ಬಿಜೆಪಿ ಸೋತಿದ್ದಕ್ಕೆ ಹೀಗೆಲ್ಲಾ ಮಾಡುತ್ತಿದೆಯಾ: ಇದೇ 'ಮಹಾ' ಪ್ರಶ್ನೆ?
ಮುಂಬೈ, ಜನವರಿ.24: ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್ ಸಿಪಿ )ದ ಮುಖ್ಯಸ್ಥ ಶರದ್ ಪವಾರ್ ಗೆ ನೀಡಿದ್ದ ವಿಶೇಷ ಭದ್ರತೆಯನ್ನು ವಾಪಸ್ ಪಡೆಯಲು ಕೇಂದ್ರ ಸರ್ಕಾರವೇ ಕಾರಣ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
ಮುಂಬೈನಲ್ಲಿ ಮಾತನಾಡಿದ ಸಂಸದ ಸಂಜಯ್ ರಾವತ್, ಕೇಂದ್ರ ಸರ್ಕಾರದ ಕ್ರಮ ಆಘಾತಕಾರಿಯಾಗಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ನಡೆಯು ಅಚ್ಚರಿ ಮೂಡಿಸುತ್ತಿದೆ. ಎನ್ ಸಿಪಿಯ ಮುಖ್ಯಸ್ಥರಾಗಿರುವ ಶರದ್ ಪವಾರ್ ಅವರಿಗೆ ಪ್ರಾಣ ಬೆದರಿಕೆಗಳು ಬಂದಿದೆ.
ಶರದ್ ಪವಾರ್ ಭದ್ರತೆ ವಾಪಸ್ ಪಡೆದ ಕೇಂದ್ರ ಸರ್ಕಾರ
ಈ ಹಿಂದೆ ಶರದ್ ಪವಾರ್ ಅವರ ಮೇಲೆ ದಾಳಿ ನಡೆದಿರುವ ಘಟನೆಗಳು ನಮ್ಮ ಕಣ್ಣ ಎದುರಿಗೆ ನಡೆದಿವೆ. ಇದನ್ನೆಲ್ಲ ಅರಿತುಕೊಂಡಿದ್ದರೂ ಕೇಂದ್ರ ಸರ್ಕಾರ ಅವರಿಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆದುಕೊಂಡಿದೆ ಎಂದು ಕಿಡಿ ಕಾರಿದ್ದಾರೆ.
ಮೋದಿ ಸರ್ಕಾರವನ್ನು ಪ್ರಶ್ನೆ ಮಾಡಿದ ಸಂಜಯ್ ರಾವತ್
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇತ್ತೀಚಿಗಷ್ಟೇ ಎಐಸಿಸಿ ಮಧ್ಯಂತರ ಅಧ್ಯಕ್ಷ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ನೀಡಿದ್ದ ವಿಶೇಷ ಭದ್ರತೆಯನ್ನು ವಾಪಸ್ ಪಡೆದಿತ್ತು. ಇದೀಗ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆದಿದೆ. ಕೇಂದ್ರ ಸರ್ಕಾರಕ್ಕೆ ನಾಯಕರ ಭದ್ರತೆ ವಿಚಾರ ಮಹತ್ವದ್ದು ಎನ್ನಿಸದಿದ್ದರೆ ಹೇಗೆ ಎಂದು ಸಂಸದ ಸಂಜಯ್ ರಾವತ್ ಪ್ರಶ್ನೆ ಮಾಡಿದ್ದಾರೆ.
"ರಾಜ್ಯದಲ್ಲಿ ಸರ್ಕಾರ ರಚಿಸಲಾಗದ್ದಕ್ಕೆ ನಿರಾಸೆ"
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಲ್ಲಿ ಭಾರತೀಯ ಜನತಾ ಪಕ್ಷವು ಹಿನ್ನಡೆ ಅನುಭವಿಸಿದೆ. ಇದರಿಂದ ನಿರಾಸೆಯಲ್ಲಿ ಈ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರವು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಆರೋಪಿಸಿದ್ದಾರೆ.
"ಬಿಜೆಪಿ ಬೆದರಿಕೆಗೆ ಬಗ್ಗಲ್ಲ ಪವಾರ್ ಸಾಹೇಬ್"
ಇನ್ನು, ಮುಂಬೈನಲ್ಲಿ ಮಾತನಾಡಿರುವ ಮಹಾರಾಷ್ಟ್ರದ ರಾಜ್ಯ ವಸತಿ ಸಚಿವ ಜೀತೇಂದ್ರ ಔಹಾದ್, ಬಿಜೆಪಿ ವಿರುದ್ಧ ಕೆಂಡ ಕಾರಿದ್ದಾರೆ. ಶರದ್ ಪವಾರ್ ಸಾಹೇಬರು ಸಹ್ಯಾದ್ರಿ ಬೆಟ್ಟವಿದ್ದಂತೆ. ಬಿಜೆಪಿಯ ಬೆದರಿಕೆ ರಾಜಕಾರಣಕ್ಕೆ ಅವರು ಬೆದರುವುದಿಲ್ಲ ಎಂದು ಹೇಳಿದರು.
ಶರದ್ ಪವಾರ್ ನಿವಾಸಕ್ಕೆ ನೀಡಿದ್ದ ಭದ್ರತೆ ವಾಪಸ್
ರಾಜ್ಯಸಭಾ ಸದಸ್ಯ ಮತ್ತು ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಅವರಿಗೆ 'ವೈ' ಶ್ರೇಣಿಯ ಭದ್ರತೆ ನೀಡಲಾಗಿತ್ತು. 6ನೇ ಜನಪಥ್ ನಲ್ಲಿರುವ ನಿವಾಸಕ್ಕೆ ನೀಡಲಾದ ಭದ್ರತೆಯನ್ನು ಕಳೆದ ಜನವರಿ 20ರಂದು ಯಾವುದೇ ಮುನ್ಸೂಚನೆ ಇಲ್ಲದೇ ಕೇಂದ್ರ ಸರ್ಕಾರವು ವಾಪಸ್ ಪಡೆದಿದ್ದು, ಈ ಕ್ರಮವು ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿಸಿದೆ.