ಶಿವಸೇನಾ ಬಹುಕಾಲದ ಬೇಡಿಕೆಗೆ ಅಸ್ತು ಎಂದ ಎನ್ಸಿಪಿ
ಮುಂಬೈ, ನವೆಂಬರ್ 15: ಶಿವಸೇನಾ, ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ (ಸಿಎಂಪಿ) ಕರಡನ್ನು ಅಂತಿಮಗೊಂಡ ಬೆನ್ನಲ್ಲೇ ಶಿವಸೇನಾದ ಬಹುಕಾಲದ ಬೇಡಿಕೆಗೂ ಎನ್ಸಿಪಿ ಅಸ್ತು ಎಂದಿದೆ. ಹೊಸ ವ್ಯವಸ್ಥೆಯಡಿಯಲ್ಲಿ ಶಿವಸೇನಾಕ್ಕೆ ಸಿಎಂ ಪಟ್ಟ ಒಲಿಯಲಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ಮಹಾರಾಷ್ಟ್ರದಲ್ಲಿ ಎನ್ಸಿಪಿ-ಕಾಂಗ್ರೆಸ್- ಶಿವಸೇನಾ ಸೇರಿ ಸರ್ಕಾರ ರಚಿಸುವ ಪ್ರಯತ್ನದ ಹಾದಿ ಸುಗಮಗೊಂಡಂತಾಗಿದೆ.
ಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ರಚನೆಗೆ ಹಾದಿ ಸುಗಮ
ರೈತರ ಸಾಲ ಮನ್ನಾ, ಬೆಳೆ ವಿಮೆ ಯೋಜನೆಯ ಪರಾಮರ್ಶೆ, ನಿರುದ್ಯೋಗ, ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಛತ್ರಪತಿ ಶಿವಾಜಿ ಮಹಾರಾಜ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಸ್ಮಾರಕಗಳ ನಿರ್ಮಾಣ ಸೇರಿದಂತೆ ಅನೇಕ ಅಂಶಗಳನ್ನು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ (ಸಿಎಂಪಿ) ಒಳಗೊಂಡಿದೆ.
ಮಹಾರಾಷ್ಟ್ರದಲ್ಲಿ ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಚುನಾವಣೆ ಫಲಿತಾಂಶ ಪ್ರಕಟವಾಗಿ 20 ದಿನಗಳಾದರೂ ಸರ್ಕಾರ ರಚಿಸುವಲ್ಲಿ ಯಾವುದೇ ಪಕ್ಷ ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯಪಾಲ ಕೋಶ್ಯಾರಿ ಅವರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದರು.ಸರ್ಕಾರ ರಚನೆಗೆ ಅಗತ್ಯ ಬೆಂಬಲವಿದೆ ಎಂದು 24 ಗಂಟೆಗಳಲ್ಲಿ ತೋರಿಸುವಂತೆ ಶಿವಸೇನಾಕ್ಕೆ ಸೂಚಿಸಲಾಗಿತ್ತು. ಆದರೆ ಬಿಜೆಪಿಗೆ 48 ಗಂಟೆಗಳನ್ನು ನೀಡಲಾಗಿದೆ, ಈ ರೀತಿಯ ತಾರತಮ್ಯ ನೀತಿಗೆ ಅಕ್ಷೇಪಿಸಿದರೂ ಫಲ ಸಿಗಲಿಲ್ಲ ಎಂದು ಶಿವಸೇನಾ ಆರೋಪಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.