ನ್ಯಾ.ಲೋಯಾ ಪ್ರಕರಣ: ಅರ್ಥವಾಗದ ನ್ಯಾಯಾಧೀಶರ ವಿಚಿತ್ರ ನಡೆ!
ಮುಂಬೈ, ನವೆಂಬರ್ 30: ಸಿಬಿಐ ನಿಶೇಷ ನ್ಯಾಯಾಧೀಶರಾಗಿದ್ದ ಬಿ ಎಚ್ ಲೋಯಾ ನಿಧನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಮೂವರು ನ್ಯಾಯಾಧೀಶರು ಹಿಂದೆ ಸರಿದಿರುವುದು ಅಚ್ಚರಿ ಮೂಡಿಸಿದೆ.
2005 ರಲ್ಲಿ ನಡೆದ ಸೋಹ್ರಾಬುದ್ದಿನ್ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಲೋಯಾ ಅವರು 2014 ರಲ್ಲಿ ಹೃದಯಾಘಾತದಿಂದ ಮೃತರಾಗಿದ್ದರು. ಆದರೆ ಅವರ ಸಾವು ಸಹಜವಲ್ಲ, ಅದು ಕೊಲೆ ಎಂದು ಆರೋಪಿಸಿ ಸಾಕಷ್ಟು ಅರ್ಜಿಗಳು ನ್ಯಾಯಾಲಯದೆದುರು ದಾಖಲಾಗಿದ್ದವು.
ಸೊಹ್ರಾಬುದ್ದೀನ್ ಎನ್ ಕೌಂಟರ್: ಅನುಮಾನ ಮೂಡಿಸಿದ ಇನ್ಸ್ಪೆಕ್ಟರ್ ಹೇಳಿಕೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠದ ಮುಂದೆ ನಾಗ್ಪುರ ಮೂಲದ ಲಾಯರ್ ಸತೀಶ್ ಉಕೆ ಎಂಬುವವರು ದೂರು ದಾಖಲಿಸಿದ್ದರು.
ವಿಚಾರಣೆಯಿಂದ ಹಿಂದೆ ಸರಿದ ಶುಕ್ರೆ, ಮೋದಕ್
ಈ ಅರ್ಜಿಯ ವಿಚಾರಣೆ ನಡೆಸಲು ನೇಮಿಸಿದ್ದ ನ್ಯಾ. ಎಸ್ ಬಿ ಶುಕ್ರೆ ಮತ್ತು ಎಸ್ ಎಂ ಮೋದಕ್ ಅವರಿದ್ದ ಪೀಠ ವಿಚಾರಣೆ ನಡೆಸಲೊಲ್ಲೆ ಎಂದು ಸೋಮವಾರ ಹಿಂದೆ ಸರಿದಿದೆ. ನಂತರ ಬುಧವಾರ ನಡೆಯಬೇಕಿದ್ದ ಅರ್ಜಿಯ ವಿಚಾರಣೆಗಾಗಿ ನೇಮಕವಾಗಿದ್ದ ಪಿ ಎನ್ ದೇಶಮುಖ್ ಮತ್ತು ಸ್ವಪನ್ ಜೋಷಿ ಅವರಿದ್ದ ಪೀಠದಲ್ಲಿ, ಜೋಷಿ ಅವರು ಸಹ ವಿಚಾರಣೆಗೆ ನಿರಾಕರಿಸಿ ಹೊರಬಂದರು. ನ್ಯಾ.ಲೋಯಾ ಅವರನ್ನು ವಿಷಕಾರಿ ವಿಕಿರಣಗಳನ್ನು ಹಾಯಿಸಿ ಕೊಲ್ಲಲಾಗಿದೆ. ಅದು ಸಹಜ ಸಾವಲ್ಲ ಎಂದು ಸತೀಶ್ ಉಕೆ ಆರೋಪಿಸಿದ್ದಾರೆ.
ಗುಜರಾತ್ ಪೊಲೀಸ್ ಅಧಿಕಾರಿಗಳ ವೈಷಮ್ಯ, ಸೊಹ್ರಾಬುದ್ದೀನ್ ಎನ್ ಕೌಂಟರ್
ಶುಕ್ರೆ ನಿರ್ಧಾರಕ್ಕೆ ಕಾರಣವೇನು?
ಕಳೆದ ವರ್ಷ ಮಾಧ್ಯಮಗಳೊಂದಿಗೆ ಮಾತನಾಡುವಾಗ ನ್ಯಾ.ಶುಕ್ರೆ ಅವರೇ, 'ಲೋಯಾ ಸಾವಿನಲ್ಲಿ ಯಾವುದೇ ಅನುಮಾನಾಸ್ಪದ ಸಂಗತಿಗಳಿಲ್ಲ. ವೈದ್ಯರು ಅವರನ್ನು ರಕ್ಷಿಸಲು ಏನೆಲ್ಲ ಪ್ರಯತ್ನ ಮಾಡಿದ್ದರು. ಆದರೆ ಅವರು ಹೃದಯಾಘಾತದಿಂದ ಮರಣವನ್ನಪ್ಪಿದರು' ಎಂಬ ಹೇಳಿಕೆ ನೀಡಿದ್ದರು. ಹೀಗೆ ಹೇಳಿಕೆ ನೀಡಿ, ಇದೀಗ ಪ್ರಕರಣದ ವಿಚಾರಣೆಯನ್ನು ಅವರೇ ನಡೆಸುವುದು ಸರಿಯಲ್ಲ ಎಂಬ ಕಾರಣಕ್ಕೆ ಅವರು ಪ್ರಕರಣದಿಂದ ಹಿಂದೆ ಸರಿದಿದ್ದಿರಬಹುದು ಎಂದು ಗ್ರಹಿಸಲಾಗಿದೆ.
ಮೋದಕ್ ಹಿಂದೆ ಸರಿದಿದ್ದು ಏಕೆ?
ಅಂತೆಯೇ ನ್ಯಾ.ಲೋಯಾ ಅವರು ನಿಧನರಾಗುವ ದಿನ ರಾಜಭವನದ ಗೆಸ್ಟ್ ಹೌಸ್ ನಲ್ಲಿ ಲೋಯಾ ಅವರೊಂದಿಗೆ ನ್ಯಾ.ಮೋದಕ್ ಅವರೂ ಇದ್ದಿದ್ದರಿಂದ ಅವರು ಸಹ ವಿಚಾರಣೆಯಿಂದ ಹಿಂದೆ ಸರಿದಿರಬಹುದು ಎನ್ನಲಾಗಿದೆ. ಆದರೆ ನ್ಯಾ.ಜೋಷಿ ಅವರ ನಿರ್ಧಾರಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿದುಬಂದಿಲ್ಲ.
ಘಟನೆಯ ಹಿನ್ನೆಲೆ
ಸೊಹ್ರಾಬುದ್ದಿನ್ ಗುಜರಾತಿನಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದ ಮತ್ತು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಎಂದು ಆರೋಪಿಸಿ 2005 ರಲ್ಲಿ ಆತನನ್ನು ಎನ್ ಕೌಂಟರ್ ಮಾಡಿ ಕೊಲ್ಲಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಲು ನೇಮಕಗೊಂಡ ಸಿಬಿಐ ವಿಶೇಷ ನ್ಯಾಯಾಧೀಶರಾದ ಬಿ ಎಚ್ ಲೋಯಾ ಅವರು 2014 ರ ಡಿಸೆಂಬರ್ 1 ರಂದು ಹೃದಯಾಘಾತದಿಂದ ಮರಣಹೊಂದಿದ್ದರು.