ಮುಂಬೈ ಪೊಲೀಸರ ಕಸ್ಟಡಿಗೆ ಭೂಗತ ಪಾತಕಿ ರವಿ ಪೂಜಾರಿ
ಮುಂಬೈ, ನ.17: ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಪಾತಕ ಕೃತ್ಯಗಳನ್ನು ಎಸಗಿರುವ ಆರೋಪ ಹೊತ್ತುಕೊಂಡು ನಾಪತ್ತೆಯಾಗಿದ್ದ ಪಾತಕಿ ರವಿ ಪೂಜಾರಿಯನ್ನು ಸೆನೆಗಲ್ ದೇಶದಲ್ಲಿ ಬಂಧಿಸಿ ಭಾರತಕ್ಕೆ ಕರೆ ತಂದು ತಿಂಗಳುಗಳೇ ಕಳೆದಿವೆ. ಸದ್ಯ ಬೆಂಗಳೂರಿನ ಜೈಲಿನಲ್ಲಿದ್ದ ಪಾತಕಿ ರವಿಯನ್ನು ಮುಂಬೈ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಳ್ಳಲು ಅನುಮತಿ ಸಿಕ್ಕಿದೆ. ದೀಪಾವಳಿ ಹಬ್ಬದ ಬಳಿಕ ಪೂಜಾರಿಯನ್ನು ಮುಂಬೈಗೆ ಕರೆದೊಯ್ಯಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಬೆಂಗಳೂರಿನ 62ನೇ ಎಸಿಎಂಎಂ ನ್ಯಾಯಾಲಯದ ಜಡ್ಜ್ ಎಸ್.ಆರ್ ಮಾಣಿಕ್ಯ ಅವರು ರವಿ ಪೂಜಾರಿಯನ್ನು 10 ದಿನಗಳ ಮಟ್ಟಿಗೆ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರ ಕಸ್ಟಡಿಗೆ ನೀಡಿದೆ. ಡಿಸೆಂಬರ್ 10ರೊಳಗೆ ಮುಂಬೈಗೆ ಕರೆದೊಯ್ಯಬಹುದಾಗಿದೆ. 2015ರಲ್ಲಿ ಎಂಎನ್ಎಸ್ ಮುಖಂಡ, ಬಿಲ್ಡರ್ ರಾಜು ಪಾಟೀಲ್ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಪೂಜಾರಿಯನ್ನು ವಿಚಾರಣೆಗೊಳಪಡಿಸಲು ಮುಂಬೈ ಪೊಲೀಸರು ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ರವಿ ಪೂಜಾರಿ ವಿರುದ್ಧ 60ಕ್ಕೂ ಅಧಿಕ ಕೇಸುಗಳು ದಾಖಲಾಗಿವೆ. ಸುಮಾರು 13 ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು. ಮಂಗಳೂರಿನ ಪೊಲೀಸರು, RAW ಸಿಬ್ಬಂದಿ ಹಾಗೂ ಸೆನೆಗಲ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಪೂಜಾರಿಯನ್ನು ಬಂಧಿಸಲಾಗಿತ್ತು. ಮುಂಬೈನಲ್ಲಿ ರವಿ ಪೂಜಾರಿ ವಿರುದ್ಧ 49 ಕೇಸುಗಳಿದ್ದು, 11 ಬಾರಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು. 19 ಕೇಸಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
Recommended Video
ಕರ್ನಾಟಕದಲ್ಲಿ 60ಕ್ಕೂ ಅಧಿಕ ಪ್ರಕರಣಗಳು
ರಾಜ್ಯದಲ್ಲಿ 60ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರವಿ ಪೂಜಾರಿ, 1990ರಿಂದ ಭಾರತದಿಂದ ಪರಾರಿಯಾಗಿದ್ದ. ದುಬೈ ಸೇರಿದಂತೆ ಅನೇಕ ದೇಶಗಳಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ರವಿ ಪೂಜಾರಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ, ಮುಲ್ಕಿ, ಮೂಡಬಿದರೆ, ಕೊಣಾಜೆ, ಮೂಡಬಿದರೆ, ಕಾವೂರು, ಊರ್ವ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 39ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಕೂಡ ಆತನ ಮೇಲೆ ಸುಮಾರು 38 ಪ್ರಕರಣಗಳಿವೆ.
