ಸಮೀರ್ ವಾಂಖೆಡೆ ವಿರುದ್ಧ ನವಾಬ್ ಮಲಿಕ್ ಪುತ್ರಿ ಟ್ವೀಟ್
ಮುಂಬೈ ನವೆಂಬರ್ 21: ಮುಂಬೈ ಡ್ರಗ್ ಪ್ರಕರಣ ಬೇರದ್ದೇ ರೂಪ ಪಡೆದುಕೊಳ್ಳುತ್ತಿದೆ. ಮೇಲ್ವಿಚಾರಣೆ ನಡೆಸುತ್ತಿರುವ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಆರೋಪಗಳ ಸುರಿಮಳೆ ಸುರಿಯುತ್ತಿದೆ. ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಳಿಕ ಸದ್ಯ ಅವರ ಪುತ್ರಿ ಸಮೀರ್ ವಾಂಖೆಡೆ ವಿರುದ್ಧ ಯುದ್ಧಕ್ಕೆ ನಿಂತಿದ್ದಾರೆ. ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ನಡುವಿನ ಜಗಳದಲ್ಲಿ, ಮದುವೆ ಪ್ರಮಾಣಪತ್ರ(marriage certificate) ಮತ್ತು ಆರತಕ್ಷತೆ ಆಮಂತ್ರಣ ಪತ್ರಿಕೆ (reception invitation) ಈ ಎರಡು ಹೊಸ ದಾಖಲೆಗಳು ಈಗ ಮುಂಚೂಣಿಗೆ ಬಂದಿವೆ. ಈ ಎರಡರಲ್ಲೂ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಹೆಸರು ಬದಲಾಗಿರುವ ಬಗ್ಗೆ ಸದ್ಯ ಸಾಕಷ್ಟು ಚರ್ಚೆಯಾಗುತ್ತಿದೆ. ಭಾನುವಾರ ತಡರಾತ್ರಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಸಚಿವ ನವಾಬ್ ಮಲಿಕ್ ಅವರ ಪುತ್ರಿ ನಿಲೋಫರ್ ಮಲಿಕ್ ಖಾನ್ ಅವರು ಸಮೀರ್ ವಾಂಖೆಡೆ ಅವರ ಮದುವೆ ಪ್ರಮಾಣಪತ್ರ ಎಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಬಾಂದ್ರಾ ವಿವಾಹ ರಿಜಿಸ್ಟ್ರಾರ್ ಕಚೇರಿಯ ವಿವಾಹ ಅಧಿಕಾರಿ ಜೆ.ಜಿ.ಬರ್ಮೆಡಾ ಅವರು ನೀಡಿದ್ದಾರೆ ಎಂದು ದಾಖಲೆಯಲ್ಲಿ ಹೇಳಲಾಗಿದೆ.
|
ಮದುವೆ ಪ್ರಮಾಣಪತ್ರ, ಆರತಕ್ಷತೆ ಆಮಂತ್ರಣದಲ್ಲೇನಿದೆ?
