ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಎಲ್ಲಿ?
ಮುಂಬೈ, ಅಕ್ಟೋಬರ್ 01: ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಮುಜುಗರ ತಂದ 100 ಕೋಟಿ ರು ಹಫ್ತಾ ವಸೂಲಿ ಪ್ರಕರಣದ ಕೇಂದ್ರ ಬಿಂದುವಾಗಿದ್ದ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಎಲ್ಲಿದ್ದಾರೆ? ಎಂಬ ಪ್ರಶ್ನೆ ಎದ್ದಿದೆ. ಪರಮ್ ಬೀರ್ ಸಿಂಗ್ ಇರುವಿಕೆ ಬಗ್ಗೆ ಮಾಹಿತಿಯಿಲ್ಲ ಎಂದು ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್ ವಲ್ಸೆ ಹೇಳಿರುವುದು ಹಲವರ ಹುಬ್ಬೇರಿಸಿದೆ.
100 ಕೋಟಿ ಹಫ್ತಾ ವಸೂಲಿ ಮಾಡಲು ಇಲಾಖೆಗೆ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರಿಂದ ಸೂಚನೆ ಬಂದಿತ್ತು ಎಂದು ಗಂಭೀರ ಆರೋಪ ಮಾಡಿದ್ದ ಪರಮ್ ಬೀರ್ ಸಿಂಗ್, ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು. ಮಹಾರಾಷ್ಟ್ರ ವಿಕಾಸ್ ಅಘಾಡಿಯಲ್ಲೂ ಈ ಪತ್ರ ಸಂಚಲನ ಮೂಡಿಸಿತ್ತು.
ಲೆಟರ್ ಬಾಂಬ್: ಏನಿದು ಪರಮ್ ಬೀರ್ ಸಿಂಗ್ v/s ಅನಿಲ್ ದೇಶಮುಖ್ ಗಲಾಟೆ
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದಿರುವ ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶಮುಖ್ ಆರೋಪವನ್ನು ಅಲ್ಲಗೆಳೆದಿದ್ದರು. ಆದರೆ ನಂತರ ತಮ್ಮ ಸ್ಥಾನ ತೊರೆಯಬೇಕಾಯಿತು.
ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಪೋಟಕ ವಾಹನ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾವಣೆಗೊಂಡಿದ್ದ ಪರಮ್ ಬೀರ್ ಸಿಂಗ್ ಅವರನ್ನು ಹುಡುಕಲಾಗುತ್ತಿದೆ ಎಂದು ಗೃಹ ಸಚಿವ ದಿಲೀಪ್ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯಕ್ಕೂ ಈ ಬಗ್ಗೆ ತಿಳಿಸಲಾಗಿದ್ದು, ಅಗತ್ಯ ನೆರವು ಪಡೆದುಕೊಂಡು ಹುಡುಕಾಟ ಮುಂದುವರೆಸಲಾಗಿದೆ. ಸರ್ಕಾರದ ಅನುಮತಿ ಇಲ್ಲದೆ ಅಧಿಕಾರಿಯೊಬ್ಬರು ಈ ರೀತಿ ತಪ್ಪಿಸಿಕೊಂಡು ಹೋಗಲು ಹೇಗೆ ಸಾಧ್ಯ? ಲುಕ್ ಔಟ್ ನೋಟಿಸ್ ಕಳಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
ಅನಿಲ್ ದೇಶ್ಮುಖ್ ಅವರು ಪ್ರತಿ ತಿಂಗಳೂ ರೆಸ್ಟೋರೆಂಟ್, ಕ್ಲಬ್ ಸೇರಿದಂತೆ ವಿವಿಧ ಕಡೆಗಳಿಂದ 100 ಕೋಟಿ ರೂಪಾಯಿ ಸಂಗ್ರಹ ಮಾಡುವಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಸೂಚನೆ ನೀಡಿದ್ದರು ಎಂದು ಪರಮ್ ಬೀರ್ ಸಿಂಗ್ ಆರೋಪಿಸಿದ್ದರು.
