ಶಾಸಕರ ಸಹಿಯ ದುರ್ಬಳಕೆ: NCP ಮುಖಂಡನಿಂದ ಸ್ಫೋಟಕ ಹೇಳಿಕೆ
ಮುಂಬೈ, ನವೆಂಬರ್ 23: "ಶಾಸಕರ ಹಾಜರಿಗಾಗಿ ತೆಗೆದುಕೊಂಡ ಸಹಿಯನ್ನು ನಂತರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಎನ್ ಸಿಪಿ ಮುಖಂಡ ನವಾಬ್ ಮಲೀಕ್ ಆರೋಪಿಸಿದ್ದಾರೆ. ಈ ಮೂಲಕ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ.
"ಹಾಜರಿಗೆಂದು ಶಾಸಕರ ಸಹಿಯನ್ನು ತೆಗೆದುಕೊಳ್ಳಲಾಗಿತ್ತು. ಇದೇ ಸಹಿಯನ್ನಿಟ್ಟುಕೊಂಡು ಇಷ್ಟು ಶಾಸಕರ ಬೆಂಬಲವಿದೆ ಎಂದು ಸುಳ್ಳು ಹೇಳಿ ಸರ್ಕಾರ ರಚಿಸಲಾಗಿದೆ. ಇದು ವಂಚನೆ" ಎಂದು ಮಲೀಕ್ ಅಜಿತ್ ಪವಾರ್ ಅವರ ಮೇಲೆ ಕಿಡಿಕಾಯ್ದಿದ್ದಾರೆ.
ಮಹಾರಾಷ್ಟ್ರದಲ್ಲಿ BJP-NCP ಸರ್ಕಾರ ರಚನೆಗೆ ಅಸಲಿ ಕಾರಣವೇನು?
ಶನಿವಾರ ಬೆಳಗ್ಗಿನ ಜಾವ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಉಪಮುಖ್ಯಮಂತ್ರಿಯಾಗಿ ಎನ್ ಸಿಪಿ ಮುಖಂಡ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಹೊರಗಿಟ್ಟು ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಸರಾಕರ ರಚಿಸುತ್ತವೆ ಎಂದುಕೊಂಡಿದ್ದವರಿಗೆ ಈ ಬೆಳವಣಿಗೆ ತೀವ್ರ ಆಘಾತವನ್ನುಂಟು ಮಾಡಿತ್ತು. ಇಂದು ಪತ್ರಿಕಾ ಗೋಷ್ಠಿ ನಡೆಸಿದ ಎನ್ ಸಿಪಿ ನಾಯಕ ಶರದ್ ಪವಾರ್, ಈ ಬೆಳವಣಿಗೆಗೂ ತನಗೂ ಸಂಬಂಧವಿಲ್ಲ, ಎನ್ ಸಿಪಿ ಹೊಸ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ.