ಮಹಾರಾಷ್ಟ್ರ ವಿಧಾನಸಭೆಯಲ್ಲಿ ನೂತನ ಶಾಸಕರ ಪ್ರಮಾಣವಚನ
ಮುಂಬೈ, ನವೆಂಬರ್ 27: ಮಹಾರಾಷ್ಟ್ರ ವಿಧಾನಸಭೆಯಲ್ಲಿ ನೂತನ ಶಾಸಕರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಹಾರಾಷ್ಟ್ರ ನಾಟಕೀಯ ಬೆಳವಣಿಗೆ ಮಂಗಳವಾರಕ್ಕ ಅಂತ್ಯಗೊಂಡಿದೆ.
ಉದ್ಧವ್ ಠಾಕ್ರೆ ನೂತನ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅದಕ್ಕೂ ಮೊದಲು ವಿಧಾನಸಭೆಯಲ್ಲಿ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅಣ್ಣನ ಮಗ ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ನೀಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಫಡ್ನವಿಸ್ ರಾಜೀನಾಮೆಗೆ ಪತ್ನಿಯ ಕಾವ್ಯಾತ್ಮಕ ಪ್ರತಿಕ್ರಿಯೆ
ಈಗ ಅಜಿತ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ನೀಡಿದ್ದ ಬೆಂಬಲ ಹಿಂಪಡೆದಿದ್ದಾರೆ. ಇಂದು ಎನ್ಸಿಪಿ ನಾಯಕರು ಅವರಿಗೆ ಭಾರೀ ಸ್ವಾಗತ ಕೋರಿದ್ದಾರೆ.
ಈ ವೇಳೆ ಎನ್ಸಿಪಿ ಶಾಸಕರು ನಾಯಕ ಅಜಿತ್ ಪವಾರ್ಗೆ ಭರ್ಜರಿ ಸ್ವಾಗತ ಕೋರಿದರು.ಎನ್ಸಿಪಿ ನಾಯಕಿ ಸುಪ್ರಿಯಾ ಸುಲೆ ಮಾತನಾಡಿ, "ನಾನು ಅಜಿತ್ ಪವಾರ್ ಜೊತೆ ವೈಮನಸ್ಸು ಹೊಂದಿಲ್ಲ. ಪಕ್ಷದಲ್ಲಿ ಎಲ್ಲರ ಪಾತ್ರವೂ ಇದೆ. ಪಕ್ಷವನ್ನು ಮುನ್ನಡೆಸುವುದು ಎಲ್ಲರ ಕರ್ತವ್ಯ," ಎಂದು ಹೇಳಿದ್ದಾರೆ.
ಬಹುಮತ ಸಾಬೀತು ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಸಾಕಷ್ಟು ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.
ಕಳೆದ ಮೂರ್ನಾಲ್ಕು ದಿನದಿಂದ ಮಾಧ್ಯಮಗಳ ಕಣ್ಣಿನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಾದ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಕೂಡ ರಾಜೀನಾಮೆ ನೀಡಿದರು.