ಪರಮ್ಬೀರ್ ಸಿಂಗ್ ದೆಹಲಿಯಲ್ಲಿ ಯಾರನ್ನು ಭೇಟಿಯಾಗಿದ್ದಾರೆಂದು ಗೊತ್ತು: ನವಾಬ್ ಮಲಿಕ್
ಮುಂಬೈ, ಮಾರ್ಚ್ 22: ಭ್ರಷ್ಟಾಚಾರ ಆರೋಪಕ್ಕೆ ತುತ್ತಾಗಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಎನ್ಸಿಪಿ ವಕ್ತಾರ ನವಾಬ್ ಮಲಿಕ್ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಹೇಳುತ್ತಿರುವಂತೆ ಅನಿಲ್ ದೇಶ್ಮುಖ್ ಸುದ್ದಿಗೋಷ್ಠಿ ನಡೆಸಿದ್ದು ಮತ್ತು ಕೋವಿಡ್-19 ಕ್ವಾರೆಂಟೈನ್ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದು ಆಧಾರ ರಹಿತ ಆರೋಪ ಎಂದಿದ್ದಾರೆ.
ಫೆಬ್ರವರಿ 15ರಂದು ಅನಿಲ್ ದೇಶ್ಮುಖ್ ಅವರು ಅಸ್ಪತ್ರೆಯಿಂದ ಬಿಡುಗಡೆಯಾದಾಗ ಆಸ್ಪತ್ರೆಯ ಹೊರಗೆ ಕೆಲವು ವರದಿಗಾರರು ಇದ್ದರು. ಅವರು ದೇಶ್ಮುಖ್ ಜತೆ ಮಾತನಾಡಲು ಬಯಸಿದ್ದರು. ಆದರೆ ಅವರು ಬಹಳ ಆಯಾಸಗೊಂಡಿದ್ದರು. ಹೀಗಾಗಿ ಕುರ್ಚಿಯಲ್ಲಿ ಕುಳಿತಿದ್ದರು. ಪತ್ರಕರ್ತರು ಕೆಲವು ಪ್ರಶ್ನೆಗಳನ್ನು ಕೇಳಿದ್ದರು ಎಂದು ನವಾಬ್ ಹೇಳಿದ್ದಾರೆ.
ಮಹಾರಾಷ್ಟ್ರ 'ಕಲೆಕ್ಷನ್' ವಿವಾದ: ಲೋಕಸಭೆಯಲ್ಲಿ ಕೋಲಾಹಲ
ಕ್ವಾರೆಂಟೈನ್ನಲ್ಲಿ ಅವರು ಯಾವ ಅಧಿಕಾರಿಯನ್ನೂ ಭೇಟಿ ಮಾಡಿಲ್ಲ. ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ನೇರವಾಗಿ ಮುಂಬೈಗೆ ತೆರಳಿ ಅಲ್ಲಿ ಮನೆಯಲ್ಲಿ ಕ್ವಾರೆಂಟೈನ್ ಆಗಿದ್ದರು. ಫೆ. 27ರವರೆಗೂ ಕ್ವಾರೆಂಟೈನ್ ಆಗಿದ್ದರು. ಅದುವರೆಗೂ ಯಾರನ್ನೂ ಸಹ ಭೇಟಿ ಮಾಡಿರಲಿಲ್ಲ ಎಂದಿದ್ದಾರೆ.
ಪರಮ್ಬೀರ್ ಸಿಂಗ್ ವರ್ಗಾವಣೆಯಾದ ಬಳಿಕ ಬೇರೆ ಬೇರೆ ವಿಚಾರಗಳನ್ನು ಹೇಳುತ್ತಿದ್ದಾರೆ. ಅವರು ಈ ರೀತಿ ಏಕೆ ಮಾಡುತ್ತಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ಅವರು ದೆಹಲಿಗೆ ಹೋಗಿದ್ದರು. ಅಲ್ಲಿ ಯಾರನ್ನು ಭೇಟಿ ಮಾಡಿದ್ದರು, ಅವರು ಏನು ಮಾತನಾಡಿದ್ದರು ನಮಗೆ ಅದೆಲ್ಲವೂ ಗೊತ್ತು. ಸರಿಯಾದ ಸಮಯದಲ್ಲಿ ಇದೆಲ್ಲವನ್ನೂ ನಾವು ಹೇಳುತ್ತೇವೆ. ಎಲ್ಲದಕ್ಕೂ ಸಮಯ ಅಂತ ಒಂದಿದೆ. ಸೂಕ್ತ ಸಮಯದಲ್ಲಿ ಎಲ್ಲವನ್ನೂ ಹೇಳಲಾಗುವುದು ಎಂದು ತಿಳಿಸಿದ್ದಾರೆ.