ಬಾರಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ
ಪಂಢರಾಪುರ (ಮಹಾರಾಷ್ಟ್ರ), ಡಿಸೆಂಬರ್ 24: 'ಚೌಕೀದಾರ್ ಚೋರ್ ಹೈ' (ಚೌಕೀದಾರ ಕಳ್ಳ) ಎಂಬ ಮಾತು ನಿಮಗೆ ನೆನಪಿದ್ದರೆ, ಅದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯಾವಾಗಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೀಗಳೆಯಲು ಹೇಳುವ ಮಾತಲ್ಲವಾ ಇದು ಎನ್ನುತ್ತೀರೇನೋ?!
ಇಲ್ಲ ಈ ಸಲ ಇದನ್ನು ಹೇಳಿರುವುದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ. ಪಂಢರಾಪುರದಲ್ಲಿ ನಡೆದ ಸಭೆಯಲ್ಲಿ ಅವರು ಹೀಗೆ ಹೇಳಿದ್ದಾರೆ. ಆದರೆ ಅವರು ಅದಕ್ಕಾಗಿ ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರವನ್ನೋ ಅಥವಾ ಕಾಂಗ್ರೆಸ್ ಮಾಡುವ ಇನ್ಯಾವುದೇ ದಾಳಿಯನ್ನೋ ಉದಾಹರಣೆಯಾಗಿ ನೀಡಿಲ್ಲ.
ರಾಮಮಂದಿರ ನಿರ್ಮಾಣ ಕೂಡಾ 'ಜೂಮ್ಲಾ' : ಉದ್ಧವ್ ಠಾಕ್ರೆ
ತಮ್ಮ ಪ್ರವಾಸದ ವೇಳೆ ರೈತರೊಬ್ಬರ ಜತೆಗೆ ನಡೆಸಿದ ಸಂವಾದದ ಪ್ರಸ್ತಾವ ಮಾಡಿದ್ದಾರೆ. "ನಿಂಬೆಹಣ್ಣಿನ ಮರಕ್ಕೆ ಕೀಟನಾಶಕ ಬಳಸುತ್ತಿದ್ದರು. ಆಗ ರೈತರೊಬ್ಬರು ತನ್ನ ಜೀವನದಲ್ಲಿ ಅಂಥ ದೃಶ್ಯ ನೋಡಿಲ್ಲ ಎಂದು ನನಗೆ ಹೇಳಿದರು. ಆಗ ಅವರಿಗೆ ಹೇಳಿದೆ, ದಿನಗಳು ಬದಲಾಗಿವೆ. ಕಾವಲು ಕಾಯಬೇಕಾದವರೇ ಕಳ್ಳರಾಗಿದ್ದಾರೆ" ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ರಫೇಲ್ ವ್ಯವಹಾರದ ಬಗ್ಗೆ ಕೂಡ ಮಾತನಾಡಿದ ಅವರು, ರಫೇಲ್ ಯುದ್ಧ ವಿಮಾನ ವ್ಯವಹಾರ ಸುತ್ತ ಹಲವು ಆರೋಪಗಳಿವೆ ಮತ್ತು ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟಿದೆ ಎಂಬ ಬಗ್ಗೆ ಗೊತ್ತಿಲ್ಲ. ಆದರೆ ಯೋಧರಿಗೆ ಸಂಬಳ ಹೆಚ್ಚಳ ಮಾಡಲು ಮೋದಿ ಸರಕಾರ ನಿರಾಕರಿಸಿರುವುದು ನನಗೆ ಗೊತ್ತಿದೆ ಎಂದಿದ್ದಾರೆ.
ರಫೇಲ್ ಖರೀದಿ ಬಗ್ಗೆ ಜಂಟಿ ಸದನ ಸಮಿತಿ ತನಿಖೆಗಾಗಿ ಕಾಂಗ್ರೆಸ್ ನಿಂದ ಅಭಿಯಾನ
ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳದಿರಲು ಶಿವಸೇನೆ ಜನವರಿಯಲ್ಲಿ ನಿರ್ಣಯ ಕೈಗೊಳ್ಳಂಡಿತ್ತು. ಈಚೆಗೆ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆದ ಮೇಲೆ ಆಯಾ ರಾಜ್ಯದ ಮತದಾರರಿಗೆ ಅಭಿನಂದನೆ ಸಲ್ಲಿಸಿ, ಧೈರ್ಯವಾದ ನಿರ್ಧಾರ ಎಂದು ಹೇಳಿತ್ತು.