ಮುಂಬೈ ಪೊಲೀಸ್ ಅಪರಾಧ ವಿಭಾಗದ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದ ಸಚಿನ್ ವಾಜೆ ಅವರನ್ನು ಅನಿಲ್ ದೇಶಮುಖ್ ಕಳೆದ ಕೆಲವು ತಿಂಗಳುಗಳಿಂದ ಅನೇಕ ಬಾರಿ ತಮ್ಮ ಅಧಿಕೃತ ನಿವಾಸಕ್ಕೆ ಕರೆಸಿಕೊಂಡು ತಮಗೆ ಹಣ ಸಂಗ್ರಹಿಸಿಕೊಡಲು ಸಹಾಯ ಮಾಡುವಂತೆ ಪದೇ ಪದೇ ಸೂಚಿಸುತ್ತಿದ್ದರು. ಈ ವಿಷಯವನ್ನು ನನಗೆ ವಾಜೆ ತಿಳಿಸಿದ್ದರು. ಇದರಿಂದ ಆಘಾತಕ್ಕೊಳಗಾದ ನಾನು ಪರಿಸ್ಥಿತಿಯನ್ನು ಹೇಗೆ ಎದುರಿಸುವುದೆಂದು ಯೋಚಿಸುತ್ತಿದ್ದೆ ಎಂದು ಸಿಂಗ್ ಪತ್ರದಲ್ಲಿ ವಿವರಿಸಿದ್ದರು.
ಮುಕೇಶ್ ಅಂಬಾನಿ ನಿವಾಸದ ಮುಂದೆ ಜಿಲೆಟಿನ್ ಸ್ಫೋಟಕ ಮತ್ತು ಬಾಂಬ್ ಬೆದರಿಕೆ ಪತ್ರ ಪತ್ತೆಯಾದ ಪ್ರಕರಣದಲ್ಲಿ ಎನ್ಐಎ ತನಿಖೆ ನಡೆಸುತ್ತಿದ್ದು, ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಬಂಧಿಸಿತ್ತು. ಇದರ ನಡುವೆಯೇ ಪರಮ್ ಬೀರ್ ಸಿಂಗ್ ವರ್ಗಾವಣೆ ಮತ್ತು ಭ್ರಷ್ಟಾಚಾರದ ಆರೋಪ ವಿವಾದ ಸೃಷ್ಟಿಸಿತ್ತು. ಹಫ್ತಾ ವಸೂಲಿ ಪ್ರಕರಣವನ್ನು ಎನ್ಐಎ ತನಿಖೆ ನಡೆಸುತ್ತಿದ್ದರೂ ದೋಷರೋಪಣ ಪಟ್ಟಿಯಲ್ಲಿ ಪರಮ್ ಬೀರ್ ಸಿಂಗ್ ಹೆಸರಿಲ್ಲ.
ಆದರೆ, ಕನಿಷ್ಠ ನಾಲ್ಕಾರು ಬೆದರಿಕೆ ಹಾಕಿ ಸುಲಿಗೆ ಮಾಡಿದ ಆರೋಪಗಳು ಸಿಂಗ್ ಅವರ ವಿರುದ್ಧ ಕೇಳಿ ಬಂದಿದೆ. ಇತ್ತೀಚೆಗೆ ಮಹಾರಾಷ್ಟ್ರ ಪೊಲೀಸ್ ಮುಖ್ಯಸ್ಥ ಸಂಜಯ್ ಪಾಂಡೆ ಅವರು ಸಿಂಗ್ ಹಾಗೂ ಇತರ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವ ಪ್ರಸ್ತಾಪವನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ, ಆದರೆ ಗೃಹ ಇಲಾಖೆಯು ಹೆಚ್ಚಿನ ವಿವರಗಳನ್ನು ಕೇಳಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.