ಇಸ್ಲಾಂ ಧಾರ್ಮಿಕ ಭಾಷಣಗಾರ ಜಾಕೀರ್ ಆಸ್ತಿ ವಶಕ್ಕೆ ಆದೇಶ
ಮುಂಬೈ, ಅಕ್ಟೋಬರ್ 12: ಇಸ್ಲಾಂ ಧಾರ್ಮಿಕ ಭಾಷಣಗಾರ ಜಾಕೀರ್ ಖಾನ್ ಅವರಿಗೆ ಸೇರಿರುವ ಮುಂಬೈಯಲ್ಲಿರುವ ಆಸ್ತಿಯನ್ನು ವಶ ಪಡಿಸಿಕೊಳ್ಳುವಂತೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ವಿಶೇಷ ನ್ಯಾಯಲಯವು ಇಂದು ಆದೇಶ ನೀಡಿದೆ.
ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಹಾಗೂ ಜಾಕೀರ್ ನಾಯ್ಕ್ ಅವರ ಪೀಸ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಕ್ರಮ ಜರುಗಿಸಲು ಗೃಹ ಸಚಿವಾಲಯ ಮುಂದಾಗಿದೆ.
ಈಗಾಗಲೇ ಭಯೋತ್ಪಾದನಾ ವಿರೋಧಿ ಕಾನೂನಿನಡಿ ಜಾಕೀರ್ ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್ ಎಫ್) ಎನ್ಜಿಒ 5 ವರ್ಷಗಳ ಕಾಲಕ್ಕೆ ನಿಷೇಧಿಸಿ 2016ರಲ್ಲಿ ಆದೇಶ ಹೊರಡಿಸಲಾಗಿದೆ.
ಧರ್ಮ ಪ್ರಚಾರಕ ಜಾಕಿರ್ ನಾಯಕ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಿದ್ದಾರೆ. ಜಾಕಿರ್ ನಾಯಕ್ ಅವರ ಎರಡು ವಿದ್ಯಾ ಸಂಸ್ಥೆ, ಎನ್ಜಿಒ, ಟಿವಿ ವಾಹಿನಿ ವಿರುದ್ಧವೂ ಪ್ರಕರಣಗಳಿವೆ.
ಜಾಕೀರ್ ನಾಯಕ್ ಎನ್ ಜಿಒ 5 ವರ್ಷಗಳ ಕಾಲ ನಿಷೇಧ
ಸರ್ಕಾರೇತರ ಸಂಸ್ಥೆಯಾದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್ ಎಫ್) ನಿಂದ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ(ಎಫ್ ಸಿಆರ್ ಎ) 2010ರ ಉಲ್ಲಂಘನೆಯಾಗಿದೆ. ಕಾನೂನು ಉಲ್ಲಂಘನೆ, ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು, ಮುಂತಾದ ಆರೋಪಗಳಿವೆ.
ಆರ್ಥಿಕ ಅವ್ಯವಹಾರಗಳ ಆರೋಪ ಹೊತ್ತಿರುವ ಇಸ್ಲಾಂ ಧರ್ಮ ಬೋಧಕ ಜಾಕಿರ್ ನಾಯಕ್ ಅವರ ವಿರುದ್ಧ ಮುಂಬೈನ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ.
ಜಾಕಿರ್ ಅವರ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಆದಾಯ ತೆರಿಗೆ ಇಲಾಖೆಯು ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಪದೇ ಪದೇ ನೋಟಿಸ್ ಜಾರಿಗೊಳಿಸಿದರೂ ಇಲ್ಲಿ ತನಕ ಪ್ರತಿಕ್ರಿಯಿಸಿಲ್ಲ.