ಸಾವರ್ಕರ್ಗೆ ಅವಮಾನ: ರಾಹುಲ್ ಗಾಂಧಿ ವಿರುದ್ಧ ತನಿಖೆಗೆ ಆದೇಶ
ಮುಂಬೈ, ಸೆಪ್ಟೆಂಬರ್ 18: ವೀರ್ ಸಾವರ್ಕರ್ ಕುರಿತು ಕೀಳುಮಟ್ಟದ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತನಿಖೆ ನಡೆಸುವಂತೆ ಮಹಾರಾಷ್ಟ್ರದ ಭೋಯಿವಾಡಾದ ನ್ಯಾಯಾಲಯವೊಂದು ಪೊಲೀಸರಿಗೆ ನಿರ್ದೇಶಿಸಿದೆ.
ರಾಹುಲ್ ಗಾಂಧಿ ಅವರ ವಿರುದ್ಧ ಆರೋಪದದ ಕುರಿತು ಸಿಆರ್ಪಿಸಿ ಸೆಕ್ಷನ್ 202ರ ಅಡಿಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.
ವೀರ ಸಾವರ್ಕರ್ ಕಾಂಗ್ರೆಸ್ ಕಣ್ಣಿಗೆ 'ದೇಶದ್ರೋಹಿ', ಅಕಟಕಟಾ!
'ರಾಹುಲ್ ಗಾಂಧಿ ಅವರ ಹೇಳಿಕೆಯು ನಮ್ಮ ಪೂರ್ವಜರಿಗೆ ಮಾಡಿರುವ ಅವಮಾನವಾಗಿದೆ. ಅಗತ್ಯಬಿದ್ದರೆ ತನಿಖೆಗಾಗಿ ರಾಹುಲ್ ಗಾಂಧಿ ಅವರನ್ನು ಕರೆಯಿಸಿಕೊಳ್ಳುವಂತೆಯೂ ದಾದರ್ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ' ಎಂದು ಸಾವರ್ಕರ್ ಅವರ ವಂಶಸ್ಥ ರಂಜಿತ್ಬ ಸಾವರ್ಕರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಫೆಬ್ರವರಿಯಲ್ಲಿ ನಡೆದ ಜಾಥಾವೊಂದರ ಸಂದರ್ಭದಲ್ಲಿ ಸಾವರ್ಕರ್ ಅವರನ್ನು ರಾಹುಲ್ ಗಾಂಧಿ 'ಹೇಡಿ' ಎಂದು ಟೀಕಿಸಿದ್ದರು. ಅಲ್ಲದೆ ಅವರ ವಿರುದ್ಧ ಕೀಳುಮಟ್ಟದ ಭಾಷೆಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು. ಕಳೆದ ವರ್ಷದ ನವೆಂಬರ್ನಲ್ಲಿ ಕೂಡ ರಾಹುಲ್ ಗಾಂಧಿ ಅವರು ಸಾವರ್ಕರ್ ಅವರ ವಿರುದ್ಧ ನಿಂದನಾರ್ಹ ಹೇಳಿಕೆ ನೀಡಿದ್ದಾರೆ ಎಂದು ದೂರಲಾಗಿತ್ತು.
ಅಂಡಮಾನ್ನ ಸೆಲ್ಯುಲಾರ್ ಜೈಲಿಗೆ ಕಳುಹಿಸಿದ ಬಳಿಕ ಸಾವರ್ಕರ್ ಅವರು ತಮ್ಮ ಜೀವ ಉಳಿಸಿಕೊಳ್ಳಲು ಬ್ರಿಟಿಷರ ಬಳಿ ಬೇಡಿಕೊಂಡಿದ್ದರು ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ಇದು ಸಾವರ್ಕರ್ ಕುಟುಂಬ ಮತ್ತು ಅಭಿಮಾನಿಗನ್ನು ಕೆರಳಿಸಿತ್ತು. ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಸಾವರ್ಕರ್ ಕುಟುಂಬದವರು ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದರು.