ಶಿವಸೇನೆ ಪಕ್ಷದ ಬಿಲ್ಲು ಮತ್ತು ಬಾಣ ಚಿಹ್ನೆಯನ್ನು ಯಾರೂ ಬಳಸುವಂತಿಲ್ಲ: ಉದ್ಧವ್ ಠಾಕ್ರೆ
ಮುಂಬೈ, ಜುಲೈ 8: ಶಿವಸೇನೆ ಮತ್ತು ಬಂಡಾಯ ಶಾಸಕರ ನಡುವಿನ ತಿಕ್ಕಾಟ ಮುಂದುವರೆದಿದ್ದು, ಶಿವಸೇನೆ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ಹೇಳಿದ್ದಾರೆ. ಮತ್ತು ಮಹಾರಾಷ್ಟ್ರದಲ್ಲಿ ಕೂಡಲೇ ಮಧ್ಯಂತರ ಚುನಾವಣೆ ನಡೆಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಬಂಡಾಯ ಶಾಸಕರು ಬಿಜೆಪಿ ಜೊತೆ ಸೇರಿ ಹೊಸ ಪಕ್ಷ ರಚನೆ ಮಾಡಿದ್ದರೂ, ಶಿವಸೇನೆ ಪಕ್ಷದ ಗುರುತಿಗಾಗಿ ಪೈಪೋಟಿ ಎದುರಾಗಿದೆ. ಜೂನ್ 29ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಉದ್ಧವ್ ಠಾಕ್ರೆ ಮೊದಲ ಬಾರಿ ಮಾಧ್ಯಮಗಳ ಜೊತೆ ನೇರ ಸಂವಾದ ನಡೆಸಿದ್ದಾರೆ.
ವಿವಾದಾತ್ಮಕ ಟ್ವೀಟ್: ಐಟಿ ಸೆಲ್ನ ಮುಖ್ಯಸ್ಥನನ್ನು ಕೈಬಿಟ್ಟ ಹರ್ಯಾಣ ಬಿಜೆಪಿ
ಪಕ್ಷದ ಉದ್ಧವ್ ಠಾಕ್ರೆ ಪಾಳಯವು ಏಕನಾಥ್ ಶಿಂಧೆ ಪಾಳೆಯದ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುತ್ತಿರುವುದರಿಂದ, ನ್ಯಾಯಾಂಗದ ಮೇಲೆ ತನಗೆ ವಿಶ್ವಾಸವಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. "ಸುಪ್ರೀಂ ಕೋರ್ಟ್ ನೀಡುವ ಜುಲೈ 11 ರ ತೀರ್ಪು ಭಾರತೀಯ ಪ್ರಜಾಪ್ರಭುತ್ವದ ಭವಿಷ್ಯವನ್ನು ನಿರ್ಧರಿಸುತ್ತದೆ ಹೊರತು ಶಿವಸೇನೆಯದ್ದಲ್ಲ" ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ತನ್ನ ಮೇಲೆ ವಿಶ್ವಾಸವಿಟ್ಟ ಪಕ್ಷದ ನಾಯಕರಿಗೆ ಧನ್ಯವಾದ ಹೇಳಿದ ಉದ್ಧವ್, ಪಕ್ಷವು ಇಂತಹ ಬಂಡಾಯ ಎದುರಿಸುತ್ತಿರುವುದು ಇದೇ ಮೊದಲಲ್ಲ. ಶಾಸಕರು ಬರುತ್ತಾರೆ, ಹೋಗುತ್ತಾರೆ ಆದರೆ ಪಕ್ಷದ ಅಸ್ತಿತ್ವ ಕೊನೆಗೊಳ್ಳುವುದಿಲ್ಲ ಎಂದರು. ಮಧ್ಯಂತರ ಚುನಾವಣೆಗೆ ಬೇಡಿಕೆ ಇಟ್ಟಿರುವ ಉದ್ಧವ್ ಠಾಕ್ರೆ, ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಬೇರೆ ಯಾರೂ ಬಳಸಲಾಗುವುದಿಲ್ಲ ಎಂದು ಹೇಳಿದರು.
ಬಂಡಾಯ ಶಾಸಕರ ವಿರುದ್ಧ ಠಾಕ್ರೆ ವಾಗ್ದಾಳಿ
"ಏಕನಾಥ್ ಶಿಂಧೆ ಬೆಂಬಲಿಗರಾಗಿರುವ ಕಾರ್ಪೋರೇಟರ್ಗಳು ಅವರ ಜೊತೆ ಸೇರುತ್ತಿದ್ದಾರೆ. ಶಿವಸೇನೆಯ ಸಹಾಯದಿಂದ ದೊಡ್ಡವರಾದವರು ತೊರೆದಿದ್ದಾರೆ, ಆದರೆ ಸೇನೆಯನ್ನು ದೊಡ್ಡವರು ಮಾಡುವವರು ಇನ್ನೂ ನಮ್ಮೊಂದಿಗಿದ್ದಾರೆ" ಎಂದು ಉದ್ಧವ್ ಹೇಳಿದರು.
ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ, "ಠಾಕ್ರೆ ಕುಟುಂಬಕ್ಕೆ ಅವಮಾನ ಮಾಡಿದವರ ಜೊತೆ ಈಗ ನೀವು ಕುಳಿತಿದ್ದೀರಿ" ಎಂದರು.
ಏಕನಾಥ್ ಶಿಂಧೆ ಸರ್ಕಾರದ ವಿರುದ್ಧದ ಕಾನೂನು ಹೋರಾಟವನ್ನು ಮುಂದುವರೆಸುವುದಾಗಿ ಉದ್ಧವ್ ಠಾಕ್ರೆ ಮತ್ತವರ ಬೆಂಬಲಿಗರು ತಿಳಿಸಿದ್ದಾರೆ. ಏಕನಾಥ್ ಶಿಂಧೆ ಬಣ ಮತ್ತು ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಕ್ಕಾಗಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ವಿರುದ್ಧ ನ್ಯಾಯಾಲಯಕ್ಕೆ ಠಾಕ್ರೆ ಮತ್ತು ತಂಡ ಹೊಸ ಮನವಿ ಸಲ್ಲಿಸಿದೆ.
ಶಿವಸೇನೆಯ 39 ಬಂಡಾಯ ಶಾಸಕರ ಮುಖ್ಯಸ್ಥರಾಗಿ ಏಕನಾಥ್ ಶಿಂಧೆ ಅವರನ್ನು ನೂತನ ಒಕ್ಕೂಟದ ಮುಖ್ಯಮಂತ್ರಿಯಾಗಿಸಲು ರಾಜ್ಯಪಾಲರು ಕರೆ ನೀಡಿರುವುದು ಅಸಂವಿಧಾನಿಕ ಎಂದು ತಮ್ಮ ಮನವಿಯಲ್ಲಿ ಸೇನೆಯ ಪ್ರಧಾನ ಕಾರ್ಯದರ್ಶಿ ಸುಭಾಷ್ ದೇಸಾಯಿ ಹೇಳಿದ್ದಾರೆ. ಹತ್ತನೇ ಶೆಡ್ಯೂಲ್ ಅಡಿಯಲ್ಲಿ ಅವರನ್ನು ಅನರ್ಹಗೊಳಿಸುವಂತೆ ಮನವಿ ಮಾಡಿದೆ.
ಬಂಡಾಯ ಶಾಸಕರ ಅಮಾನತು ಮತ್ತು ಅನರ್ಹತೆ ಕೋರಿ ಉದ್ಧವ್ ಬಣದ ಹಿಂದಿನ ಅರ್ಜಿಗಳು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿದ್ದು, ಜುಲೈ 11 ರಂದು ವಿಚಾರಣೆ ನಡೆಯಲಿದೆ.