ಮಾಲೆಂಗಾವ್ ಸ್ಫೋಟ ಪ್ರಕರಣ: ಸಾಧ್ವಿ ಪ್ರಗ್ಯಾ ಸಿಂಗ್ ಗೆ ಹಿನ್ನಡೆ
ಮುಂಬೈ, ಜೂನ್ 20: 2008ರ ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿ, ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಅವರಿಗೆ ಗುರುವಾರದಂದು ಎನ್ಐಎ ವಿಶೇಷ ನ್ಯಾಯಾಲಯದಿಂದ ಕಹಿ ಸುದ್ದಿ ಸಿಕ್ಕಿದೆ. ವಿಚಾರಣೆಗೆ ಖುದ್ದು ಹಾಜರಾತಿ ವಿನಾಯತಿ ಕೋರಿ ಸಾಧ್ವಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.
ಸಾಧ್ವಿ ಅವರು ಕಳೆದ ವೇಳೆ ವಿಚಾರಣೆಗೆ ಹಾಜರಾದಾಗ ಅವರಿಗೆ ಕೂರಲು ಅನುಕೂಲವಾಗುವಂತೆ ಬೆಂಚಿನ ಮೇಲೆ ಕೇಸರಿ ಬಣ್ಣದ ಮೃದುವಾದ ಬಟ್ಟೆ ಹಾಸಲಾಗಿತ್ತು. ನಂತರ ಕೇಸರಿ ಉಡುಪು ಧರಿಸಿ ಬಂದಿದ್ದ ಸಾಧ್ವಿ ಅವರನ್ನು ಆರೋಪಿ ಕಟಕಟೆಗೆ ಬರುವಂತೆ ಸೂಚಿಸಲಾಯಿತು.
ಗುರುವಿನ ಹೆಸರು ಬಳಕೆ: ಸಾಧ್ವಿ ಪ್ರಗ್ಯಾ ಪ್ರಮಾಣವಚನ ಸ್ವೀಕಾರಕ್ಕೆ ಅಡ್ಡಿ
ಅನಾರೋಗ್ಯ ಹಾಗೂ ದೈಹಿಕ ಪರಿಸ್ಥಿತಿಯನ್ನು ಗಮನಿಸಿ, ಶಾಶ್ವತವಾಗಿ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಸಾಧ್ವಿಯಾಗಿರುವುದರಿಂದ ಕಠಿಣ ನೀತಿ, ನೇಮಗಳನ್ನು ಅನುಸರಿಸಬೇಕಾಗುತ್ತದೆ. ಹೀಗಾಗಿ, ಭೋಪಾಲ್ ನಿಂದ ಮುಂಬೈಗೆ ವಿಚಾರಣೆಗಾಗಿ ಪ್ರತಿ ವಾರ ಪ್ರಯಾಣ ಮಾಡುವುದು ಕಷ್ಟಕರ, ಹೀಗಾಗಿ, ವಿನಾಯತಿ ನೀಡಿ ಎಂದು ಪ್ರಗ್ಯಾ ಪರ ವಕೀಲ ಜೆಪಿ ಮಿಶ್ರಾ ಅವರು ಅರ್ಜಿ ಹಾಕಿದ್ದರು.
ಪಕ್ಷದಿಂದ ವಿಪ್ ಜಾರಿಯಲ್ಲಿದೆ ಎಂದ ಪ್ರಗ್ಯಾ ಪರ ವಕೀಲ
ಸದ್ಯ ಜೂನ್ 17ರಿಂದ 17ನೇ ಲೋಕಸಭೆಯ ಮುಂಗಾರು ಅಧಿವೇಶನ ಜಾರಿಯಲ್ಲಿದೆ. ಪಕ್ಷದಿಂದ ವಿಪ್ ಜಾರಿಯಲ್ಲಿದೆ. ಹೀಗಾಗಿ, ನನ್ನ ಕಕ್ಷಿದಾರರು ಭೋಪಾಲ್ ಕ್ಷೇತ್ರದ ಸಂಸದೆಯಾಗಿದ್ದು, ಪ್ರತಿ ದಿನ ತಪ್ಪದೇ ದೆಹಲಿಗೆ ತೆರಳಿ, ಸಂಸತ್ತಿಗೆ ಹಾಜರಾಗಿ, ಸದನದ ಕಲಾಪದಲ್ಲಿ ಭಾಗವಹಿಸಬೇಕಿದೆ. ಜುಲೈ 26ರ ತನಕ ಅಧಿವೇಶನ ಜಾರಿಯಲ್ಲಿರಲಿದೆ ಎಂದು ವಕೀಲ ಮಿಶ್ರಾ ಅವರು ವಾದಿಸಿದ್ದಾರೆ.
