ಮಹಾರಾಷ್ಟ್ರದಲ್ಲಿನ್ನು ಮಲ್ಟಿಪ್ಲೆಕ್ಸ್ ಗಳಿಗೆ ಹೊರಗಿನ ಆಹಾರ ಪ್ರವೇಶ, ಕರ್ನಾಟಕದಲ್ಲಿ?
ಮುಂಬೈ, ಜುಲೈ 13: ಮಹಾರಾಷ್ಟ್ರ ರಾಜ್ಯ ಸರಕಾರ ಒಂದೊಳ್ಳೆ ಆದೇಶ ಹೊರಡಿಸಿದೆ. ಅದು ಜುಲೈ ಹದಿಮೂರರ ಶುಕ್ರವಾರದಿಂದಲೇ ಜಾರಿಗೂ ಬರ್ತಿದೆ. ಇಷ್ಟು ಕಾಲ ಮಲ್ಟಿಪ್ಲೆಕ್ಸ್ ಗಳೊಳಗೆ ಹೊರಗಿನ ಆಹಾರ ಪದಾರ್ಥ ತೆಗೆದುಕೊಂಡು ಹೋಗಲು ಅನುಮತಿ ಇರಲಿಲ್ಲ. ಇನ್ನು ಮುಂದೆ ಹಾಗಲ್ಲ. ಮಹಾರಾಷ್ಟ್ರದಲ್ಲಿ ತಡೆ ಮಾಡುವಂತಿಲ್ಲ. ಹಾಗೆ ತಡೆದರೆ ಅಂಥ ಮಲ್ಟಿಪ್ಲೆಕ್ಸ್ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಸರಕಾರ ಹೇಳಿದೆ.
ಅಷ್ಟೇ ಅಲ್ಲ, ಮಲ್ಟಿಪ್ಲೆಕ್ಸ್ ನಲ್ಲಿ ಪಾನೀಯ ಹಾಗೂ ಆಹಾರ ಪದಾರ್ಥಗಳ ಬೆಲೆ ಹೆಚ್ಚಿದೆ ಎಂಬ ಆರೋಪದ ಬಗ್ಗೆ ಗಮನ ಇದ್ದು, ಶೀಘ್ರದಲ್ಲೇ ಅದನ್ನೂ ಬಗೆಹರಿಸುತ್ತೀವಿ ಎಂದು ಅಲ್ಲಿನ ಸಚಿವ ರವೀಂದ್ರ ಚವಾಣ್ ಹೇಳಿದ್ದಾರೆ. "ಇನ್ನು ಆರು ವಾರದಲ್ಲಿ ಈ ಬಗ್ಗೆ ಗೃಹ ಇಲಾಖೆಯಿಂದ ನೀತಿ ರೂಪಿಸಲಾಗುವುದು. ಕೇಂದ್ರ ಸರಕಾರದ ನಿಯಮ ಪ್ರಕಾರ ಎಂಆರ್ ಪಿ ಎಲ್ಲ ಕಡೆಯೂ ಒಂದೇ ಇರಬೇಕು" ಎಂದು ಕೂಡ ಹೇಳಿದ್ದಾರೆ.
ಟಿಕೆಟ್ ದರದಲ್ಲೂ 'ಬಾಹುಬಲ' ಮೆರೆದ ಬೆಂಗಳೂರು ಮಲ್ಟಿಪ್ಲೆಕ್ಸ್ ಗಳು
ಮಲ್ಟಿಪ್ಲೆಕ್ಸ್ ಗಳಲ್ಲಿ ಹೊರಗಿನ ಆಹಾರ ಪದಾರ್ಥ ತರಲು ಬಿಡುವುದಿಲ್ಲ. ಅಲ್ಲೇ ಖರೀದಿ ಮಾಡೋಣ ಅಂದರೆ ವಿಪರೀತ ದುಬಾರಿ ಎಂದು ಬಾಂಬೆ ಹೈ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು. ಆಗ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ನಿರ್ದೇಶನ ನೀಡಿತ್ತು.
