ವಾಗ್ಮೋರೆಯನ್ನು ಕಸ್ಟಡಿಗೆ ಪಡೆಯುವ ಯೋಜನೆಯಿಲ್ಲ: ಮಹಾರಾಷ್ಟ್ರ ಎಸ್ಐಟಿ
ಮುಂಬೈ, ಜೂನ್ 19: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿ ಕರ್ನಾಟಕ ಪೊಲೀಸ್ ವಿಶೇಷ ತನಿಖಾ ತಂಡದ ವಶದಲ್ಲಿರುವ ಪರಶುರಾಮ್ ವಾಗ್ಮೋರೆಯವರನ್ನು ಕಸ್ಟಡಿಗೆ ಪಡೆಯುವ ಯಾವುದೇ ಯೋಜನೆ ಇಲ್ಲ ಎಂದು ಮಹಾರಾಷ್ಟ್ರ ಎಸ್ಐಟಿ ಅಧಿಕಾರಿಗಳು ಹೇಳಿದ್ದಾರೆ.
ಸಿಪಿಐ ನಾಯಕ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ವಾಗ್ಮೋರೆಯನ್ನು ಕಸ್ಟಡಿಗೆ ಪಡೆಯುವ ಯಾವುದೇ ಯೋಜನೆಯಿಲ್ಲ ಎಂದು ಎಸ್ಐಟಿ ಅಧಿಕಾರಿಗಳು ಹೇಳಿದ್ದಾರೆ.
"ಆ ರೀತಿಯ ಯಾವುದೇ ಯೋಜನೆಗಳು ಸದ್ಯಕ್ಕೆ ನಮ್ಮ ಮುಂದಿಲ್ಲ. ಆದರೆ ತನಿಖೆಯ ಸಂದರ್ಭದಲ್ಲಿ ಆತನನ್ನು ಕಸ್ಟಡಿಗೆ ಪಡೆದುಕೊಳ್ಳಲಿದ್ದೇವೆ," ಎಂದು ಎಸ್ಐಟಿ ಅಧಿಕಾರಿಗಳು 'ಪಿಟಿಐ'ಗೆ ತಿಳಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 26 ವರ್ಷದ ಶ್ರೀರಾಮಸೇನೆ ಸದಸ್ಯ ವಾಗ್ಮೋರೆ ಸೇರಿ ಆರು ಜನರನ್ನು ಕರ್ನಾಟಕದ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಿಂದೆ ವಿಧಿ ವಿಜ್ಞಾನ ಪ್ರಯೋಗಾಲಯ ಗೌರಿ ಲಂಕೇಶ್, ಗೋವಿಂದ ಪನ್ಸಾರೆ ಮತ್ತು ಕನ್ನಡ ಸಾಹಿತಿ ಎಂ.ಎಂ. ಕಲಬುರ್ಗಿಯವರನ್ನು ಕೊಲ್ಲಲು ಒಂದೇ ಶಸ್ತ್ರವನ್ನು ಬಳಸಲಾಗಿದೆ ಎಂದು ಹೇಳಿತ್ತು. ಆದರೆ ಈ ಬಂದೂಕು ಇನ್ನೂ ಸಿಕ್ಕಿಲ್ಲ.
2015ರ ಫೆಬ್ರವರಿ 16ರಂದು ಪನ್ಸಾರೆ ಮೇಲೆ ಗುಂಡು ಹಾರಿಸಲಾಗಿತ್ತು. ಫೆಬ್ರವರಿ 20ರಂದು ಅವರು ಅಸುನೀಗಿದ್ದರು. ಈ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಎಸ್ಐಟಿ ಕೈಗೆತ್ತಿಕೊಂಡಿದ್ದು ಇಲ್ಲಿಯವರೆಗೆ ಯಾವುದೇ ಪ್ರಮುಖ ಸಾಕ್ಷ್ಯಗಳು, ಆರೋಪಿಗಳು ಇವರಿಗೆ ಸಿಕ್ಕಿಲ್ಲ.
ಈ ರೀತಿಯ ಕೊಲೆಯಲ್ಲಿ ಕರ್ನಾಟಕದ ಎಸ್ಐಟಿ ತಂಡಕ್ಕೆ ಈ ಸಂಬಂಧ ಮೊದಲ ಪ್ರಮುಖ ಸಾಕ್ಷ್ಯಗಳು ಮತ್ತು ಆರೋಪಿಗಳು ಸಿಕ್ಕಿದ್ದಾರೆ. ಆದರೆ ಇವರೆಲ್ಲಾ ಪನ್ಸಾರೆ ಮತ್ತು ಕಲಬುರ್ಗಿ ಕೊಲೆಯಲ್ಲಿ ಪಾಲ್ಗೊಂಡಿದ್ದ ಬಗ್ಗೆ ಸಾಕ್ಷಿಗಳಿಲ್ಲ ಎಂದು ಕರ್ನಾಟಕ ಎಸ್ಐಟಿ ಹೇಳಿದೆ. ಐದು ರಾಜ್ಯಗಳಲ್ಲಿ ಈ ಜಾಲ ಹಬ್ಬಿಕೊಂಡಿದ್ದು, ಕೆ.ಎಸ್. ಭಗವಾನ್ ಹತ್ಯೆಗೆ ತಂಡ ಸಂಚು ರೂಪಿಸಿತ್ತು ಎಂಬುದರ ಬಗ್ಗೆ ಮಾತ್ರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.