ಮುಂಬೈನಲ್ಲಿ ಮಾತುಂಗ ಕರ್ನಾಟಕ ಸಂಘದ ಕಲೋತ್ಸವ
ಮುಂಬೈ,ಏ. 19: ಮಾತುಂಗ ಕರ್ನಾಟಕ ಸಂಘವು ಇತ್ತೀಚೆಗೆ ಮಹಾನಗರದಲ್ಲಿ ಸುಂದರ ಕಲೋತ್ಸವವನ್ನು ಆಯೋಜಿಸಿತ್ತು. ಪ್ರತಿಷ್ಠಿತ ಕಲಾಭಾರತಿ ವೇದಿಕೆಯಲ್ಲಿ ಭಕ್ತಿ ಪ್ರಾಧಾನ್ಯತೆಯ ಜತೆಗೆ ಹದವಾಗಿ ಬೆರೆತ ಸ್ವರತರಂಗಗಳು ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ನೃತ್ಯಾಂಜಲಿ ಫೈನ್ ಆರ್ಟ್ಸ್ ಅಕಾಡೆಮಿ- ಕಂಡೀವಳಿ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿತು.
ಸುಮಾರು 2 ಗಂಟೆಗಳ ಈ ನೃತ್ಯ-ನಾದ ನಿನಾದವು ಭಕ್ತಿ ವೈಭವಂ ಮತ್ತು ರುದ್ರ ನಾಟ್ಯಂನೊಂದಿಗೆ ಅರ್ಥಗರ್ಭಿತ ಆರಂಭ ಪಡೆಯಿತು. ಸುಖ ಕರತ ಮರಾಠಿ ಆರತಿ ಮತ್ತು ಶ್ರೀ ವಿಘ್ನರಾಜಂ ಹಾಡಿನೊಂದಿಗೆ ಕಿರಿಯ ಕಲಾವಿದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಕಾಡೆಮಿಯ ನಿರ್ದೇಶಕರೂ ಮತ್ತು ಗುರುಗಳಾದ ರೇವತಿ ಶ್ರೀನಿವಾಸ ರಾಘವನ್ ಕೊರಿಯಾಗ್ರಫಿ ಮಾಡಿದ್ದರು. ಸತೀಶ್ ಕೃಷ್ಣಮೂರ್ತಿ ಇದಕ್ಕೆ ಸಾಥ್ ನೀಡಿದ್ದರು. ಕೇರಳದ ಶ್ರೇದೇವ ರಾಜಗೋಪಾಲ್ ಅವರ ಹಾಡುಗಾರಿಕೆ, ಸತೀಶ್ ಕೃಷ್ಣಮೂರ್ತಿ ಅವರ ಮೃದಂಗ, ವಯೊಲಿನ್ ಶಿವಕುಮಾರ್ ಅನಂತರಾಮನ್, ಕೊಳಲು ಅತುಲ್ ಶರ್ಮಾ ಮತ್ತು ಘಟಂ ಶಕ್ತಿಧರಂ ಅವರ ಕೈಚಳಕದಲ್ಲಿ ಮೇಳೈಸಿತು. ಒಟ್ಟಾರೆಯಾಗಿ ಜನ ಮಂತ್ರಮುಗ್ಧರಾಗಿ ಕಾರ್ಯಕ್ರಮವನ್ನು ಆಸ್ವಾದಿಸಿದರು.