ಕ್ರಿಕೆಟ್ ಶೈಲಿಯಲ್ಲೇ ನಿತಿನ್ ಗಡ್ಕರಿ ಕಾಲೆಳೆದ ಎನ್ಸಿಪಿ
ಮುಂಬೈ, ನವೆಂಬರ್ 27: ಮಹಾರಾಷ್ಟ್ರ ಸರ್ಕಾರ ರಚನೆ ಕುರಿತು ಕ್ರಿಕೆಟ್ ಶೈಲಿಯಲ್ಲಿ ಪ್ರತಿಪಕ್ಷಗಳ ಕಾಲೆಳೆದಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಈಗ ಎನ್ಸಿಪಿ ತಿರುಗೇಟು ನೀಡಿದೆ.
ಕ್ರಿಕಟ್ ಕೊನೆಯ ಓವರ್ಗಳಲ್ಲಿ ಏನು ಬೇಕಾದರೂ ಆಗಬಹುದು ಎಂದು ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗುವ ಮುನ್ನ ಗಡ್ಕರಿ ಹೇಳಿಕೆ ನೀಡಿದ್ದರು.
ಬೆಳಗಿನ ಜಾವದ ಹೈಡ್ರಾಮಾ ಬಳಿಕ ಮುಖ್ಯಮಂತ್ರಿಯಾದ ದೇವೇಂದ್ರ ಫಡ್ನವಿಸ್ ಕುರಿತು ಮತ್ತೆ ಮಾತನಾಡಿದ್ದ ಗಡ್ಕರಿ ನಾನು ಈ ಹಿಂದೆ ಹೇಳಿರಲಿಲ್ಲವೇ ಕ್ರಿಕೆಟ್ ಹಾಗೂ ರಾಜಕೀಯದಲ್ಲಿ ಕೊನೆಯ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದಿದ್ದರು.
ಆದರೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಅಧಿಕಾರದಿಂದ ಕೆಳಗಿಳಿದ ಬಳಿಕ ಈಗ ಎನ್ಸಿಪಿ ನಾಯಕರು ಗಡ್ಕರಿ ಕಾಲೆಳೆಯಲು ಆರಂಭಿಸಿದ್ದಾರೆ.
ಎನ್ಸಿಪಿ ಮುಖಂಡ ನವಾಬ್ ಮಲ್ಲಿಕ್ ಈ ಸಂಬಂಧ ಹೇಳಿಕೆ ನೀಡಿ ಕ್ರಿಕೆಟ್ ಹಾಗೂ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ನಿತಿನ ಗಡ್ಕರಿ ಹೇಳುತ್ತಿದ್ದರು.
ಬಹುಶಃ ಶರದ್ ಪವಾರ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಅಧ್ಯಕ್ಷರಾಗಿದ್ದನ್ನು ಗಡ್ಕರಿ ಮರೆತಂತಿದೆ. ಗಡ್ಕರಿ ಅವರೇ ಇದು ಕ್ಲೀನ್ ಬೋಲ್ಡ್ ಅಲ್ಲವೇ ಎಂದು ಕಿಚಾಯಿಸಿದ್ದಾರೆ.
ಡಿಸೆಂಬರ್.01 ಅಲ್ಲ, ನವೆಂಬರ್.28 ಮಹಾ ಸಿಎಂ ಪಟ್ಟಾಭಿಷೇಕ
ಫಡ್ನವಿಸ್ ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಬಳಿಕ ಬಿಜೆಪಿ ನಾಯಕರು ಇದೇ ರೀತಿ ಕಾಂಗ್ರೆಸ್, ಶಿವಸೇನೆ ಹಾಗೂ ಎನ್ಸಿಪಿ ನಾಯಕರ ಕಾಲೆಳೆದಿದ್ದರು.ಈಗ ಅದೇ ಬಿಜೆಪಿಗೆ ತಿರುಗುಬಾಣವಾಗುತ್ತಿದೆ.
ಯಾವುದೇ ತಂತ್ರಗಾರಿಕೆ ಫಲನೀಡದೆ , ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಬಿಜೆಪಿ ಸದ್ಧವಾಗಿರುವ ಬೆನ್ನಲ್ಲೇ ಆಡಳಿತಾರೂಢ ಪಕ್ಷಗಳ ಈ ಹೇಳಿಕೆಗಳು ಮಹಾರಾಷ್ಟ್ರ ರಾಜಕೀಯದಲ್ಲಿ ಇನ್ನಷ್ಟು ವಾಗ್ವಾದಕ್ಕೆ ಕಾರಣವಾಗಬಹುದು.