ಪಾಲ್ಗರ್ ಸಾಧುಗಳ ಹತ್ಯೆ: ಬಂಧಿತರಲ್ಲಿ ಯಾರೂ ಮುಸ್ಲಿಮರು ಇಲ್ಲ
ಮುಂಬೈ, ಏಪ್ರಿಲ್ 22: ದೇಶವನ್ನೇ ಬೆಚ್ಚಿಬೀಳಿಸಿದ ಪಾಲ್ಗಾರ್ ಸಾಧುಗಳ ಹತ್ಯೆಯ ಸಂಬಂಧ, ಬಂಧಿತರಲ್ಲಿ ಯಾರೊಬ್ಬರೂ ಮುಸ್ಲಿಮರು ಇಲ್ಲ ಎಂದು ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶಮುಖ್ ತಿಳಿಸಿದ್ದಾರೆ.
"ಇದುವರೆಗೆ ಬಂಧಿತರಾದ 101 ಜನರಲ್ಲಿ ಯಾರೂ ಮುಸ್ಲಿಮರು ಇಲ್ಲ, ವಿರೋಧ ಪಕ್ಷಗಳು ಈ ವಿಚಾರವನ್ನು ಇಟ್ಟುಕೊಂಡು, ರಾಜ್ಯದಲ್ಲಿ ಕೋಮು ಪ್ರಚೋದನೆ ನೀಡಲು ಮುಂದಾಗಿವೆ" ಎಂದು ಸಚಿವರು ಆರೋಪಿಸಿದ್ದಾರೆ.
ಲಾಕ್ಡೌನ್ ಹೊಡೆತ: ಸಣ್ಣ ಕೈಗಾರಿಕೆಗಳ ನೆರವಿಗೆ ಕೇಂದ್ರ ಸರ್ಕಾರ
ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ದೇಶಮುಖ್, "ಈ ವಿಚಾರವನ್ನು ಇಟ್ಟುಕೊಂಡು ಠಾಕ್ರೆ ಸರಕಾರಕ್ಕೆ ತೊಂದರೆ ಮಾಡುವ ಕನಸನ್ನು ಕೆಲವರು ಕಾಣುತ್ತಿದ್ದಾರೆ. ಇದು ರಾಜಕೀಯ ಮಾಡುವ ಸಮಯವಲ್ಲ. ಕೊರೊನಾ ವೈರಸ್ ವಿರುದ್ದ ಹೋರಾಡುವ ಸಮಯ" ಎಂದು ಹೇಳಿದ್ದಾರೆ.
ಏಪ್ರಿಲ್ ಹದಿನಾರರ ರಾತ್ರಿ ಇಬ್ಬರು ಸಾಧುಗಳು ಮತ್ತು ಒಬ್ಬ ಡ್ರೈವರ್ ಮುಂಬೈನಿಂದ ಸೂರತ್ ಗೆ ಕಾರಿನಲ್ಲಿ, ತಮ್ಮ ಗುರುಗಳ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲು ಹೊರಟಿದ್ದಾಗ, ಇವರ ಹತ್ಯೆಯಾಗಿತ್ತು.
ಮಹಾರಾಷ್ಟ್ರದ ಪಾಲ್ಗಾರ್ ನಿಂದ 110 ಕಿ.ಮೀ ದೂರದಲ್ಲಿರುವ ಗಡ್ಡಿಂಚಾಲೆ ಗ್ರಾಮಕ್ಕೆ ಇವರ ಕಾರು ಬಂದಾಗ, ಇವರುಗಳನ್ನು ಮಕ್ಕಳ ಕಳ್ಳರೆಂದು ಭಾವಿಸಿದ ಗ್ರಾಮಸ್ಥರು ಮೂವರನ್ನೂ, ಕಾರಿನಿಂದ ಬಲವಂತವಾಗಿ ಎಳೆದು ಹೊರಹಾಕಿ, ಹೊಡೆದು ಸಾಯಿಸಿದ್ದರು.
ಪೊಲೀಸರ ಎದುರೇ ಈ ಘಟನೆಗೆ ದೇಶವೇ ಬೆಚ್ಚಿಬಿದ್ದಿತ್ತು. ಮಹಾರಾಷ್ಟ್ರ ಗೃಹಸಚಿವ ದೇಶಮುಖ್, ರಾಜೀನಾಮೆ ನೀಡಬೇಕೆಂದು, ಬಿಜೆಪಿ ಆಗ್ರಹಿಸಿತ್ತು.