ನನ್ನ ಹೇಳಿಕೆಯಲ್ಲಿ ಸಾಮಾಜಿಕ ಕಳಕಳಿಯಿತ್ತು: ಸೋನು ನಿಗಂ
ಆಜಾನ್ ಕುರಿತ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಖ್ಯಾತ ಗಾಯಕ ಸೋನು ನಿಗಂ ತಲೆ ಬೋಳಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ!
ಮುಂಬೈ, ಏಪ್ರಿಲ್ 19: ನನ್ನ ಹೇಳಿಕೆಯಲ್ಲಿದ್ದಿದ್ದು ಸಾಮಾಜಿಕ ಕಳಕಳಿಯೇ ಹೊರತು, ಧಾರ್ಮಿಕ ದುರುದ್ದೇಶವಲ್ಲ ಎಂದು ಖ್ಯಾತ ಗಾಯಕ ಸೋನು ನಿಗಂ ಹೇಳಿದ್ದಾರೆ. ಆಜಾನ್ (ಮುಸ್ಲಿಮರು ಬೆಳಗ್ಗೆ ಮಾಡುವ ನಮಾಜು) ಕುರಿತ ತಮ್ಮ ಹೇಳಿಕೆಯನ್ನು ತಲೆ ಬೋಳಿಸಿಕೊಳ್ಳುವ ಮೂಲಕ ಸಮರ್ಥಿಸಿಕೊಂಡ ಸೋನು ನಿಗಂ ಇಂದು ಪತ್ರಿಕಾ ಗೋಷ್ಠಿ ನಡೆಸಿದರು.
ತಾವು ಏಪ್ರಿಲ್ 17 ರಂದು ಮಾಡಿದ್ದ ಟ್ವೀಟ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ನನ್ನ ದೇಶದಲ್ಲಿ ನನಗನ್ನಿಸಿದ್ದನ್ನು ಹೇಳುವಷ್ಟು ಸ್ವಾತಂತ್ರ್ಯವೂ ಇಲ್ಲವೆ ಎಂದು ಪ್ರಶ್ನಿಸಿದರು. ನಾನು ಯಾವುದೇ ಮತವನ್ನಾಗಲೀ, ಯಾರದೇ ಧಾರ್ಮಿಕ ನಂಬಿಕೆಯನ್ನಾಗಲೀ ನೋಯಿಸುವ ಉದ್ದೇಶದಿಂದ ಆ ಹೇಳಿಕೆ ನೀಡಿರಲಿಲ್ಲ. ಬದಲಾಗಿ ಬೆಳಗ್ಗೆ ಬೆಳಗ್ಗೆ ಧ್ವನಿವರ್ಧಕ ಹಾಕುವುದರಿಂದ ನಮ್ಮ ಮಕ್ಕಳ ಮೇಲೆ ಯಾವ ಪರಿಣಾಮವಾಗುತ್ತದೆ? ಸಾಮಾಜಿಕ ಕಳಕಳಿಯಿಂದ ಈ ಮಾತನ್ನು ಹೇಳಿದ್ದೆ. ನನ್ನ ಮಾತುಗಳಿಂದ ಯಾರಿಗೇ ನೋವಾಗಿದ್ದರೂ ನಾನು ಪಶ್ಚಾತ್ತಾಪ ಪಡುತ್ತೇನೆ ಎಂದು ಅವರು ಹೇಳಿದ್ದಾರೆ.[ಹೇಳಿಕೆ ಸಮರ್ಥಿಸಿಕೊಳ್ಳಲು ತಲೆಬೋಳಿಸಿಕೊಂಡ ಸೋನು ನಿಗಂ]
ಜೊತೆಗೆ, ನಾನು ಎಡ ಅಥವಾ ಬಲ ಎಂದು ಯಾವುದೇ ಸಿದ್ಧಾಂತಕ್ಕೆ ಕಟ್ಟುಬಿದ್ದವನಲ್ಲ. ನಾನು ಈ ಎರಡರ ನಡುವಲ್ಲಿರುವವನು. ಹಾಗೆ ಹೇಳುವುದಕ್ಕೆ ಹೋದರೆ, ಈ ದೇಶದಲ್ಲಿ ಎಡ-ಬಲದ ಮಧ್ಯೆ ಇರುವವರೇ ಅಲ್ಪ ಸಂಖ್ಯಾತರು ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ಅವರು ಹೇಳಿದರು. ಅಷ್ಟಕ್ಕೂ ಏನೀ ವಿವಾದ? ಸೋನು ನಿಗಂ ಟ್ವೀಟ್ ನಲ್ಲಿ ಏನಿತ್ತು ಎಂಬೆಲ್ಲ ಮಾಹಿತಿ ಇಲ್ಲಿದೆ.[ನಾನು ಮುಸ್ಲಿಂ ಅಲ್ಲ ಅಜಾನ್ ಸಮಯಕ್ಕೆ ಏಕೆ ಎಚ್ಚರಗೊಳ್ಳಲಿ: ಸೋನು ನಿಗಮ್]
|
ನಾನ್ಯಾಕೆ ಆಜಾನ್ ಗೆ ಎಚ್ಚರಗೊಳ್ಳಲಿ?
'ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ನಾನು ಮುಸ್ಲಿಂ ಅಲ್ಲ, ನಾನ್ಯಾಕೆ ಆಜಾನ್ ಗೆ ಎಚ್ಚರಗೊಳ್ಳಲಿ? ಈ ಒತ್ತಾಯ ಪೂರ್ವಕ ಮತ ಪದ್ಧತಿ ಭಾರತದಲ್ಲಿ ಕೊನೆಗೊಳ್ಳಲಿದೆ. ಎಂದು ಸೋನು ನಿಗಂ ಟ್ವೀಟ್ ಮಾಡಿದ್ದರು.
|
ನಾನ್ಯಾಕೆ ಗದ್ದಲ ಶಸಹಿಸಲಿ?
"ಪ್ರವಾದಿ ಮೊಹಮ್ಮದ್ ಅವರು ಇಸ್ಲಾಂ ಧರ್ಮ ಸ್ಥಾಪಿಸಿದಾಗ ಎಲೆಕ್ಟ್ರಿಸಿಟಿ ಇರಲಿಲ್ಲ. ನಾನ್ಯಾಕೆ ಈ ಗದ್ದಲ ಸಹಿಸಲಿ? ಎಂದದು ಸಹ ಸೋನು ನಿಗಂ ಟ್ವೀಟ್ ಮಾಡಿದ್ದರು.
ಸೋನು ವಿರುದ್ಧ ಫತ್ವಾ
ಅವರ ಈ ಎರಡು ಟ್ವೀಟ್ ಗೆ ಮುಸ್ಲಿಂ ಸಮುದಾಯದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಸೋನು ನಿಗಂ ವಿರುದ್ಧ ಈ ಸಂಬಂಧ ಫತ್ವಾ ಹೊರಡಿಸಿದ್ದ ಸಯ್ಯದ್ ಶಾ ಅತಿಫ್ ಅಲಿ ಅಲ್ ಖೈದರಿ ಸೋನು ನಿಗಂ ತಲೆ ಬೋಳಿಸಿ, ಆತನ ಕೊರಳಿಗೆ ಹರಿದ ಚಪ್ಪಲಿ ಹಾರ ಹಾಕಿ ದೇಶದಲ್ಲಿ ಮೆರವಣಿಗೆ ಮಾಡಿಸಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಈ ಫತ್ವಾವನ್ನು ಸೋನು ನಿಗಂ 'ಗೂಂಡಾಗಿರಿ' ಎಂದು ಕರೆದಿದ್ದರು.
|
ಫತ್ವಾ ವಿರುದ್ಧ ಸೋನು ಸವಾಲು
ಇದಾದ ನಂತರ, "ಇಂದು ಮಧ್ಯಾಹ್ನ 2 ಗಂಟೆಗೆ ಫತ್ವಾ ಹೊರಡಿಸಿದವರು ನನ್ನ ಜಾಗಕ್ಕೆ ಬಂದು, ನನ್ನ ತಲೆ ಬೋಳಿಸಲಿ, 10 ಲಕ್ಷ ರೂಗಳನ್ನು ಸಿದ್ಧಪಡಿಸಿಕೊಳ್ಳಿ" ಎಂದು ಸೋನು ನಿಗಂ ಸವಾಲೆಸೆದಿದ್ದರು.
ಮಾತು ಉಳಿಸಿಕೊಂಡ ಸೋನು
ತಮ್ಮ ಮಾತನ್ನು ಸಮರ್ಥಿಸಿಕೊಂಡ ಸೋನು ನಿಗಂ ಇಂದು ತಲೆಬೋಳಿಸಿಕೊಂಡಿದ್ದಲ್ಲದೆ, ತಮ್ಮ ಮಾತು ಸಾಮಾಜಿಕ ಕಳಕಳಿಯದ್ದಾಗಿತ್ತೇ ವಿನಃ ಧಾರ್ಮಿಕ ದುರುದ್ದೇಶದ್ದಾಗಿರಲಿಲ್ಲ ಎಂದಿದ್ದಾರೆ. ಅದೂ ಅಲ್ಲದೆ, ಯಾವುದೇ ಮತದ ಜನರೂ ಬೆಳ್ಳಬೆಳಗ್ಗೆ ಧ್ವನಿವರ್ಧಕ ಉಪಯೋಗಿಸಿ ಮಕ್ಕಳ ಮತ್ತು ಎಲ್ಲರ ನಿದ್ದೆ ಹಾಳುಮಾಡುವುದನ್ನು ನಾನು ವಿರೋಧಿಸುತ್ತೇನೆ ಎಂದು ಸಹ ಅವರು ಹೇಳಿದ್ದಾರೆ.