ನಿಲೋಫರ್ ಮಲಿಕ್ ಖಾನ್ ಅವರು ಮದುವೆ ಪ್ರಮಾಣಪತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮದುಮಗ ಸಮೀರ್ ವಾಂಖೆಡೆ ಮತ್ತು ವಧು ಡಾ. ಶಬಾನಾ ಖುರೈಶಿಯವರ ಜೊತೆಯಲ್ಲಿ ಮೂವರು ಸಾಕ್ಷಿಗಳ (ಯಾಸ್ಮೀನ್ ಅಜೀಜ್ ಖಾನ್, ನಿಖಿಲ್ ಛೇಡಾ ಮತ್ತು ಗ್ಲೆನ್ ಪಟೇಲ್) ಸಹಿಗಳಿವೆ. ಆದರೆ ನಿಲೋಫರ್ ಮಲಿಕ್ ಖಾನ್ ಅವರ ಹಂಚಿಕೊಂಡಿರುವ ಆರತಕ್ಷತೆ ಆಮಂತ್ರಣ ಪತ್ರಿಕೆಯಲ್ಲಿ ಸಮೀರ್ ಹೆಸರು ಬದಲಾಗಿರುವುದನ್ನು ಅವರು ಹಂಚಿಕೊಂಡಿದ್ದಾರೆ. ನಿಲೋಫರ್ ಮಲಿಕ್ ಖಾನ್ ಅವರು ಆರತಕ್ಷತೆ ಪತ್ರಿಕೆ (reception invitation) ಎಂದು ಹೇಳಿದ ಪ್ರತಿಯನ್ನು ಸಹ ಪೋಸ್ಟ್ ಮಾಡಿದ್ದಾರೆ. ಇದನ್ನು ಡಿಸೆಂಬರ್ 7, 2006 ರಂದು ಆಯೋಜಿಸಲಾಗಿದೆ ಎಂದು ಹೇಳಲಾಗಿದೆ. ಕಾರ್ಡ್ ನಲ್ಲಿ ದಾಖಲಾದ ಪ್ರಕಾರ, ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಲೋಖಂಡವಾಲಾ ಗಾರ್ಡನ್ನಲ್ಲಿ ರಾತ್ರಿ 7 ಗಂಟೆಗೆ 'ನಿಕಾಹ್' ಸಮಾರಂಭವನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ ವರನ ಹೆಸರನ್ನು "ಸಮೀರ್ (s/o Mr ದಾವೂದ್ ಮತ್ತು ಶ್ರೀಮತಿ ಜಹೇದಾ ವಾಂಖೆಡೆ) ಎಂದು ಮುದ್ರಿಸಲಾಗಿದೆ.
ಮಲಿಕ್ ಮಗಳ ಪೋಸ್ಟ್
ಟ್ವಿಟ್ಟರ್ನಲ್ಲಿ ನವಾಬ್ ಮಲಿಕ್ ಅವರ ಪುತ್ರಿ ಸಮೀರ್ ವಾಂಖೆಡೆ ಹಾಗೂ ಕುಟುಂಬಸ್ಥರ ವಿರುದ್ಧ ಹರಿಹಾಯ್ದಿದ್ದಾರೆ. ಸೂಕ್ತ ದಾಖಲಾತಿಗಳ ನಡುವೆಯೂ ಅವರು ಆರೋಪಗಳನ್ನು ಅಲ್ಲಗಳಿಯುತ್ತಿದ್ದಾರೆಂದು ದೂರಿದ್ದಾರೆ. "ಎಲ್ಲಾ ಸಾಕ್ಷ್ಯಗಳ ಹೊರತಾಗಿಯೂ ವಾಂಖೆಡೆ ಮತ್ತು ಅವರ ಸಂಬಂಧಿಕರು ನಿರಾಕರಣೆಯನ್ನು ಮುಂದುವರೆಸುತ್ತಿದ್ದಾರೆ. ಎಲ್ಲರಿಗೂ ನೋಡಲು ಮತ್ತೊಂದು ಪುರಾವೆ ಇಲ್ಲಿದೆ. ಅದು ಸಮೀರ್ ದಾವೂದ್ ವಾಂಖೆಡೆ ಅವರ ಮದುವೆಯ ಆಮಂತ್ರಣ. ಸೂಕ್ತ ದಾಖಲೆಗಳಿದ್ದು ಆಧಾರವಿಲ್ಲ ಊಹೆ ಎಂದು ವ್ಯಕ್ತಿಯೊಬ್ಬರು ಬಂಧನಕ್ಕೆ ಒತ್ತಾಯಿಸಿದ್ದಾರೆ. ಕಠಿಣ ಸಂಗತಿಗಳನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ" ಎಂದು ಬರೆದಿದ್ದಾರೆ. ಜೊತೆಗೆ "ಎಷ್ಟೇ ಪ್ರಯತ್ನ ಮಾಡಿದರೂ ಸತ್ಯವನ್ನು ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಿಲ್ಲ. ಸಮೀರ್ ವಾಂಖೆಡೆ ಅವರ ಇತಿಹಾಸ ಪೆಟ್ಟಿಗೆಯಲ್ಲಡುವಷ್ಟಿದೆ. ಸದ್ಯ ಅವೆಲ್ಲಾ ಹೊರಗಿಡಲಾಗುತ್ತಿದೆ. ಅವರು ಏನು ಮಾಡಿದರೂ ನಾವು ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸುತ್ತೇವೆ" ಎಂದು ಬರೆದಿದ್ದಾರೆ.
