ಮೇ 16ರಂದು ಬಿಜೆಪಿಯಿಂದ 2000 ಕೆಜಿ ಲಡ್ಡು ವಿತರಣೆ
ಮುಂಬೈ, ಮೇ 14: ಚುನಾವಣೋತ್ತರ ಸಮೀಕ್ಷೆ ಹೊರಬೀಳುತ್ತಿದ್ದಂತೇ, ಬಿಜೆಪಿ ಚುನಾವಣಾ ಫಲಿತಾಂಶದ ದಿನವಾದ ಮೇ ಹದಿನಾರರಂದು ಎರಡು ಸಾವಿರ ಕೆಜಿ ಲಡ್ಡು ವಿತರಿಸಲು ಬಿಜೆಪಿ ಪೂರ್ವ ತಯಾರಿ ಮಾಡಿಕೊಂಡಿದೆ.
ದೇಶದ ಹದಿನೈದನೇ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಳ್ಳುವುದು ನಿಶ್ಚಿತ ಎನ್ನುವ ಅಚಲ ನಂಬಿಕೆಯಲ್ಲಿರುವ ಮುಂಬೈ ಬಿಜೆಪಿ ಘಟಕ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸಾರ್ವಜನಿಕರಿಗೆ ಸಿಹಿ ಹಂಚಲು ಮುಂದಾಗಿದೆ.
ಐತಿಹಾಸಿಕ ಸಿಪಿ ಟ್ಯಾಂಕ್ ಕ್ರಾಸಿಂಗ್ ನಲ್ಲಿ ಲಡ್ಡು ಮತ್ತು ಕೇಕನ್ನು ಸಾರ್ವಜನಿಕರಿಗೆ ಮತ್ತು ಬಿಜೆಪಿ ಕಾರ್ಯಕರ್ತರಿಗೆ ನಾವು ವಿತರಿಸಲಿದ್ದೇವೆ. ನಗರದ ಹಲವು ಕಡೆ ಚುನಾವಣಾ ಫಲಿತಾಂಶ ನೇರವಾಗಿ ವೀಕ್ಷಿಸಲು ಅನುಕೂಲವಾಗುವಂತೆ LCD Screen ಅಳವಡಿಸಲಾಗುತ್ತದೆ ಎಂದು ಮುಂಬೈ ಬಿಜೆಪಿ ಘಟಕದ ವಕ್ತಾರ ಅತುಲ್ ಶಾ ಹೇಳಿದ್ದಾರೆ. (ತಿಮ್ಮಪ್ಪನ ಲಾಡುಗಿಂತ ಡಾ.ರಾಜ್ ಲಾಡು ರುಚಿ)
ಇನ್ನೊಬ್ಬರ ಜೊತೆ ಸಂತೋಷ ಹಂಚಿಕೊಳ್ಳುವಾಗ ಲಡ್ಡು ವಿತರಿಸುವುದು ಭಾರತೀಯ ಸಂಸ್ಕೃತಿ. ಅದರಂತೆ, RSS ಹಿನ್ನಲೆಯ ಸ್ವಯಂಸೇವಕರು ಲಡ್ಡು ತಯಾರಿಸುವ ಕೆಲಸವನ್ನು ಈಗಾಗಲೇ ಆರಂಭಿಸಿದ್ದಾರೆ ಎಂದು ಶಾ ಹೇಳಿದ್ದಾರೆ.
ಇದು ಅತಿಯಾದ ಆತ್ಮವಿಶ್ವಾಸವಲ್ಲ, ಈ ಬಾರಿ ನಾವು ಗೆದ್ದೇ ಗೆಲ್ಲುತ್ತೇವೆ. ಹಾಗಾಗಿ ಫಲಿತಾಂಶದ ನಾಲ್ಕು ದಿನ ಮುನ್ನವೇ ಲಡ್ಡು ಮತ್ತು ಕೇಕ್ ತಯಾರಿಸಲು ಸೂಚಿಸಲಾಗಿದೆ ಎಂದು ಅತುಲ್ ಶಾ ವಿಶ್ವಾಸದ ಮಾತನ್ನಾಡಿದ್ದಾರೆ.
(ಮೂಲ: NDTV)