ಮಧ್ಯಸ್ಥಿಕೆ ವಹಿಸಲು ಸಿದ್ಧ, ಆದರೆ ಸಿಎಂ ಪಟ್ಟ ಬಿಟ್ಟುಕೊಡಲ್ಲ: ಗಡ್ಕರಿ
ಮುಂಬೈ, ನವೆಂಬರ್ 08: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಡೆಡ್ ಲೈನ್ ಇಂದು ಮುಕ್ತಾಯವಾಗಲಿದ್ದು, ಬಿಜೆಪಿ, ಶಿವಸೇನೆ ನಡುವೆ ಮಧ್ಯಸ್ಥಿಕೆಗೆ ಸಿದ್ಧ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
"ನಾನು ಸರದಕಾರ ರಚನೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಶಿವಸೇನೆ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ. ಆದರೆ 50:50 ಸೂತ್ರಕ್ಕೆ ನಾನು ಒಪ್ಪಿಗೆ ನೀಡುವುದಿಲ್ಲ. ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರೇ ಮುಂದುವರಿಯಬೇಕು ಎಂದು ಗಡ್ಕರಿ ಹೇಳಿದರು.
ಗಡುವು ಮುಗಿದರೂ ಸರಿಯೇ, ಮಹಾರಾಷ್ಟ್ರಕ್ಕೆ ದೇವೇಂದ್ರ ಫಡ್ನವಿಸ್ ಸಿಎಂ!
ನವದೆಹಲಿಯಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಗಡ್ಕರಿ, "ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಪಕ್ಷದಿಂದಲೇ ಮುಖ್ಯಮಂತ್ರಿ ಆಯ್ಕೆಯಾಗಬೇಕು ಎಂದು ನಾವು ಮಾತ್ರ ಹೇಳುತ್ತಿಲ್ಲ. ಶಿವಸೇನೆ ಸಂಸ್ಥಾಪಕ ದಿ.ಬಾಳ್ ಠಾಕ್ರೆ ಅವರೂ ಹಲವು ಬಾರಿ ಅದನ್ನು ಹೇಳಿದ್ದರು" ಎಂದು ಗಡ್ಕರಿ ನೆನಪಿಸಿದರು.
ಕಳೆದ ಅಕ್ಟೋಬರ್ 21 ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಟೋಬರ್ 24 ರಂದು ಹೊರಬಿದ್ದಿದ್ದು, ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 145. ಆದರೆ ಬಿಜೆಪಿ ಏಕಾಂಗಿಯಾಗಿ ಈ ಸ್ಥಾನ ಪಡೆಯಲು ಅಶಕ್ತವಾಗಿದ್ದರಿಂದ ಶಿವಸೇನೆಯ ಬೆಂಬಲ ಬಿಜೆಪಿಗೆ ಅನಿವಾರ್ಯವಾಗಿದೆ. ಇತ್ತ ಶಿವಸೇನೆಗೆ ಬೆಂಬಲ ನೀಡಲು ಎನ್ ಸಿಪಿ, ಕಾಂಗ್ರೆಸ್ ಸಿದ್ಧವಾಗಿದ್ದು, ಅದಕ್ಕೆ ಶಿವಸೇನೆ ಒಪ್ಪಿಕೊಂಡರೆ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ.