ಪಕ್ಷಕ್ಕೆ ವಂಚಿಸಿದ್ದರೂ ಅಜಿತ್ ಪವಾರ್ಗೆ ಡಿಸಿಎಂ ಹುದ್ದೆ ಗ್ಯಾರಂಟಿ?
ಮುಂಬೈ, ನವೆಂಬರ್ 28: ನಾಟಕೀಯ ಬೆಳವಣಿಗೆಯಲ್ಲಿ ಪಕ್ಷಕ್ಕೆ ವಂಚಿಸಿ ದಿನಬೆಳಗಾಗುವುದರಲ್ಲಿ ಬಿಜೆಪಿ ಜತೆ ಸೇರಿ ಉಪ ಮುಖ್ಯಮಂತ್ರಿಯಾಗಿಯೂ ಪ್ರಮಾಣವಚನ ಸ್ವೀಕರಿಸಿದ್ದ ಎನ್ಸಿಪಿ ಮುಖಂಡ ಅಜಿತ್ ಪವಾರ್, ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರದಲ್ಲಿ ಕೂಡ ಉಪ ಮುಖ್ಯಮಂತ್ರಿ ಹುದ್ದೆಗೆ ಏರಲಿದ್ದಾರೆಯೇ?
ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್ ಪವಾರ್ ಪಕ್ಷದ ನಿಲುವಿಗೆ ವಿರುದ್ಧವಾಗಿ ಬಿಜೆಪಿ ಜತೆ ಕೈಜೋಡಿಸಿದ್ದರೂ ಬಳಿಕ ಪಕ್ಷಕ್ಕೆ ಮರಳಿದ್ದರು. ಅವರ ವಿರುದ್ಧ ಪಕ್ಷ ಯಾವುದೇ ಶಿಸ್ತುಕ್ರಮಕ್ಕೆ ಮುಂದಾಗಿಲ್ಲ. ಬದಲಾಗಿ ಅವರಿಗೆ ಡಿಸಿಎಂ ಪಟ್ಟ ಸಿಗುವುದು ಖಚಿತ ಎಂದೇ ಹೇಳಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಅಪ್ಪ ಸಿಎಂ, ಮಗ ಸೂಪರ್ ಸಿಎಂ?
ಎರಡು ದಿನಗಳ ಹಿಂದಷ್ಟೇ ಅಜಿತ್ ಪವಾರ್, ಬಿಜೆಪಿ ನೇತೃತ್ವದ ದೇವೇಂದ್ರ ಫಡ್ನವಿಸ್ ಸರ್ಕಾರದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಬಿಜೆಪಿ-ಎನ್ಸಿಪಿ ದಿಢೀರ್ ಸರ್ಕಾರ ಬಹುಮತ ಸಾಬೀತುಪಡಿಸುವ ಮುನ್ನವೇ ಕುಸಿದಿತ್ತು. ಮೂರು ಪಕ್ಷಗಳ ಮಹಾ ವಿಕಾಸ್ ಮೈತ್ರಿಕೂಟ ರಚನೆಯ ಚರ್ಚೆ ನಡೆಯುತ್ತಿರುವ ವೇಳೆಯೇ ಅಜಿತ್ ಪಕ್ಷಕ್ಕೆ ಆಘಾತ ನೀಡಿದ್ದರು.
ಪ್ರಮಾಣವಚನ ಸಮಾರಂಭ
ಗುರುವಾರ ಸಂಜೆ ಶಿವಾಜಿ ಪಾರ್ಕ್ನಲ್ಲಿ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಶಿವಸೇನಾದ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಮತ್ತು ಆರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಈ ವೇಳೆ ಪ್ರಮಾಣವಚನ ಸ್ವೀಕಾರ ಮಾಡುವುದಿಲ್ಲ. ಕೆಲವು ದಿನಗಳ ನಂತರ ಅವರು ಡಿಸಿಎಂ ಹುದ್ದೆಗೇರುವುದು ಖಚಿತ ಎಂದು ಎನ್ಸಿಪಿ ಮೂಲಗಳು ಹೇಳಿರುವುದಾಗಿ 'ಎನ್ಡಿ ಟಿವಿ' ವರದಿ ಮಾಡಿದೆ.
ಇಂದು ಪ್ರಮಾಣವಚನ ಇಲ್ಲ
'ನಾನು ಇಂದು ಪ್ರಮಾಣವಚನ ಸ್ವೀಕರಿಸುವುದಿಲ್ಲ. ಎಲ್ಲ ಪಕ್ಷಗಳ ಆರು ಮುಖಂಡರು ಪ್ರಮಾಣವಚನ ಸ್ವೀಕರಿಸಲಿದ್ದಾರೆ' ಎಂದು ಅಜಿತ್ ಪವಾರ್ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಮುಖಂಡರಾದ ಜಯಂತ್ ಪಾಟೀಲ್ ಮತ್ತು ಪ್ರಫುಲ್ ಪಟೇಲ್ ಅವರೊಂದಿಗಿನ ಸಭೆಯ ಬಳಿಕ ತಿಳಿಸಿದರು. ಮತ್ತೆ ಡಿಸಿಎಂ ಆಗುತ್ತೀರಾ ಎಂಬ ಪ್ರಶ್ನೆಗೆ, 'ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಪಕ್ಷ ನಿರ್ಧಾರ ಮಾಡಲಿದೆ' ಎಂದರು.
ಉದ್ಧವ್ ಠಾಕ್ರೆ ಪಟ್ಟಾಭಿಷೇಕಕ್ಕಾಗಿ ದೆಹಲಿಯಲ್ಲಿ ಆದಿತ್ಯ ಅಲೆದಾಟ!
ಜಯಂತ್ ಪಾಟೀಲ್ ಪೈಪೋಟಿ
ಅಜಿತ್ ಪವಾರ್ ಬಿಜೆಪಿಯೊಂದಿಗೆ ಸೇರಿ ಆಘಾತ ನೀಡಿದ ಬೆನ್ನಲ್ಲೇ ಅವರನ್ನು ಎನ್ಸಿಪಿಯ ಶಾಸಕಾಂಗ ಪಕ್ಷದ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿತ್ತು. ಅವರ ಸ್ಥಾನಕ್ಕೆ ಜಯಂತ್ ಪಾಟೀಲ್ ಅವರನ್ನು ನೇಮಿಸಲಾಗಿತ್ತು. ಹೀಗಾಗಿ ಅಜಿತ್ ಪವಾರ್ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಜಯಂತ್ ಪಾಟೀಲ್ ಅವರಿಗೆ ಪೈಪೋಟಿ ಎದುರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂರನೇ ಬಾರಿ ಡಿಸಿಎಂ
ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರವು ವಿಶ್ವಾಸಮತ ಸಾಬೀತುಪಡಿಸಿದ ಬಳಿಕ ಅಜಿತ್ ಪವಾರ್ ಮತ್ತೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ನಿರೀಕ್ಷೆಯಿದೆ. ಅವರು ಮರಳಿ ಈ ಹುದ್ದೆಯನ್ನು ಪಡೆದುಕೊಂಡರೆ ಅದು ಅವರ ರಾಜಕೀಯ ಬದುಕಿನ ಮತ್ತೊಂದು ಜಿಗಿತವಾಗಲಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಂಟಿಸಿಕೊಂಡ ಕಳಂಕವನ್ನು ಮರೆಮಾಚಲು ನೆರವಾಗಲಿದೆ. ಮೂರನೇ ಬಾರಿಗೆ ಡಿಸಿಎಂ ಆದ ಖ್ಯಾತಿಯೂ ಅವರದಾಗಲಿದೆ.