ಆಡಿ ಗುದ್ದಿ ಇಬ್ಬರ ಸಾವಿಗೆ ಕಾರಣಳಾದ ಹೈಪ್ರೊಫೈಲ್ ವಕೀಲೆ
ಮುಂಬೈ, ಜೂ. 10: ಕುಡಿದ ಮತ್ತಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಕಾರು ಚಲಾಯಿಸಿದ ವಕೀಲೆ ಇಬ್ಬರ ಪ್ರಾಣ ಬಲಿ ತೆಗೆದುಕೊಂಡಿದ್ದಾರೆ. ಅಮಲಿನಲ್ಲಿದ್ದ ಮುಂಬೈ ನ ವಕೀಲೆ ಜಾಹ್ನವಿ ಗಡ್ಕರ್ ಮಂಗಳವಾರ ರಾತ್ರಿ ಒನ್ ವೇ ಯಲ್ಲಿ ಕಾರು ನುಗ್ಗಿಸಿದ ಪರಿಣಾಮ ಟ್ಯಾಕ್ಸಿವೊಂದಕ್ಕೆ ಡಿಕ್ಕಿಯಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.
ಸಿಬಿಎಸ್ ಸಿ ಯಲ್ಲಿ ಶೇ. 90 ಕ್ಕೂ ಅಧಿಕ ಸಾಧನೆ ಮಾಡಿದ ನಮನ್ ಸಬುವಾಲಾ (16) ತನ್ನ ಕುಟುಂಬದವರೊಂದಿಗೆ ಸಂತೋಷ ಕೂಟ ಮುಗಿಸಿ ಟ್ಯಾಕ್ಸಿಯಲ್ಲಿ ಮನೆಗೆ ಬರುತ್ತಿದ್ದಾಗ ಕುಡಿದ ಮತ್ತಿನಲ್ಲಿದ್ದ ವಕೀಲೆ ತನ್ನ ಆಡಿ ಕಾರು ಹಾಯಿಸಿದ್ದಾಳೆ. ಘಟನೆಯಲ್ಲಿ ಬಾಲಕನ ತಂದೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.[ಕುಡಿದು ವಾಹನ ಚಾಲನೆ, ಸೂಸೈಡ್ ಬಾಂಬರ್ ಗೆ ಸಮ]
ಕಾರು ಹಾಯಿಸಿದ ವಕೀಲೆ ಜಾಹ್ನವಿ ಗಡ್ಕರ್ (35) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ಸುಮಾರು ಆರು ಗಂಟೆಯ ನಂತರ ಪೊಲೀಸರಿಗೆ ಆಕೆಯ ಹೇಳಿಕೆ ದಾಖಲು ಮಾಡಿಕೊಳ್ಳಲು ಸಾಧ್ಯವಾಗಿದೆ. ಸಂಪೂರ್ಣ ಅಮಲಿನಲ್ಲಿದ್ದ ಆಕೆಗೆ ತಾನು ಮಾಡಿದ ಪಾಪ ಕೃತ್ಯ ಅರಿವಿಗೆ ಬಂದಿಲ್ಲ.
ಒನ್ ವೇ ಯಲ್ಲಿ ನುಗ್ಗಿದ ವಕೀಲೆಯ ಕಾರು ಮೊದಲಿಗೆ ಎರಡು ಬೈಕ್ ಗಳಿಗೆ ಡಿಕ್ಕಿಯಾಗುವುದರಲ್ಲಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ನ ಕಾನೂನು ವಿಭಾಗದ ಉಪಾಧ್ಯಕ್ಷೆಯಾಗಿ ಜಾಹ್ನವಿ ಕೆಲಸ ಮಾಡುತ್ತಿದ್ದರು.[ಸಲ್ಮಾನ್ ಖಾನ್ ಜೈಲು ತಪ್ಪಿಸಿಕೊಂಡಿದ್ದೇ ಒಂದು 'ಕಮಾಲ್']
ಘಟನೆಯಲ್ಲಿ ಬಾಲಕನ ತಂದೆ ಸಮಿಮ್ ಮತ್ತು ಕಾರು ಚಾಲಕ ಸಯ್ಯದ್ ಹುಸೇನ್ ಮೃತಪಟ್ಟಿದ್ದಾರೆ. ಜಾಹ್ನವಿ ಅವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸುಶಿಕ್ಷಿತ ವಕೀಲರೊಬ್ಬರು ಈ ರೀತಿ ಅವಘಡ ನಡೆಸಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.