ಸಮೀರ್ ವಾಂಖೆಡೆಗೆ ಬೆಂಬಲ
ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ನಂತರ, ವಂಚಿತ್ ಬಹುಜನ ಅಘಾಡಿ ಅಧ್ಯಕ್ಷ ಡಾ ಪ್ರಕಾಶ್ ಅಂಬೇಡ್ಕರ್ ಅವರು ಶನಿವಾರ ಸಮೀರ್ ವಾಂಖೆಡೆ ಅವರನ್ನು ಬೆಂಬಲಿಸಿದರು. ಸಮೀರ್ ವಾಂಖೆಡೆ ಅವರ ಪತ್ನಿ ಕ್ರಾಂತಿ ರೆಡ್ಕರ್ ಕೂಡ ನವಾಬ್ ಮಲಿಕ್ ಮತ್ತು ಅವರ ಮಗಳು ಮಾಡುತ್ತಿರುವ ಆರೋಪಗಳ ವಿರುದ್ಧ ತಮ್ಮ ಪತಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಆದಾಗ್ಯೂ, ನವಾಬ್ ಮಲಿಕ್ ತನ್ನ ಹೋರಾಟವು ಸಮೀರ್ ವಾಂಖೆಡೆ ಅವರ ಧರ್ಮ, ಜಾತಿ ಅಥವಾ ಕುಟುಂಬದ ವಿರುದ್ಧ ಅಲ್ಲ, ಆದರೆ ಅವರ "ನಕಲಿ ಜಾತಿ ಪ್ರಮಾಣಪತ್ರ" ವಿರುದ್ಧ ಎಂದು ಪದೇ ಪದೇ ಹೇಳಿದ್ದಾರೆ. ಎನ್ಸಿಬಿ ಅಧಿಕಾರಿ ಮುಸ್ಲಿಂ ಆಗಿದ್ದು, ಪರಿಶಿಷ್ಟ ಜಾತಿಗೆ ಮೀಸಲಾದ ಸೀಟಿನಲ್ಲಿ ಸರ್ಕಾರಿ ಸೇವೆಗೆ ಸೇರಲು ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ.
Recommended Video
NCB vs NCP
ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದ ತನಿಖೆ ಆರಂಭವಾದಾಗಿನಿಂದ ಸಮೀರ್ ವಾಂಖೆಡೆ ಮತ್ತು ನವಾಬ್ ಮಲಿಕ್ ನಡುವಿನ ಕದನ ಜೋರಾಗಿದೆ. ಸಮೀರ್ ವಾಂಖೆಡೆ ವಿರುದ್ಧ ಸುಲಿಗೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಸಚಿವರು ಮಾಡಿದ್ದಾರೆ. ಸಂಬಂಧಿತ ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಗಳು ಹೊರಿಸಿದ ಸುಲಿಗೆ ಆರೋಪಗಳ ತನಿಖೆಯನ್ನು ಎನ್ಸಿಬಿ ಮತ್ತು ಮುಂಬೈ ಪೊಲೀಸರು ಪ್ರಾರಂಭಿಸಿದ್ದಾರೆ ಮತ್ತು ಪ್ರಸ್ತುತ ಪ್ರಗತಿಯಲ್ಲಿದೆ. ಈ ಹಿಂದೆ, ಸಮೀರ್ ವಾಂಖೆಡೆ ನೇತೃತ್ವದ ಎನ್ಸಿಬಿ ತಂಡವು ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿತ್ತು. ಬಳಿಕ ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದರು. ಅಂದಿನಿಂದಲೂ ಸಮೀರ್ ವಾಂಖೆಡೆ ಮೇಲೆ ಆರೋಪಗಳ ಸುರಿಮಳೆ ನವಾಬ್ ಗೈದಿದ್ದಾರೆ.