ಮಹಾರಾಷ್ಟ್ರದಲ್ಲಿ ಭಾರೀ ಮಳೆ; 9 NDRF ತಂಡಗಳ ನಿಯೋಜನೆ
ಮುಂಬೈ, ಜುಲೈ 22: ಮಹಾರಾಷ್ಟ್ರದಲ್ಲಿ ಎರಡು ದಿನಗಳಿಂದೀಚೆ ಭಾರೀ ಮಳೆಯಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಕ್ಕೆ ಒಂಬತ್ತು ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಅಧಿಕ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮುಂಬೈ ನಗರವೊಂದಕ್ಕೇ ನಾಲ್ಕು ತಂಡಗಳನ್ನು ನಿಯೋಜಿಸಲಾಗಿದೆ.
ಮುಂಬೈ, ದೆಹಲಿಯಲ್ಲಿ ಮುಂಗಾರು ಚುರುಕು ಪ್ರವಾಹದಂಥಾ ಮಳೆ
ಮುಂಬೈನ ಥಾಣೆ ಹಾಗೂ ಪಾಲ್ಗಾರ್ ಜಿಲ್ಲೆಗಳಲ್ಲಿ ಬುಧವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಕೆಲವು ಗ್ರಾಮಗಳು ಜಲಾವೃತವಾಗಿದ್ದು, ಎನ್ಡಿಆರ್ಎಫ್ ತಂಡಗಳು ಪ್ರವಾಹದಲ್ಲಿ ಸಿಲುಕಿದ್ದ ನೂರಾರು ಮಂದಿಯನ್ನು ರಕ್ಷಣೆ ಮಾಡಿವೆ.
ಮುಂಬೈ ಕರಾವಳಿ ತೀರಗಳಲ್ಲಿ ಹೆಚ್ಚಿನ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಜೊತೆಗೆ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಕಸಾರ ಬಳಿಯ ಉಂಬ್ರೇಲಿ ನಿಲ್ದಾಣದಲ್ಲಿನ ಪ್ಲಾಟ್ಫಾರ್ಮ್ವರೆಗೆ ನೀರು ತುಂಬಿಕೊಂಡಿದೆ. ಘಾಟ್ ಬಳಿಯ ರೈಲ್ವೆ ಹಳಿಗಳ ಮೇಲೆ ಬಂಡೆಗಳು ಉರುಳಿದ್ದು, ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಥಾಣೆ ಹಾಗೂ ಪಾಲ್ಗಾರ್ ಜಿಲ್ಲೆಗಳಿಗೆ ಎರಡು ತಂಡಗಳನ್ನು ನಿಯೋಜಿಸಲಾಗಿದೆ. ರತ್ನಗಿರಿ ಜಿಲ್ಲೆಗೆ ಒಂದು ಎನ್ಡಿಆರ್ಎಫ್ ತಂಡವನ್ನು, ಕೊಲ್ಲಾಪುರಕ್ಕೆ ಎರಡು ತಂಡಗಳನ್ನು ನಿಯೋಜಿಸಲಾಗಿದೆ.
ಗುರುವಾರ ಬೆಳಿಗ್ಗೆ ಥಾಣೆಯ ಮೋದಕ್ ಸಾಗರ್ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿ ಪ್ರವಾಹ ಸೃಷ್ಟಿಯಾಗಿದೆ. ಶುಕ್ರವಾರದವರೆಗೂ ಮಹಾರಾಷ್ಟ್ರ, ದೆಹಲಿಯಲ್ಲಿ ಮಳೆ ಮುಂದುವರೆಯಲಿದ್ದು, ಆನಂತರ ನಿಯಂತ್ರಣಕ್ಕೆ ಬರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.