ಕೊವಿಡ್ 19 ಸುರಕ್ಷತೆ ಪಾಲಿಸಿ
ಮುಂಬೈಯಲ್ಲಿ ಕೊವಿಡ್ 19 ಸೋಂಕು ಹೆಚ್ಚಳವಾಗುತ್ತಿದೆ. ಹೀಗಾಗಿ ಮುಂಬೈ ಪೊಲೀಸರ ವಶಕ್ಕೆ ನೀಡುವುದು ಸೂಕ್ತವಲ್ಲ, ರವಿಗೆ ಪ್ರಾಣ ಬೆದರಿಕೆ ಇದೆ ಎಂದು ರವಿ ಪರ ವಕೀಲರು ಬೆಂಗಳೂರಿನ ಕೋರ್ಟಿನಲ್ಲಿ ವಾದಿಸಿದರು ಆದರೆ, ಜಡ್ಜ್ ಎಸ್.ಆರ್ ಮಾಣಿಕ್ಯ ಅವರು ಹೆಚ್ಚಿನ ಭದ್ರತೆ ನೀಡಿ ಕರೆದೊಯ್ಯುವಂತೆ ಪೊಲೀಸರಿಗೆ ಸೂಚಿಸಿದರು. ಜೊತೆಗೆ ಕೊರೊನಾ ಸುರಕ್ಷತೆಗೆ ಬೇಕಾದ ಅಗತ್ಯ ಕ್ರಮಗಳನ್ನು ಅನುಸರಿಸಲು ನಿರ್ದೇಶಿಸಿದರು.
ಬಿಲ್ಡರ್ ರಾಜು ಪಾಟೀಲ್ ಹತ್ಯೆ ಯತ್ನ ಕೇಸ್
2015ರ ಮಾರ್ಚ್ 12ರಂದು ಮಂಗಟ್ರಾಮ್ ಪೆಟ್ರೋಲ್ ಪಂಪ್ ಬಳಿ ಪೂಜಾರಿ ಗ್ಯಾಂಗಿನ ಅಭಿಶೇಕ್ ಶೈಲೇಂದ್ರ ಸಾಳ್ವಿ, ಭರತ್ ಹರಿ ಸಿಂಗ್ ವೇದ್, ಅನಿಕೇತ್ ಆನಂದ್ ಜಾಧವ್, ಎರಡು ದೇಸಿ ಪಿಸ್ತೂಲ್, 12 ಸಜೀವ ಕಟ್ರಿಡ್ಜ್ ಗಳನ್ನು ವಶಪಡಿಸಿಕೊಳ್ಳಲಾಯಿತು. ದೊಂಬಿವಿಲಿಯ ಬಿಲ್ಡರ್ ರಾಜು ಪಾಟೀಲ್ ಹತ್ಯೆಗೆ ಸ್ಕೆಚ್ ಹಾಕಿದ್ದರು ಎಂದು ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಮಲ್ಪೆ ಮೂಲದ ರವಿ ಪೂಜಾರಿ
ಮಲ್ಪೆ ಮೂಲದ ರವಿ ಪೂಜಾರಿ ಮುಂಬೈನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ. ಬಾಲಾ ಜ್ವಾಲೆಯನ್ನು ಹತ್ಯೆ ಮಾಡಿದ ಬಳಿಕ ಭೂಗತ ಲೋಕದಲ್ಲಿ ರವಿ ಪೂಜಾರಿ ಹೆಸರು ಬೆಳಕಿಗೆ ಬಂದಿತು. ಮುಂಬೈನಲ್ಲಿ ಪ್ರಭಾವಿಯಾಗಿದ್ದ ಛೋಟಾ ರಾಜನ್ ತಂಡದಲ್ಲಿ ರವಿ ಪೂಜಾರಿ ಗುರುತಿಸಿಕೊಂಡಿದ್ದ. 1990ರಲ್ಲಿ ದುಬೈಗೆ ಪರಾರಿಯಾಗಿದ್ದ ಆತ, ಬಾಲಿವುಡ್ ನಟರಾದ ಶಾರೂಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ನಿರ್ದೇಶಕ ಕರಣ್ ಜೋಹರ್, ನಿರ್ಮಾಪಕ ರಾಕೇಶ್ ರೋಷನ್ ಮುಂತಾದವರಿಗೆ ಅಲ್ಲಿಂದಲೇ ಜೀವ ಬೆದರಿಕೆ ಹಾಕಿದ್ದ.