ಪವಾರ್ ಹೇಳಿದ್ದು ಅರ್ಥ ಮಾಡಿಕೊಳ್ಳಲು ನೂರು ಜನ್ಮ ಬೇಕು
ಮುಂಬೈ, ನವೆಂಬರ್ 20: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳುವುದನ್ನು ಅರ್ಥಮಾಡಿಕೊಳ್ಳಲು ನೂರು ಜನ್ಮವೆತ್ತಿ ಬರಬೇಕಾಗುತ್ತದೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಾವತ್, ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸುವ ಕುರಿತು ಸೋಮವಾರ ತದ್ವಿರುದ್ಧವಾಗಿ ಹೇಳಿಕೆ ನೀಡಿದ ಶರದ್ ಪವಾರ್ ಅವರ ನಡೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಸೇನಾಕ್ಕೆ ಸಿಎಂ ಸ್ಥಾನ, ಎನ್ಸಿಪಿ-ಕಾಂಗ್ರೆಸ್ಸಿಗೆ 2 ಡಿಸಿಎಂ ಹೊಸ ಡೀಲ್?
'ಶರದ್ ಪವಾರ್ ಮತ್ತು ನಮ್ಮ ಮೈತ್ರಿಕೂಟದ ಬಗ್ಗೆ ನೀವು ಚಿಂತೆ ಪಡಬೇಡಿ. ಶೀಘ್ರದಲ್ಲಿಯೇ ಡಿಸೆಂಬರ್ ಆರಂಭದಲ್ಲಿ ಶಿವಸೇನಾ ನೇತೃತ್ವದ ಸರ್ಕಾರವು ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಅದು ಸ್ಥಿರ ಸರ್ಕಾರವಾಗಿರಲಿದೆ' ಎಂದು ಹೇಳಿದರು.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಮಹಾರಾಷ್ಟ್ರ ರೈತರ ಪರಿಸ್ಥಿತಿಯ ಕುರಿತು ಸೋಮವಾರ ರಾತ್ರಿ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ಬಿಜೆಪಿಯನ್ನು ಮೊಹಮ್ಮದ್ ಘೋರಿಗೆ ಹೋಲಿಸಿದ ಶಿವಸೇನಾ
ಶಿವಸೇನಾ ಸರ್ಕಾರ ರಚಿಸುವುದರ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ಅದರ ಬಗ್ಗೆ ಗೊಂದಲಗಳನ್ನು ಸೃಷ್ಟಿಮಾಡುತ್ತಿರುವುದು ಮಾಧ್ಯಮಗಳು ಎಂದು ರಾವತ್ ಆರೋಪಿಸಿದರು.
ಮೋದಿ ಗುರು ಪವಾರ್
'ಪ್ರಧಾನಿ ನರೇಂದ್ರ ಮೋದಿ ಅವರು ಪವಾರ್ ಅವರನ್ನು ಹೊಗಳಿದರೆ ಏನು ತಪ್ಪು? ಈ ಹಿಂದೆ ಪವಾರ್ ತಮ್ಮ ರಾಜಕೀಯ ಗುರು ಎಂದು ಮೋದಿ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದರು. ಈ ವಿಚಾರದಲ್ಲಿ ಯಾವುದೇ ರಾಜಕೀಯ ಬೆರೆಸಬೇಡಿ' ಎಂದರು.
ತನ್ನ ಮಾಜಿ ಮಿತ್ರಪಕ್ಷ ಶಿವಸೇನಾ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸೇನಾ ಜತೆಗಿನ ಮೈತ್ರಿ ಮುರಿದುಕೊಳ್ಳುವ ಮೂಲಕ ಬಿಜೆಪಿ ತನ್ನ ಅತ್ಯಂತ ಹಳೆಯ ಮತ್ತು ದೊಡ್ಡ ಮಿತ್ರಪಕ್ಷವನ್ನು ಕಳೆದುಕೊಂಡಿದೆ ಎಂದರು.
ಬಿಜೆಪಿ ಬೆಳೆಸಿದ್ದೇ ಶಿವಸೇನಾ
'ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಬೆಳೆಸಿದ್ದೇ ಶಿವಸೇನಾ. ಅವರಿಗೆ ಸೀಟುಗಳನ್ನು ನೀಡಿದೆವು. ಅವರಿಗೆ ಯಾವಾಗಲೂ ಆಶ್ರಯ ನೀಡಿದೆವು. ಆದರೆ ಇಂದು ಬಿಜೆಪಿ ಸಂಸತ್ನಲ್ಲಿ ಶಿವಸೇನಾ ಸಂಸದರ ಸೀಟುಗಳ ವ್ಯವಸ್ಥೆಯನ್ನೇ ಬದಲಿಸಿದೆ. ಅದಕ್ಕೆ ಅವರು ಬೆಲೆ ತೆರಬೇಕಾಗುತ್ತದೆ' ಎಂದು ಎಚ್ಚರಿಸಿದರು.
ಅಮಿತ್ ಶಾರಿಂದಾಗಿ ಮೈತ್ರಿ ನಡೆದಿತ್ತು
ಇತ್ತೀಚೆಗೆ ಕೂಡ ಶಿವಸೇನಾಕ್ಕೆ ಬಿಜೆಪಿ ಜತೆಗೆ ಮೈತ್ರಿ ಮುಂದುವರಿಸಲು ಇಷ್ಟವಿರಲಿಲ್ಲ. ಆದರೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ನಿವಾಸ 'ಮಾತೋಶ್ರೀ'ಗೆ ಬಂದು ರಾಜ್ಯದಲ್ಲಿ ಸಹಭಾಗಿತ್ವದ ಹೋರಾಟದ ಕುರಿತು ಪ್ರಸ್ತಾಪಿದ ಕಾರಣಕ್ಕಾಗಿ ಮಾತ್ರವೇ ಮೈತ್ರಿ ಮಾಡಿಕೊಳ್ಳಲಾಗಿತ್ತು ಎಂದರು.
ಗೊಂದಲ ಮೂಡಿಸಿದ್ದ ಪವಾರ್ ಹೇಳಿಕೆ
ಶಿವಸೇನಾ ಮತ್ತು ಬಿಜೆಪಿ ಜತೆಯಾಗಿ ಚುನಾವಣೆ ಎದುರಿಸಿದ್ದವು. ಎನ್ಸಿಪಿ-ಕಾಂಗ್ರೆಸ್ ಜತೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಹೀಗಿರುವಾಗ ನಮ್ಮ ನಡುವೆ ಮೈತ್ರಿ ಹೇಗೆ ಸಾಧ್ಯ? ಅವರು (ಬಿಜೆಪಿ-ಸೇನಾ) ತಮ್ಮದೇ ಮಾರ್ಗ ನೋಡಿಕೊಳ್ಳಲಿ. ನಾವು ನಮ್ಮ ರಾಜಕೀಯ ನೋಡಿಕೊಳ್ಳುತ್ತೇವೆ ಎಂದು ಶರದ್ ಪವಾರ್ ನವದೆಹಲಿಯಲ್ಲಿ ಹೇಳಿದ್ದರು.
ಆದರೆ, ಪವಾರ್ ಸಾಹೇಬರೊಂದಿಗೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವುದಾಗಿ ಶಿವಸೇನಾ ಹೇಳುತ್ತಿದೆಯಲ್ಲ ಎಂಬ ಪ್ರಶ್ನೆಗೆ, 'ಹೌದಾ?' ಎಂದು ಮರುಪ್ರಶ್ನೆ ಹಾಕಿದ್ದರು.