ಅಮರ ಗೀತೆ ಹಾಡಿದ ಲತಾಜೀಗೆ ಮೋದಿ ಸನ್ಮಾನ
ಮುಂಬೈ, ಜ.27: ಶ್ರೇಷ್ಠ ಭಾರತ ದಿವಸ ಆಚರಣೆ ಸಂದರ್ಭದಲ್ಲಿ ದೇಶದ ಅಮರ ಗೀತೆ ಹಾಡಿ ದೇಶಪ್ರೇಮವನ್ನು ಜಾಗೃತಿಗೊಳಿಸಿದ ಗಾನ ಕೋಗಿಲೆ ಲತಾ ಮಂಗೇಷ್ಕರ್ ಅವರಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸನ್ಮಾನಿಸುತ್ತಿದ್ದಾರೆ.
ಜ.27 ಶ್ರೇಷ್ಠವಾದ ದಿನ 51 ವರ್ಷಗಳ ಹಿಂದೆ ಲತಾ ಮಂಗೇಷ್ಕರ್ ಅವರು 'ಏ ಮೇರೆ ವತನ್ ಕೆ ಲೋಗೋ' ಗೀತೆ ಹಾಡಿ ದೇಶದ ಜನತೆಯ ಕಣ್ಣಂಚು ಒದ್ದೆ ಮಾಡಿದ್ದರು. ಭಾರತ ಹಾಗೂ ಚೀನಾ ಯುದ್ದದಲ್ಲಿ ಹುತಾತ್ಮರಾದ ಸಾವಿರಾರು ಯೋಧರಿಗೆ ಈ ಮೂಲಕ ಅಶ್ರುತರ್ಪಣ ನೀಡಲಾಗಿತ್ತು.
ಸಿಟಿಜನ್ಸ್ ಫಾರ್ ಅಕೌಂಬಲ್ ಗವರ್ನಂಸ್(CAG).ಲೋಧಾ ಫೌಂಡೇಷನ್ ಹಾಗೂ ಶಹೀದ್ ಗೌರವ್ ಸಮಿತಿ ಆಯೋಜಿಸಿರುವ ಶ್ರೇಷ್ಠ ಭಾರತ್ ದಿವಸ ಕಾರ್ಯಕ್ರಮದಲ್ಲಿ ಲತಾ ಮಂಗೇಷ್ಕರ್ ಸೇರಿದಂತೆ ಹುತಾತ್ಮ ಯೋಧರ ಕುಟುಂಬದವರನ್ನು ಸನ್ಮಾನಿಸಲಾಗುತ್ತದೆ.
ಕವಿ ಪ್ರದೀಪ್ ಬರೆದಿರುವ 'ಏ ಮೇರೆ ವತನ್ ಕೆ ಲೋಗೋ' ಹಾಡನ್ನು ಭಾರತರತ್ನ ಲತಾ ಮಂಗೇಷ್ಕರ್ ಅವರ ದನಿಯಲ್ಲಿ ಕೇಳುವುದೇ ಸೌಭಾಗ್ಯ. 1963ರಲ್ಲಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರ ಮೆಚ್ಚುಗೆ ಪಡೆದ ಈ ಗೀತೆ ಸಿನಿಮಾ ಗೀತೆಯಾಗಿ ಉಳಿದಿಲ್ಲ. ದೇಶಪ್ರೇಮ ಸಾರುವ, ವೀರ ಯೋಧರನ್ನು ಸ್ಮರಿಸುವ ಅಮರ ಗೀತೆಯಾಗಿದೆ.
ಇಡೀ ಜಗತ್ತನ್ನೇ ತಮ್ಮ ಸುಶ್ರಾವ್ಯ ಕಂಠದಿಂದ ಮಂತ್ರಮುಗ್ಧಗೊಳಿಸಿರುವ ಲತಾ ಮಂಗೇಷ್ಕರ್ ಅವರಿಗೆ 2001ರಲ್ಲಿ 'ಭಾರತ ರತ್ನ' ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಅಂದಹಾಗೆ, ಲತಾಜೀಗೆ ಆ ಪ್ರಶಸ್ತಿ ಸಂದಾಗ ಕೇಂದ್ರದಲ್ಲಿದ್ದುದ್ದು ಬಿಜೆಪಿ ಸರ್ಕಾರ. 'ಏ ಮೇರೆ ವತನ್ ಕೆ ಲೋಗೋ' ಎಂದು ಹಾಡಿ ದೇಶದ ಪ್ರಥಮ ಪ್ರಧಾನಿಯ ಕಣ್ಣಲ್ಲಿ ನೀರು ತರಿಸಿದ್ದ ಲತಾ ಮಂಗೇಷ್ಕರ್ ಅವರು ಇತ್ತೀಚೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಲತಾ ಮಂಗೇಷ್ಕರ್ ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮುಂಬೈನ ಕಾಂಗ್ರೆಸ್ ನಾಯಕ ಜನಾರ್ದನ ಚಂದೂರ್ಕರ್ ಅವರಂತೂ 'ಮೋದಿ ಪ್ರಧಾನಿಯಾಗಲಿ ಎಂದು ಹೇಳಿರುವ ಲತಾ ಅವರಿಗೆ ನೀಡಿರುವ ಭಾರತ ರತ್ನ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[ಭಾರತರತ್ನ ಪ್ರಶಸ್ತಿ ನಿಮ್ಮ ತಾತನ ಆಸ್ತಿಯಲ್ಲ]