ಎನ್ಸಿಪಿ ನಾಯಕ ಏಕನಾಥ ಖಡ್ಸೆ ಪತ್ನಿ ವಿರುದ್ಧ ಜಾಮೀನು ರಹಿತ ವಾರಂಟ್
ಮುಂಬೈ, ಅಕ್ಟೋಬರ್ 12: ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್ಸಿಪಿ ನಾಯಕ ಏಕನಾಥ ಖಡ್ಸೆ ಅವರ ಪತ್ನಿ ಮಂದಾಕಿನಿ ಖಡ್ಸೆ ವಿರುದ್ಧ ವಿಶೇಷ ನ್ಯಾಯಾಲಯ ಮಂಗಳವಾರ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಮಂದಾಕಿನಿ ಖಡ್ಸೆ ಅವರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ತಿಂಗಳು ಜಾರಿ ನಿರ್ದೇಶನಾಲಯ ಪ್ರಾಸಿಕ್ಯೂಷನ್ ದೂರು (ಚಾರ್ಜ್ಶೀಟ್) ಸಲ್ಲಿಸಿದ ಬೆನ್ನಲ್ಲೆ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಏಕನಾಥ ಖಡ್ಸೆ ಮತ್ತು ಪತ್ನಿಗೆ ನಿರ್ದೇಶನ ನೀಡಿತ್ತು.
ಮಂದಾಕಿನಿ ನ್ಯಾಯಾಲಯ ವಿಚಾರಣೆಗೆ ಹಾಜರಾಗುವುದಾಗಿ ಪ್ರಮಾಣವಚನ ಮಾಡಿ ಆಕೆ ನ್ಯಾಯಾಲಯದ ಮುಂದೆ ಹಾಜರಾಗುವುದನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಮಂಗಳವಾರ ಹಾಜರಾಗುವುದಕ್ಕೆ ಮಂದಾಕಿನಿ ಅವರು ನೀಡಿದ ವೈದ್ಯಕೀಯ ವರದಿ ತೃಪ್ತಿಕರವಾಗಿಲ್ಲ ಎಂದು ಕೋರ್ಟ್ ಹೇಳಿದೆ. ಜೊತೆಗೆ ಆಕೆಯ ವಿರುದ್ಧ ವಾರಂಟ್ ಹೊರಡಿಸಿದೆ.
ಮಂದಾಕಿನಿ ಅವರ ನಡವಳಿಕೆ, ಸಮನ್ಸ್ ಮತ್ತು ಅಸಹಕಾರವನ್ನು ಪರಿಗಣಿಸಿ ಆಕೆ ಉದ್ದೇಶಪೂರ್ವಕವಾಗಿ ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಪ್ಪಿಸಿದ್ದಾಳೆ. ಆಕೆಯ ಅನುಪಸ್ಥಿತಿಯು ಉದ್ದೇಶಪೂರ್ವಕವಾಗಿದೆ ಎಂದು ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಅನ್ನು ಹೊರಡಿಸಿದೆ.
ತಾನು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ ಎಂದು ಖಡ್ಸೆ ಕೂಡ ಕಳೆದ ವಾರ ವಿಚಾರಣೆಗೆ ವಿನಾಯಿತಿ ಕೋರಿದರು. ಮಂಗಳವಾರ ವೈದ್ಯಕೀಯ ಆಧಾರದ ಮೇಲೆ ಮತ್ತೊಮ್ಮೆ ವಿನಾಯಿತಿ ಕೋರಲಾಗಿದೆ. ಅಕ್ಟೋಬರ್ 21 ರಂದು ಹಾಜರಾಗುವಂತೆ ನಿರ್ದೇಶಿಸುವಾಗ ನ್ಯಾಯಾಲಯ ವಿನಾಯಿತಿಯನ್ನು ಅನುಮತಿಸಿತು. ಆದರೆ ಪದೇ ಪದೇ ನ್ಯಾಯಾಲಯ ವಿಚಾರಣೆಗೆ ಹಾಜರಾಗುವುದನ್ನು ತಪ್ಪಿಸಿದ್ದರಿಂದ, ಅದಕ್ಕೆ ಸೂಕ್ತ ಮಾಹಿತಿ ನೀಡದೇ ಇರುವುದರಿಂದ ಮಂದಾಕಿನಿ ಅವರಿಗೆ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಇಡಿ ಖಡ್ಸೆ, ಅವರ ಪತ್ನಿ, ಅಳಿಯ ಗಿರಿಯಾ ಚೌಧರಿ ಮತ್ತು ಇತರ ಇಬ್ಬರನ್ನು ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಿದೆ. 2016 ರಲ್ಲಿ ಅವರು ಬಿಜೆಪಿಯಲ್ಲಿ ಕಂದಾಯ ಸಚಿವರಾಗಿದ್ದಾಗ ಕುಟುಂಬಕ್ಕೆ ಅನುಕೂಲವಾಗುವಂತೆ ಒಪ್ಪಂದ ಮಾಡಿಕೊಂಡು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಚೌಧರಿ ಬಂಧನದಲ್ಲಿದ್ದಾಗ ಇನ್ನೊಬ್ಬ ಸಹ-ಆರೋಪಿ ರವೀಂದ್ರ ಮೂಲೆಗೆ ಕಳೆದ ವಾರ ಜಾಮೀನು ನೀಡಲಾಯಿತು. ಈ ಆದೇಶವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಕೀಲ ಮೋಹನ್ ಟೆಕಾವಡೆ ಹೇಳಿದರು.