ಅಂದಹಾಗೆ, ನಿಮಗೆ ಒಂದು ಸಿನಿಮಾ ನೋಡುವುದಕ್ಕೆ ಎಷ್ಟು ಖರ್ಚಾಗುತ್ತದೆ? ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಇಂಥ ಮಲ್ಟಿಪ್ಲೆಕ್ಸ್ ಗಳಿರುವ ನಗರಗಳವರಿಗೆ ಅಂತಲೇ ಈ ಪ್ರಶ್ನೆ. ಇಬ್ಬರು ಸಿನಿಮಾಗೆ ಹೋದರೆ ಟಿಕೆಟ್ ಗೆ ಎಷ್ಟಾಗುತ್ತದೆ? ಕಾರು ಅಥವಾ ದ್ವಿಚಕ್ರ ವಾಹನದ ಪಾರ್ಕಿಂಗ್ ಶುಲ್ಕ ಎಷ್ಟು? ಆ ನಂತರ ಪಾಪ್ ಕಾರ್ನ್, ಸಮೋಸ ಅಥವಾ ಕೂಲ್ ಡ್ರಿಂಕ್ಸ್ ಅಥವಾ ಇನ್ಯಾವುದೇ ಫುಡ್ ಐಟಮ್ ಗೆ ಎಷ್ಟು ಖರ್ಚಾಗುತ್ತದೆ?
ಕನ್ನಡ ಚಲನಚಿತ್ರ ನೋಡಬಯಸುವವರ ಬಾಯಿಗೆ ಶ್ಯಾವಿಗೆ ಪಾಯಸ
ವಾರದ ದಿನಗಳಲ್ಲಿ, ಮಾರ್ನಿಂಗ್ ಶೋಗಳಲ್ಲಿ, ಕನ್ನಡ ಸಿನಿಮಾಗಳಿಗೆ ಟಿಕೆಟ್ ಬೆಲೆ ಕಡಿಮೆ ಇರಬಹುದು. ಬುಕ್ ಮೈ ಶೋನಲ್ಲಿ ನಿಮಗೆ ಆಫರ್ ಬಂದಿದ್ದರೂ ಒಂದಿಷ್ಟು ಟಿಕೆಟ್ ಬೆಲೆ ಕಡಿಮೆ ಆಗಬಹುದು. ಆದರೆ ಪಾರ್ಕಿಂಗ್ ಹಾಗೂ ಫುಡ್ ಐಟಮ್ ಬೆಲೆ. ಅದರಲ್ಲೂ ಸಮೋಸ, ಚಿಪ್ಸ್, ಕೂಲ್ ಡ್ರಿಂಕ್ಸ್ ಪರಮ ದುಬಾರಿ. ಹಾಗಂತ ಹೊರಗಿನಿಂದ ನಾವೇ ಅವುಗಳನ್ನು ತೆಗೆದುಕೊಂಡು ಹೋಗುವುದಕ್ಕೂ ಬಿಡಲ್ಲ.
ಮಹಾರಾಷ್ಟ್ರ ಮಲ್ಟಿಪ್ಲೆಕ್ಸ್ ಗಳಲ್ಲಿ ಹೊಸ ಕಾನೂನು: ಅದು ಕರ್ನಾಟಕಕ್ಕೂ ಬರಬಾರದೇ.?
ಕರ್ನಾಟಕದಲ್ಲೂ ಯಾರಾದರೂ ಹೀಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಬಹುದೇನೋ ಅಂತ ಕಾಯೋಣವಾ? ಏಕೆಂದರೆ, ಈಚೆಗೆ ಮಲ್ಟಿಪ್ಲೆಕ್ಸ್ ಗಳೇ ಹೆಚ್ಚಾಗುತ್ತಿವೆ.
ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದಾಗ ಅದೇನೋ ಇನ್ನೂರು ರುಪಾಯಿಗಿಂತ ಹೆಚ್ಚು ಹಣ ಟಿಕೆಟ್ ಗೆ ವಸೂಲಿ ಮಾಡುವಂತಿಲ್ಲ ಅಂದಿದ್ದರು. ಆಮೇಲೆ ಷರತ್ತುಗಳು ಅನ್ವಯ ಅಂತ ಏನೇನೋ ಹೇಳಿ ನೀಟಾಗಿ ದಾರಿ ತಪ್ಪಿಸಲಾಯಿತು. ಅಲ್ಲಿಗೆ ಜೈ ಭುವನೇಶ್ವರಿ, ಜೈ ಕನ್ನಡಾಂಬೆ, ಜೈ ಕರ್ನಾಟಕ, ಟಿಪ್ಪುಸುಲ್ತಾನ್.