ಧಾರ್ಮಿಕ ಭಾವನೆಗೆ ಧಕ್ಕೆ: ಅರ್ನಬ್ ಗೋಸ್ವಾಮಿಗೆ ಮತ್ತೆ ವಿಚಾರಣೆ
ಮುಂಬೈ, ಜೂನ್ 9: ರಿಪಬ್ಲಿಕ್ ಟಿವಿ ಸುದ್ದಿ ವಾಹಿನಿಯ ಮುಖ್ಯಸ್ಥ, ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥ ಕಾರ್ಯಕ್ರಮ ಪ್ರಸಾರ ಮಾಡಿದ ಆರೋಪ ಕೇಳಿ ಬಂದಿದೆ. ಮುಂಬೈ ಪೊಲೀಸರು ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದಾರೆ. ಈಗ ಮತ್ತೊಮ್ಮೆ ಅರ್ನಬ್ ಅವರನ್ನು ವಿಚಾರಣೆಗೊಳಪಡಿಸಲು ಮುಂದಾಗಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ಮಸೀದಿಯೊಂದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ವಾಹಿನಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮತ್ತು ಸುದ್ದಿ ವಾಹಿನಿಯ ಇತರ ಇಬ್ಬರು ಸಿಬ್ಬಂದಿ ವಿರುದ್ಧ ಪೈಧೋನಿ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ರಾಜಾ ಎಜುಕೇಷನ್ ವೆಲ್ಫೇರ್ ಸೊಸೈಟಿಯ ಕಾರ್ಯದರ್ಶಿ ಇರ್ಫಾನ್ ಅಬುಬಾಕರ್ ಶೇಖ್ ಎಂಬುವರು ದೂರು ನೀಡಿದ್ದಾರೆ. ದೂರು ಸ್ವೀಕರಿಸಿ, ಎಫ್ಐಅರ್ ಹಾಕಲಾಗಿದೆ.
ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ, ಅರ್ನಬ್ ವಿರುದ್ಧ ಎಫ್ಐಆರ್
ಮೊದಲ ಬಾರಿ ವಿಚಾರಣೆ ಸಂದರ್ಭದಲ್ಲಿ 12 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಈಗ ಬುಧವಾರ(ಜೂನ್ 10) ಬೆಳಗ್ಗೆ 11ಗಂಟೆಗೆ ಮತ್ತೊಮ್ಮೆ ವಿಚಾರಣೆ ನಡೆಸಲು ಮುಂದಾಗಿದ್ದು, ಪೊಲೀಸ್ ಇನ್ಸ್ ಪೆಕ್ಟರ್ ಸುರೇಶ್ ಗಾಯಕ್ವಾಡ್ ಎದುರು ಅರ್ನಬ್ ವಿಚಾರಣೆಗಾಗಿ ಕುಳಿತುಕೊಳ್ಳಬೇಕಾಗಿದೆ.
ಮುಸ್ಲಿಂ ಸಮುದಾಯದಿಂದಲೇ ಕೊರೊನಾ ಸೋಂಕು ಹೆಚ್ಚಾಗಿ ಹಬ್ಬುತ್ತಿದೆ ಎಂದು ಸಾಧಿಸಲು ಅರ್ನಬ್ ಹೊರಟಿರುವ ಹಾಗಿದೆ, ನೇರವಾಗಿ ಸಮುದಾಯವನ್ನು ದೂಷಿಸುತ್ತಾ, ಸಾಮರಸ್ಯ ಕದಡುವ ಕೆಲಸವನ್ನು ಮಾಡಿದ್ದಾರೆ ಎಂದು ದೂರಲಾಗಿದೆ. ದೂರಿನ ಅನ್ವಯ ಐಪಿಸಿ ಸೆಕ್ಷನ್ 153, 153ಎ, 295ಎ, 500, 505, 505 (2), 511 ಹಾಗೂ 120 ಬಿ ಅನ್ವಯ ಎಫ್ಐಆರ್ ಹಾಕಲಾಗಿದೆ.