ಮನ್ಸುಖ್ ಹಿರೇನ್ ಕೊಲೆ ಸಂಚಿನ ಸಭೆಯಲ್ಲಿ ವಾಜೆ ಮತ್ತು ಶಿಂದೆ ಭಾಗಿ: ಎನ್ಐಎ
ಮುಂಬೈ, ಮಾರ್ಚ್ 31: ಅಮಾನತುಗೊಂಡಿರುವ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಜೆ ಮತ್ತು ವಜಾಗೊಂಡಿರುವ ಕಾನ್ಸ್ಟೆಬಲ್ ವಿನಾಯಕ್ ಶಿಂದೆ ಇಬ್ಬರೂ, ಮನ್ಸುಖ್ ಹಿರೇನ್ ಅವರನ್ನು 'ಮುಗಿಸಿಬಿಡಲು' ಸಂಚು ರೂಪಿಸುವ ಸಲುವಾಗಿ ಸಭೆ ನಡೆಸಿದ್ದರು ಎಂದು ವಿಶೇಷ ನ್ಯಾಯಾಲಯಕ್ಕೆ ಎನ್ಐಎ ತಿಳಿಸಿದೆ.
ಫೆಬ್ರವರಿ 25ರಂದು ಮುಕೇಶ್ ಅಂಬಾನಿ ಅವರ ಮನೆ ಮುಂದೆ ಜಿಲೆಟಿನ್ ಕಡ್ಡಿ ಹಾಗೂ ಬೆದರಿಕೆ ಪತ್ರದೊಂದಿಗೆ ಪತ್ತೆಯಾದ ಸ್ಕಾರ್ಪಿಯೋ ಕಾರನ್ನು ಆಟೊಮೊಬೈಲ್ ಬಿಡಿ ಭಾಗಗಳ ವ್ಯಾಪಾರಿ ಮನ್ಸುಖ್ ಹಿರೇನ್ ಬಳಸುತ್ತಿದ್ದರು. ಈ ಘಟನೆ ಭಾರಿ ಸದ್ದು ಮಾಡಿದ ಬೆನ್ನಲ್ಲೇ ಮಾರ್ಚ್ 5ರಂದು ಮುಂಬೈನ ಕಾಲ್ವಾದ ಕೊಳ್ಳವೊಂದರಲ್ಲಿ ಮನ್ಸುಖ್ ಮೃತದೇಹ ಪತ್ತೆಯಾಗಿತ್ತು. ಅದು ಅತ್ಮಹತ್ಯೆ ಎಂದು ಪೊಲೀಸರು ಹೇಳಿದ್ದರೂ, ಅವರನ್ನು ಕೊಲೆ ಮಾಡಲಾಗಿದೆ ಎಂದು ಎನ್ಐಎ ಹೇಳಿದೆ.
ಮುಕೇಶ್ ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣ: ಸಚಿನ್ ವಾಜೆಗೆ ಸೇರಿದ ಮತ್ತೊಂದು ಕಾರು ವಶ
ಆ ಸಭೆಯಲ್ಲಿ ವಾಜೆ ಮತ್ತು ಶಿಂದೆ ಇಬ್ಬರೂ ಭಾಗವಹಿಸಿದ್ದರು ಎಂದು ಸಾಕ್ಷಿದಾರನೊಬ್ಬ ಹೇಳಿಕೆ ನೀಡಿರುವುದಾಗಿ ಎನ್ಐಎ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸುನಿಲ್ ಗೊನ್ಸಾಲ್ವೆಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸಾಕ್ಷಿದಾರನು ವಾಜೆಗೆ ಒಂದು ಫೋನ್ ಹಸ್ತಾಂತರಿಸಿದ್ದ. ಮನ್ಸುಖ್ ಹಿರೇನ್ ಅವರನ್ನು ಮುಗಿಸಿಬಿಡಲು ಸಂಚುಕೋರರನ್ನು ಸಂಪರ್ಕಿಸಲು ಈ ಫೋನ್ ಅನ್ನು ಬಳಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಹಿರೇನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 20ರಂದು ಶಿಂದೆ ಹಾಗೂ ಕ್ರಿಕೆಟ್ ಬುಕಿ ನರೇಶ್ ಗೌರ್ ಇಬ್ಬರನ್ನೂ ಮಹಾರಾಷ್ಟ್ರ ಎಟಿಎಸ್ ಬಂಧಿಸಿತ್ತು. ಎನ್ಐಎ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಬಳಿಕ ಅವರಿಬ್ಬರನ್ನೂ ಮಾರ್ಚ್ 24ರಂದು ಎನ್ಐಎ ವಶಕ್ಕೆ ಒಪ್ಪಿಸಲಾಗಿತ್ತು. ಅವರನ್ನು ಮತ್ತಷ್ಟು ಸಮಯದವರೆಗೆ ವಿಚಾರಣೆ ನಡೆಸಲು ತಮ್ಮ ವಶಕ್ಕೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಎನ್ಐಎ ಮನವಿ ಮಾಡಿಎ.