ಎಣ್ಣೆ ಅಂಗಡಿಗಳೆಲ್ಲ ಬಂದ್: ಈ ಜಿಲ್ಲೆಯಲ್ಲಿ ಮತ್ತೆ ಲಾಕ್ ಡೌನ್!
ಮುಂಬೈ, ಮಾರ್ಚ್.11: ಕೊರೊನಾವೈರಸ್ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಮಹಾರಾಷ್ಟ್ರದ ನಾಗ್ಪುರ್ನಲ್ಲಿ ಮಾರ್ಚ್.15 ರಿಂದ 21ರವರೆಗೂ ಲಾಕ್ ಡೌನ್ ಜಾರಿಗೊಳಿಸುವುದಾಗಿ ಜಿಲ್ಲೆಯ ರಕ್ಷಣಾ ಸಚಿವ ನಿತಿನ್ ರಾವತ್ ಘೋಷಿಸಿದ್ದಾರೆ.
ನಾಗ್ಪುರ್ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದೆ. ಹೀಗಾಗಿ ಸಚಿವ ನಿತಿನ್ ರಾವತ್ ನೇತೃತ್ವದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಯಿತು. ಈ ವೇಳೆ ನಾಗ್ಪುರ್ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸುವುದಕ್ಕೆ ತೀರ್ಮಾನಿಸಲಾಯಿತು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು 2020ರ ಜನವರಿ ತಿಂಗಳಿನಲ್ಲಿ ರಾಜ್ಯದ 36 ಜಿಲ್ಲೆಗಳಿಗೂ ರಕ್ಷಣಾ ಸಚಿವರನ್ನು ನೇಮಿಸಿದ್ದರು.
ಕೊರೊನಾ ಪ್ರಕರಣ ಏರಿಕೆ; ರಾಜ್ಯದಲ್ಲಿ ರಾತ್ರಿ ಪಾರ್ಟಿ ಮೇಲೆ ನಿಷೇಧ
ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯಲ್ಲಿ ಮಾರ್ಚ್.15 ರಿಂದ 21ರವರೆಗೂ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ಖಾಸಗಿ ಕಚೇರಿಗಳನ್ನು ಬಂದ್ ಮಾಡಬೇಕು. ಸರ್ಕಾರಿ ಕಚೇರಿಗಳು ಶೇ.25ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬೇಕು. ಮೂಲಭೂತ ವಸ್ತುಗಳ ಮಾರಾಟದ ಅಂಗಡಿಗಳನ್ನು ತೆರೆಯುವುದಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಸಚಿವ ನಿತಿನ್ ರಾವತ್ ತಿಳಿಸಿದ್ದಾರೆ.
ಎಣ್ಣೆ ಮಾರಾಟಕ್ಕೆ ಆನ್ ಲೈನ್ ನಲ್ಲಿ ಅನುಮತಿ
ನಾಗ್ಪುರ್ ಜಿಲ್ಲೆಯಲ್ಲಿ ಎಣ್ಣೆ ಅಂಗಡಿಗಳನ್ನೆಲ್ಲ ಬಂದ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆನ್ ಲೈನ್ ಮೂಲಕ ಮಾತ್ರ ಎಣ್ಣೆ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ. ಅನಗತ್ಯವಾಗಿ ಜನರು ಹೊರಗಡೆ ಓಡಾಡುವಂತಿಲ್ಲ ಎಂದು ಸಚಿವ ನಿತಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.
ನಾಗ್ಪುರ್ ನಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲನೆ
ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಏರಿಕೆ ಆಗುತ್ತಿರುವ ಹಿನ್ನೆಲೆ ಈ ಹಿಂದೆಯೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಫೆಬ್ರವರಿ 22ರಂದು ವಾರಾಂತ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಅದಾಗ್ಯೂ, ಜಿಲ್ಲೆಯಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಮಾತ್ರ ಇಳಿಮುಖವಾಗಲೇ ಇಲ್ಲ.
ನಾಗ್ಪುರ್ ನಲ್ಲಿ ಕೊವಿಡ್-19 ಸೋಂಕಿನ ಲೆಕ್ಕಾಚಾರ
ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 1,62,053ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 1710 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈವರೆಗೂ 4417 ಮಂದಿಗೆ ಕೊರೊನಾವೈರಸ್ ನಿಂದ ಪ್ರಾಣ ಬಿಟ್ಟಿದ್ದರೆ, 12,166 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.
ಒಂದೇ ದಿನ 13000 ಜನರಿಗೆ ಕೊರೊನಾವೈರಸ್ ಸೋಂಕು
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 13,659 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 22,52,057ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 54 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 52,610ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೂ 20,99,207 ಸೋಂಕಿತರು ಗುಣಮುಖರಾಗಿದ್ದು, 99,008 ಸಕ್ರಿಯ ಪ್ರಕರಣಗಳಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.