ನೀರವ್ ಮೋದಿಗೆ ಸೇರಿದ್ದ ಕಲಾಕೃತಿಗಳ ಹರಾಜಿನಿಂದ 50 ಕೋಟಿ ಸಂಗ್ರಹ ನಿರೀಕ್ಷೆ
ಮುಂಬೈ (ಮಹಾರಾಷ್ಟ್ರ), ಮಾರ್ಚ್ 26: ದೇಶದಿಂದ ಪಲಾಯನ ಮಾಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ್ದ ತೈಲ ಚಿತ್ರಗಳನ್ನು ಮಂಗಳವಾರ ಹರಾಜು ಹಾಕಲು ಮುಂದಾಗಿದ್ದು, ಸರಕಾರ ಜಪ್ತಿ ಮಾಡಿಕೊಂಡಿರುವ ಇವುಗಳಿಗೆ ಕೋಟಿಗಟ್ಟಲೆ ಹಣ ಬರಬಹುದು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿರೀಕ್ಷೆ ಮಾಡಿದ್ದಾರೆ.
ಅರವತ್ತೆಂಟು ಕಲಾಕೃತಿಗಳಿದ್ದು, ಅವುಗಳಿಗೆ ಮೂವತ್ತರಿಂದ ಐವತ್ತು ಕೋಟಿ ರುಪಾಯಿ ಹಣ ಸಂಗ್ರಹ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ನಡೆಯಲಿದೆ. ಸಾಮಾನ್ಯವಾಗಿ ಆಸ್ತಿ, ಒಡವೆ, ವಾಹನ ಇಂಥವುಗಳನ್ನು ಹರಾಜು ಹಾಕಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಕಲಾಕೃತಿಗಳನ್ನು ಹಣ ವಸೂಲಾತಿಗಾಗಿ ಹರಾಜು ಹಾಕುತ್ತಿರುವುದಾಗಿ ಹರಾಜುದಾರರು ತಿಳಿಸಿದ್ದಾರೆ.
ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ
ಕೋರ್ಟ್ ನ ಅದೇಶದ ಅನುಸಾರ ಈ ಹರಾಜು ನಡೆಯುತ್ತಿದೆ. ಅದಕ್ಕಾಗಿ ವೃತ್ತಿನಿರತ ಹರಾಜು ಸಂಸ್ಥೆ ಸ್ಯಾಫ್ರನ್ ಆರ್ಟ್ ಅವರನ್ನೇ ನೇಮಿಸಲಾಗಿದೆ. ಕೆಲವು ವರ್ಷಗಳ ಹಿಂದಿನ ತನಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕಲಾ ಕೃತಿಗಳ ಮೌಲ್ಯ ತಿಳಿದಿರಲಿಲ್ಲ ಎಂದು ಈ ಹರಾಜಿನಲ್ಲಿ ಭಾಗವಹಿಸಲು ಬಯಸುವ ವ್ಯಕ್ತಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ನೀರವ್ ಮೋದಿ ಬಳಿ ಇದ್ದ ಕಲಾಕೃತಿಗಳಲ್ಲಿ ರಾಜಾ ರವಿ ವರ್ಮ, ಹತ್ತೊಂಬತ್ತನೇ ಶತಮಾನದ ಕಲಾಕಾರ ವಿ.ಎಸ್.ಗಾಯ್ತೊಂಡೆ ಮತ್ತಿತರರ ಕಲಾಕೃತಿಗಳು ಇವೆ.