ಮೊದಲ ದಿನವೇ ಸಂಸತ್ನಲ್ಲಿ ಗದ್ದಲಕ್ಕೆ ಕಾರಣವಾದ ಸಾದ್ವಿ ಪ್ರಜ್ಞಾ ಸಿಂಗ್
ವಿಪ್ ಜಾರಿ ಬಗ್ಗೆ ಯಾವುದೆ ದಾಖಲೆ ಒದಗಿಸಿಲ್ಲ
ಆದರೆ. ಎನ್ಐಎ ನ್ಯಾಯಾಲಯದ ವಿಶೇಷ ಜಡ್ಜ್ ವಿ.ಎಸ್ ಪಡಲ್ಕರ್ ಅವರು, ಇದೆಲ್ಲವನ್ನು ಸೂಕ್ತ ಕಾರಣ ಎಂದು ಪರಿಗಣಿಸಲಾಗುವುದಿಲ್ಲ, ಗುರುವಾರದಂದು ಒಂದು ದಿನದ ಮಟ್ಟಿಗೆ ಖುದ್ದು ಹಾಜರಾತಿಯಿಂದ ವಿನಾಯತಿ ನೀಡಲಾಗುವುದು ಎಂದು ಆದೇಶದಲ್ಲಿ ಹೇಳಿದರು. ಸಂಸತ್ ಕಲಾಪದಲ್ಲಿ ಭಾಗವಹಿಸಬೇಕಾಗಿರುವುದು ಸಂಸದರ ಕರ್ತವ್ಯ ಆದರೆ, ವಿಪ್ ಜಾರಿ ಬಗ್ಗೆ ಯಾವುದೆ ದಾಖಲೆ ಒದಗಿಸಿಲ್ಲ ಎಂದು ಜಡ್ಜ್ ತಿಳಿಸಿದರು.
ಮಹಾರಾಷ್ಟ್ರದ ಮಾಲೇಗಾಂವ್ ನಲ್ಲಿ ನಡೆದ ಸ್ಫೋಟ
2008 ರ ಸೆಪ್ಟಂಬರ್ 29 ರಂದು ಮಹಾರಾಷ್ಟ್ರದ ಮಾಲೇಗಾಂವ್ ನ ಮಸೀದಿ ಬಳಿ ನಿಲ್ಲಿಸಿದ ಮೋಟರ್ ಸೈಕಲ್ ಸ್ಫೋಟದಲ್ಲಿ 6 ಮಂದಿ ಸಾವನ್ನಪ್ಪಿ, ಸುಮಾರು 100 ಮಂದಿ ಗಾಯಗೊಂಡಿದ್ದರು. ಈ ಸ್ಫೋಟಕ್ಕೆ ಹಿಂದೂ ತೀವ್ರವಾದಿಗಳು ಕಾರಣ ಎಂದು ಶಂಕೆ ವ್ಯಕ್ತವಾಗಿತ್ತು.
6 ಮಂದಿ ಇತರೆ ಆರೋಪಿಗಳ ವಿರುದ್ಧ ಆರೋಪ
ಪ್ರಗ್ಯಾ ಹಾಗೂ ಲೆ. ಕರ್ನಲ್ ಪ್ರಸಾದ್ ಪುರೋಹಿತ್, ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ್, ಸುಧಾಕರ್ ದ್ವಿವೇದಿ, ಅಜಯ್ ರಾಹಿರ್ಕರ್, ಸಮೀರ್ ಕುಲಕರ್ಣಿ ಹಾಗೂ ಸುಧಾಕರ್ ಚತುರ್ವೇದಿ 6 ಮಂದಿ ಇತರೆ ಆರೋಪಿಗಳ ವಿರುದ್ಧ ಯುಎಪಿಎ, ಐಪಿಸಿ ವಿವಿಧ ಸೆಕ್ಷನ್ ಗಳಡಿಯಲ್ಲಿ ಐಪಿಸಿ ಸೆಕ್ಷನ್ 302,120,324, 153 ಎ ಹಾಗೂ ಯುಎಪಿಎ ಸೆಶಹ್ನ್ 16, 18 ಅನ್ವಯ ಪ್ರಕರಣ ದಾಖಲಾಗಿದೆ.