ಮೋದಿ ಈ ದೇಶದ ಉನ್ನತ ನಾಯಕ ಎಂದು ಹೊಗಳಿದ ಶಿವಸೇನೆ ಮುಖಂಡ
ಮುಂಬೈ, ಜೂನ್ 10: "ಮೋದಿ ದೇಶದ ಹಾಗೂ ಬಿಜೆಪಿಯ ಉನ್ನತ ನಾಯಕ" ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಗುರುವಾರ ಹೊಗಳಿದ್ದಾರೆ. ದೆಹಲಿಯಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪ್ರಧಾನಿ ಮೋದಿ ಪರಸ್ಪರ ಭೇಟಿ ಬೆನ್ನಲ್ಲೇ ಸಂಜಯ್ ರಾವತ್ ಈ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.
ಎರಡು ದಿನಗಳ ಕಾಲ ಉತ್ತರ ಮಹಾರಾಷ್ಟ್ರದ ಪ್ರವಾಸದಲ್ಲಿರುವ ರಾವತ್, ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರಿಸಿದ್ದಾರೆ. "ಈಚೆಗೆ ಮಾಧ್ಯಮದಲ್ಲಿ ಬಂದಂತೆ ಮೋದಿ ಅವರ ಜನಪ್ರಿಯತೆ ಕುಸಿಯುತ್ತಿದೆ ಎಂದು ನಿಮಗನ್ನಿಸುತ್ತಿದೆಯೇ" ಎಂಬ ಪ್ರಶ್ನೆಗೆ ಹೀಗೆ ಹೇಳಿಕೆ ನೀಡಿದ್ದಾರೆ.
"ನಾನು ಈ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಮಾಧ್ಯಮಗಳ ವರದಿ ಮೇಲೆ ಮಾತನಾಡುವುದಿಲ್ಲ. ಈ ಬಗ್ಗೆ ಎಲ್ಲಿಯೂ ಅಧಿಕೃತ ಹೇಳಿಕೆ ಇಲ್ಲ. ಆದರೆ ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಯಶಸ್ಸನ್ನು ನರೇಂದ್ರ ಮೋದಿಗೆ ನೀಡಬೇಕಿದೆ. ಪ್ರಸ್ತುತ ಅವರು ದೇಶದ ಹಾಗೂ ಪಕ್ಷದ ಉನ್ನತ ನಾಯಕರಾಗಿದ್ದಾರೆ" ಎಂದು ರಾವತ್ ಹೇಳಿದ್ದಾರೆ.
"ಪ್ರಧಾನಿ ಇಡೀ ದೇಶ್ಕಕ್ಕೆ ಸೇರಿದವರು, ಒಂದು ನಿರ್ದಿಷ್ಟ ಪಕ್ಷಕ್ಕಲ್ಲ ಎಂಬ ನಿಲುವನ್ನು ಶಿವಸೇನೆ ಯಾವಾಗಲೂ ಹೊಂದಿರುತ್ತದೆ" ಎಂದಿದ್ದಾರೆ.
'ಫೋಟೋ ಶೂಟ್ಗಾಗಿ ಹೆಲಿಕಾಪ್ಟರ್ನಲ್ಲಿ ಮೋದಿ ವೈಮಾನಿಕ ಸಮೀಕ್ಷೆ' - ಉದ್ದವ್ ಠಾಕ್ರೆ ಟೀಕೆ
ಮೋದಿ ಬಯಸಿದಲ್ಲಿ ಬಿಜೆಪಿಯು ಹುಲಿ (ಶಿವಸೇನೆ ಚಿನ್ಹೆ)ಯೊಂದಿಗೆ ಮೈತ್ರಿ ಮಾಡಲಿದೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಈಚೆಗೆ ಹೇಳಿಕೆ ನೀಡಿದ್ದು, ಈ ಕುರಿತು ಪ್ರಶ್ನೆಗೆ ಉತ್ತರಿಸಿರುವ ರಾವತ್, "ಹುಲಿಯೊಂದಿಗೆ ಯಾರೂ ಸ್ನೇಹ ಬೆಳೆಸಲು ಸಾಧ್ಯವಿಲ್ಲ. ತನ್ನೊಂದಿಗೆ ಯಾರು ಸ್ನೇಹಿತರಾಗಬಹುದು ಎಂಬುದನ್ನು ಹುಲಿ ನಿರ್ಧರಿಸಬೇಕು" ಎಂದು ಹೇಳಿದ್ದಾರೆ.